
ಮಾರುಕಟ್ಟೆಗೆ ಹೆಚ್ಚು ಫಸಲು ಬಂದಿದ್ದರಿಂದ ಟೊಮೆಟೊ ದರ ಪಾತಾಳಕ್ಕೆ ಕುಸಿದಿದೆ. 25 ಕೆಜಿ ಟ್ರೇ ಕೇವಲ 50 ರೂ. ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ 20-30 ರೂ. ಕೆಜಿ ಟೊಮೆಟೊ ಮಾರಾಟವಾಗುತ್ತಿದ್ದರು, ರೈತರಿಗೆ ಕೆಜಿ ಕೇವಲ 2 ರೂ. ಸಿಗುತ್ತಿದೆ. ರೈತರಿಗಾಗುತ್ತಿರುವ ಈ ಅನ್ಯಾಯ ತಿಳಿದಿದ್ದರೂ ಎಪಿಎಂಸಿ ಅಧಿಕಾರಿಗಳು ಮೌನವಾಗಿದ್ದಾರೆ. ಬದನೆಕಾಯಿ, ನುಗ್ಗೆಕಾಯಿ ಬೆಲೆಯೂ ಕುಸಿತವಾಗಿದೆ. ಒಂದು ಟ್ರೇ ಬದನೆಕಾಯಿಗೆ 50 ರಿಂದ 80 ರೂ ಬೆಲೆ ಇದೆ. ನುಗ್ಗೆಕಾಯಿ ಒಂದು ಕೆಜಿಗೆ 10 ರೂ ಮಾರಾಟವಾಗುತ್ತಿದೆ. ಇನ್ನು ಒಂದು ಟ್ರೇ ಟೊಮೆಟೊ ಮಾರುಕಟ್ಟೆಯಲ್ಲಿ 50 ರೂ. ಮಾರಾಟವಾಗುತ್ತಿದೆ. ರೈತರು ಎಕರೆಗೆ 30-50 ಸಾವಿರ ರೂ ಮಾಡಿರುವ ಖರ್ಚು ಕೂಡ ವಾಪಸ್ ಬರಿತ್ತಿಲ್ಲ. ಸಾಮಾನ್ಯ ಮಾರುಕಟ್ಟೆಯಲ್ಲಿ ಸಿಗುವ ಬೆಲೆಯೂ ಕಷ್ಟಪಟ್ಟು ಬೆಳೆದ ರೈತನಿಗೆ ಸಿಗುತ್ತಿಲ್ಲ. ಬದಲಾಗಿ ಇದು ಮಧ್ಯವರ್ತಿಗಳಿಗೆ ಸೇರುತ್ತಿದೆ. ಕೃಷಿ ಅವರಂಬಿಕ ದೇಶವಾದ ಭಾರತದಲ್ಲಿ, ರೈತರಿಗೆ ಹೆಚ್ಚಿನ ಮನ್ನಣೆ ನೀಡುವಂತಾಗಲಿ ಎಂಬುದು ಎಲ್ಲರ ಮನವಿಯಾದರೂ ಸಹ, ಅಧಿಕಾರಿಗಳು ಇದರ ಬಗ್ಗೆ ಮೌನದಿಂದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಒಂದು ಟ್ರೇ ನಲ್ಲಿ ಸುಮಾರು 20-25 ಕೆಜಿ ಟೊಮೆಟೊ ಇರುತ್ತೆ. 2 ರೂ ಕೆಜಿಯಂತೆ ಟೊಮೆಟೊ ಮಾರಾಟವಾಗುತ್ತಿದ್ದು, ಸರ್ಕಾರ ಹಾಗೂ ಎಪಿಎಂಸಿ ವರ್ತಕರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರುಕಟ್ಟೆಗೆ ಕ್ವಿಂಟಾಲ್ಗಟ್ಟಲೇ ಟೊಮೆಟೊ ತಂದರೂ ರೈತರ ಕೈ ಖಾಲಿ ಖಾಲಿ ಆಗಿದೆ.ಟೊಮೆಟೊ ಕಟಾವು ಮಾಡುವ ಕಾರ್ಮಿಕರಿಗೆ 300 ರೂ ದಿನ ಕೂಲಿ ಕೊಡಬೇಕು. ಮಾರುಕಟ್ಟೆಗೆ ಒಂದು ಟ್ರೇ ಹೇರಿಕೊಂಡು ಬಂದರೆ 30 ರೂ. ವಾಹನ ಬಾಡಿಗೆ ಇದೆ. ಜೊತೆಗೆ ದಲ್ಲಾಳಿಗೆ 10 ರೂ. ಕೊಡಬೇಕು. ಹಾಗಾಗಿ ಒಂದು ಟ್ರೇ ಗೆ ರೈತರಿಗೆ 10 ರೂ ಮಾತ್ರ ಸಿಗುತ್ತದೆ ಎಂದು ಕಿಡಿಕಾರಿದ್ದಾರೆ. ಆ 10 ರೂ ಟೀ, ತಿಂಡಿ ಮಾಡಿದರೆ ಖಾಲಿ ಕೈಯಲ್ಲಿ ಮನೆಗೆ ಹೋಗಬೇಕಾಗುತ್ತೆ ಎಂದು ಗೋಳಾಡಿದರು.

ಹಗಲು ರಾತ್ರಿ ಕಷ್ಟ ಪಟ್ಟು ಟೊಮೆಟೊ ಬೆಳೆದಿದ್ದೇವೆ. ಮಾರುಕಟ್ಟೆಗೆ ತಂದರೆ ಸೂಕ್ತ ದರ ಸಿಗುತ್ತಿಲ್ಲ ಹೀಗಾದರೆ ಕುಟುಂಬ ನಿರ್ವಹಣೆಗೆ ತುಂಬಾನೆ ತೊಂದರೆ ಆಗುತ್ತದೆ. ಸರ್ಕಾರ ಟೊಮೆಟೊ ಬೆಳೆದ ರೈತರ ನೆರವಿಗೆ ಬರಬೇಕು. ಸೂಕ್ತದ ದರ ನಿಗದಿ ಮಾಡಬೇಕೆಂದು ಒತ್ತಾಯಿಸಲಾಗಿದೆ. ಬೆಳೆದ ಬೆಳೆಗೆ ಸರಿಯಾದ ಫಲ ಸಿಗಲಿಲ್ಲವಾದರೆ ರೈತರು ಸಾಲದ ಮಡುವಿನಲ್ಲಿ ಬೀಳುತ್ತಾರೆ. ನಂತರ ತಮ್ಮ ಜೀವನದಲ್ಲಿ ಏರುಪೇರು ಆದಾಗ ಅವರು ಆತ್ಮಹತ್ಯೆಗೆ ಶರಣಾಗುತ್ತಾರೆ. ಈ ರೀತಿ ಆಗಬಾರದೆಂದರೆ ಸರ್ಕಾರ ಹಾಗೂ ಎಪಿಎಂಸಿ ವರ್ತಕರು ಈ ವಿಷಯದ ಬಗ್ಗೆ ಕೂಡಲೇ ಗಮನಹರಿಸಬೇಕಾದದು ಪ್ರಮುಖವಾಗಿದೆ.





