
ಕೌಟುಂಬಿಕ ಸಮಸ್ಯೆ ಕಾರಣದಿಂದ ಮೋನ್ ಬಾಬು ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಈಗ ಅವರು ಸೌಂದರ್ಯಾ ಸಾವಿನ ಪ್ರಕರಣದಲ್ಲಿ ಸಮಸ್ಯೆ ಎದುರಿಸಿದ್ದಾರೆ. ಆಂಧ್ರ ಪ್ರದೇಶದ ಖಮ್ಮಾಮ್ ಜಿಲ್ಲೆಯಲ್ಲಿ ಮೋಹನ್ ಬಾಬು ವಿರುದ್ಧ ದೂರು ದಾಖಲಾಗಿದೆ. ಸೌಂದರ್ಯಾ ಸಾವಿನ ಹಿಂದೆ ಮೋಹನ್ ಬಾಬು ಕೈವಾಡ ಇದೆ ಎಂದು ದೂರಲಾಗಿದೆ. ಚಿಟ್ಟಿಮಲ್ಲು ಎಂಬುವವರು ಈ ದೂರು ನೀಡಿದ್ದಾರೆ.‘ಸೌಂದರ್ಯಾ ಅವರದ್ದು ಆಕಸ್ಮಿಕ ಸಾವಲ್ಲ, ಇದೊಂದು ನಿಯೋಜಿತ ಕೊಲೆ. ಜಾಗದ ವಿಚಾರದಲ್ಲಿ ಈ ಕೊಲೆ ನಡೆದಿದೆ. ಸೌಂದರ್ಯಾ ಹಾಗೂ ಅವರ ಸಹೋದರ ಅಮರನಾಥ್ ಶಂಶಾಬಾದ್ನಲ್ಲಿರುವ ಆರು ಎಕರೆ ಜಾಗವನ್ನು ಹೊಂದಿದ್ದರು. ಇದನ್ನು ತಮಗೆ ಕೊಡುವಂತೆ ಮೋಹನ್ ಬಾಬು ಕೇಳುತ್ತಿದ್ದರು. ಇದನ್ನು ಮಾರಲು ಸೌಂದರ್ಯಾ ನಿರಾಕರಿಸಿದ್ದರು. ಇದರಿಂದ ಈ ಕೊಲೆ ನಡೆದಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸೌಂದರ್ಯಾ ಅವರು ಕನ್ನಡ ಸಿನಿಮಾಗಳನ್ನು ಮಾಡಿ ಗಮನ ಸೆಳೆದರು. ಅವರು ‘ಆಪ್ತಮಿತ್ರ’ ಚಿತ್ರದಲ್ಲಿ ಮಾಡಿದ ನಾಗವಲ್ಲಿ ಪಾತ್ರ ಯಾವಾಗಲೂ ನೆನಪಿನಲ್ಲಿ ಇರುವಂಥದ್ದು. ಅವರು ನಿಧನ ಹೊಂದುವಾಗ ಕೇವಲ 31 ವರ್ಷ ವಯಸ್ಸಾಗಿತ್ತು.

ಸೌಂದರ್ಯಾ ಅವರ ಸಾವಿನ ಬಳಿಕ ಈ ಜಾಗ ಮಾರುವಂತೆ ಅವರ ಕುಟುಂಬದವರಿಗೆ ಮೋಹನ್ ಬಾಬು ಒತ್ತಡ ಹೇರಿದ್ದಾರೆ ಎಂದು ದೂರನಲ್ಲಿ ತಿಳಿಸಲಾಗಿದೆ. ಆ ಬಳಿಕ ಮೋಹನ್ ಬಾಬು ಅವರು ಅಕ್ರಮವಾಗಿ ಈ ಜಾಗವನ್ನು ಪಡೆದುಕೊಂಡರು ಎನ್ನಲಾಗಿದೆ. ಸದ್ಯ ದೂರು ನೀಡಿದ ಚಿಟ್ಟಿಮಲ್ಲು ತಮಗೆ ಪೊಲೀಸ್ ರಕ್ಷಣೆ ಬೇಕು ಎಂದು ಕೋರಿದ್ದಾರೆ. ಅಲ್ಲದೆ ಈ ಜಾಗವನ್ನು ಸರ್ಕಾರದವರು ವಶಕ್ಕೆ ಪಡೆದು ಅಗತ್ಯ ಇರುವ ವೃದ್ಧಾಶ್ರಮದವರಿಗೆ ನೀಡುವಂತೆ ಕೋರಿದ್ದಾರೆ.





