ಅಂತ್ಯಕ್ರಿಯೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸ್ಪೀಕರ್ ಓಂ ಬಿರ್ಲಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ರಿಂದ ಹಿಡಿದು ಪ್ರಮುಖ ಗಣ್ಯರು, ಕೈ ನಾಯಕರು, ವಿದೇಶಿ ರಾಜತಾಂತ್ರಿಕರು ಪಾಲ್ಗೊಂಡರು. ಮೂರು ಸೇನಾಪಡೆಯಿಂದ ಗೌರವ ಸಮರ್ಪಣೆ ಮಾಡಲಾಯಿತು.
ಡಾ. ಮನಮೋಹನ್ ಸಿಂಗ್ ಅಂತಿಮ ನಮನದಲ್ಲಿ ಗಣ್ಯರು ಭಾಗಿ

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನದ ಕುರಿತು ಅಧ್ಯಕ್ಷ ಜೋ ಬೈಡನ್ ಸಂತಾಪ ಸೂಚಿಸಿದ್ದು ಅವರ ಹೇಳಿಕೆಯನ್ನು ಶ್ವೇತಭವನ ಬಿಡುಗಡೆ ಮಾಡಿದೆ. “ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಕಳೆದುಕೊಂಡ ದುಃಖದಲ್ಲಿ ಜಿಲ್(ಬೈಡನ್ ಪತ್ನಿ) ಮತ್ತು ನಾನು ಭಾರತದ ಜನರೊಂದಿಗೆ ನಾವು ಸೇರಿದ್ದೇವೆ. ಜಿಲ್ ಮತ್ತು ನಾನು ಮಾಜಿ ಪ್ರಥಮ ಮಹಿಳೆ ಗುರುಶರಣ್ ಕೌರ್, ಅವರ ಮೂವರು ಮಕ್ಕಳು ಮತ್ತು ಭಾರತದ ಎಲ್ಲಾ ಜನರಿಗೆ ನಮ್ಮ ಆಳವಾದ ಸಂತಾಪವನ್ನು ಸೂಚಿಸುತ್ತೇವೆ” ಎಂದಿದ್ದಾರೆ. ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರವನ್ನು ದೆಹಲಿಯ ಮೋತಿಲಾಲ್ ನೆಹರು ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಇಂದು ಬೆಳಗ್ಗೆ 8 ಗಂಟೆಗೆ ಅಲ್ಲಿಂದ ಎಐಸಿಸಿ ಕೇಂದ್ರ ಕಚೇರಿಗೆ ಕರೆದೊಯ್ಯಲಾಯಿತು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕ ದರ್ಶನಕ್ಕಾಗಿ ಬೆಳಗ್ಗೆ 9.30ರವರೆಗೆ ಅಲ್ಲಿಯೇ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ತದನಂತರ ಅಲ್ಲಿಂದ ಮಾಜಿ ಪ್ರಧಾನಿಯ ಅಂತಿಮ ಯಾತ್ರೆ ಆರಂಭವಾಯಿತು. ಯಾತ್ರೆಯಲ್ಲಿ ರಸ್ತೆಯುದ್ದಕ್ಕೂ ಅಭಿಮಾನಿಗಳು ಪಾಲ್ಗೊಂಡಿದ್ದು, ಲಕ್ಷಾಂತರ ಜನರು ಭಾಗಿಯಾದರು.





