
ಶಬಾನಾ ಪಟಾಸು ನವಲಗುಂದ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ. ಶಬಾನಾ ಚೆನ್ನಾಗಿ ಓದಬೇಕು ಅನ್ನೋದು ಶಬಾನಾ ತಂದೆ ನೂರಹಸನ ಅವರ ಆಸೆಯಾಗಿತ್ತು. ಆದರೆ ಕಳೆದ ಗುರುವಾರ ರಾತ್ರಿ ಏಕಾಏಕಿ ಹೊಟ್ಟೆ ನೋವು ಬಂದು ಮೃತಪಟ್ಟಿದ್ದಾರೆ.ಶುಕ್ರವಾರ ಬೆಳಗ್ಗೆ ಮಗಳಿಗೆ SSLC ಪರೀಕ್ಷೆ ಇತ್ತು. ಗುರುವಾರ ರಾತ್ರಿ ತಂದೆ ನೂರಹಸನ ಮಗಳೇ ನಾನೇ ನಿನ್ನನ್ನು ಬೆಳಗ್ಗೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಬಿಡುವುದಾಗಿ ಹೇಳಿದ್ದರು. ಆದರೆ ಗುರುವಾರ ರಾತ್ರಿಯೇ ವಿದ್ಯಾರ್ಥಿನಿ ತಂದೆ ಪ್ರಾಣ ಬಿಟ್ಟಿದ್ದಾರೆ.ತಂದೆಯ ಸಾವಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಶಬಾನಾ ಪಟಾಸು SSLC ಪರೀಕ್ಷೆಗೆ ಗೈರಾಗುತ್ತಿದ್ದರು. ಇದನ್ನು ತಿಳಿದ ಶಿಕ್ಷಕರು ವಿದ್ಯಾರ್ಥಿನಿಯ ಮನ ಒಲಿಸಿದ್ದಾರೆ. ಶಿಕ್ಷಕರ ಮನವಿ, ತಂದೆಯ ಆಸೆ ಈಡೇರಿಸಲು ನಿರ್ಧರಿಸಿದ ಶಬಾನಾ ಪರೀಕ್ಷೆಗೆ ಹಾಜರಾಗಿದ್ದಾರೆ.
ಈ ವಿಷಯ ತಿಳಿದ ಶಿಕ್ಷಣ ಇಲಾಖೆ ವಿದ್ಯಾರ್ಥಿನಿಗೆ ವಾಹನ ವ್ಯವಸ್ಥೆಯ ಅನುಕೂಲ ಮಾಡಿಕೊಟ್ಟಿದೆ. ತಂದೆಯ ಪ್ರೇರಣೆಯಿಂದಲೇ ಶಾಲೆಗೆ ಬರುತ್ತಿರುವುದಾಗಿ ಹೇಳಿರುವ ವಿದ್ಯಾರ್ಥಿನಿ ದುಃಖದಲ್ಲೂ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಗಮನ ಸೆಳೆದಿದ್ದಾರೆ.





