ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಇರ್ಷಾದ್ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಸ್ವಲ್ಪ ಸಮಯದ ನಂತರ ಗೋಣಿಚೀಲದಲ್ಲಿ ಶವದೊಂದಿಗೆ ಹೊರಗೆ ಬರುತ್ತಿರುವುದು ಕಂಡುಬಂದಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗುವ ಯತ್ನವನ್ನು ವಿರೋಧಿಸಿದ ಇರ್ಷಾದ್ ಬಾಲಕಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದಾಗ, ಪಕ್ಕದ ಮನೆಯ ಇರ್ಷಾದ್ ಎಂಬಾತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿರುವುದು ದೃಢಪಟ್ಟಿದೆ. ಆಕೆ ತಡೆದ ಕಾರಣ ಕಲ್ಲಿನಿಂದ ಆಕೆಯನ್ನು ಕೊಂದು ಹಾಕಿದ್ದಾನೆ. ಶವವನ್ನು ಗೋಣಿಚೀಲದಲ್ಲಿ ಹಾಕಿ ಶಾಲೆಯ ಮುಂದೆ ಎಸೆದಿದ್ದಾನೆ ಎಂದು ವಾರಾಣಸಿ ಕಾಶಿ ವಲಯದ ಡಿಸಿಪಿ ಗೌರವ್ ಬನ್ಸ್ವಾಲ್ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಬಾಲಕಿಯ ತಂದೆ ದಿವ್ಯಾಂಗರಾಗಿದ್ದು, ಆಟೋ ಚಾಲನೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬಾಲಕಿ ಸಂಜೆ 6.30ರ ಸುಮಾರಿಗೆ ಸಮೀಪದ ಅಂಗಡಿಗೆ ಸೊಳ್ಳೆಬತ್ತಿಯನ್ನು ತರಲು ಹೋಗಿದ್ದಳು. ಆಕೆ ಮನೆಗೆ ಬಾರದೇ ಇದ್ದಾಗ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಎಷ್ಟೇ ಹುಡುಕಿದರೂ ಸಿಗದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಹತ್ತಿರದ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡಿದ ನಂತರ, ಪೊಲೀಸರು ಶಂಕಿತ ಇರ್ಷಾದ್ನನ್ನು ಪತ್ತೆ ಮಾಡಿದ್ದಾರೆ. ಆತನನ್ನು ಬಂಧಿಸುವ ಕಾರ್ಯಾಚರಣೆ ವೇಳೆ ಇರ್ಷಾದ್ ಪೊಲೀಸ್ ತಂಡದತ್ತ ಗುಂಡು ಹಾರಿಸಿದ್ದಾನೆ. ಪ್ರತಿಯಾಗಿ ಪೊಲೀಸರೂ ಗುಂಡು ಹಾರಿಸಿದ್ದು, ಈ ವೇಳೆ ಇರ್ಷಾದ್ ಕಾಲಿಗೆ ಗುಂಡು ತಗುಲಿದೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.





