ಮೈಸೂರು, ಜು.7, 2026: ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಅಶ್ಲೀಲ ಕಮೆಂಟ್ ಹಾಕಿದ ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದರು, ಪೊಲೀಸರು ಈವರೆಗೂ ಯಾವುದೇ ಕ್ರಮಕೈಗೊಳ್ಳದ ಬಗ್ಗೆ ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ ಅವರ ಪತ್ನಿ ವರ್ಷ ಹರೀಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧವಾಗಿ ಅಶ್ಲೀಲ ಕಮೆಂಟ್ ಹಾಕಿರುವ ಕುರಿತಂತೆ ಮೈಸೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, 10 ದಿನಗಳಾಗಿದೆ. ಆದರೂ ಆರೋಪಿ ಪತ್ತೆ ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದು, ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆಯಲು ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಅಗತ್ಯವಿದೆ. ಇವುಗಳ ಆಧಾರದಲ್ಲಿ ವಿಕೃತಿ ಮೆರೆದಿರುವವರನ್ನು ಪತ್ತೆ ಹಚ್ಚಲು ಸಾಧ್ಯವಿದೆ. ಹೀಗಿದ್ದರು ದೂರು ನೀಡಿ ಹತ್ತು ದಿನಗಳಾದದರೂ ಆರೋಪಿಯ ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾಗದಿರುವುದು ನಿಜಕ್ಕೂ ಕಳವಳಕಾರಿಯಾಗಿದೆ ಎಂದರು.
ದೂರು ನೀಡಿದರು ಆರೋಪಿ ವಿರುದ್ಧ ಕ್ರಮವಹಿಸದಿರುವ ಪೊಲೀಸರ ನಡೆಯನ್ನು ಗಮನಿಸಿದರೆ ಅಶ್ಲೀಲ ಕಮೆಂಟ್ ಹಾಕಿದ ಆರೋಪಿ ತುಂಬಾ ಪ್ರಭಾವಿ ಇರಬಹುದಾ? ಪ್ರಭಾವ ಬಳಸಿ ಪೊಲೀಸ್ ಇಲಾಖೆ ಮೇಲೆ ಒತ್ತಡ ಹೇರಿರಬಹುದೇ? ಎಂಬ ಕುರಿತಂತೆ ಅನುಮಾನ ವ್ಯಕ್ತವಾಗುತ್ತಿದೆ. ಈ ಪ್ರಕರಣ ನನ್ನ ಮನಸ್ಸಿಗೆ ತುಂಬಾ ಆಘಾತವಾಗಿದೆ, ನೋವಾಗಿದ್ದು, ಪೊಲೀಸರು ಯಾವುದೇ ಒತ್ತಡಗಳು ಅಥವಾ ಪ್ರಭಾವಕ್ಕೊಳಗಾಗದೆ, ಆರೋಪಿಯನ್ನು ಬಂಧಿಸಿ ಕ್ರಮಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.
ಈ ವಿಷಯದಲ್ಲಿ ನನಗೆ ಯಾರ ಮೇಲೂ ಅನುಮಾನವಿಲ್ಲ, ನಾನು ಹುಣಸೂರು ಕ್ಷೇತ್ರದ ಜನರೊಂದಿಗೆ ಹೆಚ್ಚಿನ ಒಡನಾಡ ಹೊಂದಿದ್ದೇನೆ. ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲು ತೆರಳುತ್ತೇನೆ. ಜನರು ಕೂಡ ನನ್ನನ್ನು ಪ್ರೀತಿ, ಅಭಿಮಾನದಿಂದ ಕಾಣುತ್ತಾರೆ. ಇದನ್ನು ಸಹಿಸಲಾರದವರು ಈ ರೀತಿ ಮಾಡಿರಬಹುದು. ನಾನು ರಾಜಕೀಯ ಹಿನ್ನೆಲೆ ಇರುವ ಕುಟುಂಬದಿಂದ ಬಂದಿದ್ದೇನೆ. ಆದರೂ ರಾಜಕೀಯದ ಬಗ್ಗೆ ನನಗೆ ಆಸಕ್ತಿಯಿಲ್ಲ ಮತ್ತು ಮುಂದೆ ಚುನಾವಣೆಗೆ ಸ್ಪರ್ಧಿಸುವ ಉದ್ದೇಶವೂ ನನಗಿಲ್ಲ ಎಂದರು.




