ತುಂತುರು ಮಳೆ ಹಿಮದ ನಡುವೆ ಚಾಮುಂಡಿ ಬೆಟ್ಟದಲ್ಲಿ ಹೂವೂಗಳು ತಳಿರು ತೋರಣ, ದೀಪಾಲಂಕಾರ ಭಕ್ತರನ್ನ ಸ್ವಾಗತಿಸುತ್ತಿದ್ದು, ನಾಡ ಅಧಿದೇವಿ ಚಾಮುಂಡೇಶ್ವರಿ ತಾಯಿಗೆ ಮುಂಜಾನೆ ತಾಯಿಗೆ ಪಂಚಾಮೃತ ಅಭಿಷೇಕ, ಅರ್ಚನೆ ಮಾಡಲಾಯಿತು. ತಾಯಿ ಚಾಮುಂಡೇಶ್ವರಿ ಹೂವಿನ ನಡುವೆ ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಾ ಭಕ್ತರಿಗೆ ದರ್ಶನ ನೀಡಿದ್ದು, ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನಲೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಖಾಸಗಿ ವಾಹನಗಳ ಪ್ರವೇಶ ನಿರ್ಭಂಧಿಸಲಾಗಿದ್ದು ಕೆ.ಎಸ್.ಆರ್.ಟಿ.ಸಿ ವತಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಲಲಿತಮಹಲ್ ಪ್ಯಾಲೇಸ್ ಆವರಣದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ನಾಡದೇವಿಯ ದರ್ಶನ ಪಡೆಯಲು ಜಿಲ್ಲಾಡಳಿತದ ವತಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ 300ರೂ , 2 ಸಾವಿರ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. 2000 ಟಿಕೆಟ್ ಪಡೆದವರಿಗೆ ಲಲಿತ ಮಹಲ್ ನಿಂದ ಬೆಟ್ಟಕ್ಕೆ ಎಸಿ ಬಸ್ ನಲ್ಲಿ ಕರೆದುಕೊಂಡು ಹೋಗಿ ಬೆಟ್ಟದಲ್ಲಿ ನೇರವಾಗಿ ದರ್ಶನ ಮಾಡಿ ನಂತರ ಪ್ರಸಾದ ರೂಪದಲ್ಲಿ ಚಾಮುಂಡೇಶ್ವರಿ ವಿಗ್ರಹ, ಲಾಡು, ಕುಡಿಯುವ ನೀರಿನ ಬಾಟಲ್ ,ಒಂದು ಬ್ಯಾಗ್ ವಿತರಿಸಲಾಗುತ್ತಿದೆ.

ಚಾಮುಂಡೇಶ್ವರಿ ದೇವಸ್ಥಾನದಲ್ಲಿ2025ನೇ ಸಾಲಿನಲ್ಲಿ ನಡೆಯುವ ನಾಲ್ಕು ಆಷಾಢ ಶುಕ್ರವಾರಗಳು ಮತ್ತು ಅಮ್ಮನವರ ಜನ್ಮೋತ್ಸವದ ಪ್ರಯುಕ್ತ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ.
ಜೂ.27ರಂದು ಮೊದಲನೇ ಆಷಾಢ ಶುಕ್ರವಾರ, ಜು.4ರಂದು ಎರಡನೇ ಆಷಾಢ ಶುಕ್ರವಾರ, 11ರಂದು ಮೂರನೇ ಆಷಾಢ ಶುಕ್ರವಾರ ಹಾಗೂ 17ರಂದು ಅಮ್ಮನವರ ಜನ್ಮೋತ್ಸವ ಮತ್ತು ಜು.18ರಂದು ನಾಲ್ಕನೇ ಆಷಾಢ ಶುಕ್ರವಾರಗಳಂದು ದೇವಸ್ಥಾನಕ್ಕೆ ಲಕ್ಷಾಂತರ ಭಧಿಕ್ತರು ಆಗಮಿಸುವುದರಿಂದ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ ಎಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಭಕ್ತರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿಯಿಂದ 49 ವ್ಯವಸ್ಥೆ
ಆಷಾಢ ಶುಕ್ರವಾರದ ನಿಮಿತ್ತ ಕೆಎಸ್ಆರ್ಟಿಸಿ ನಗರ ಘಟಕವು ಭಕ್ತರ ಅನುಕೂಲಕ್ಕಾಗಿ 49 ಬಸ್ಗಳನ್ನು ಬಿಡಲು ನಿರ್ಧರಿಸಿದೆ.
ಆಷಾಢ ಶುಕ್ರವಾರ ಸೇರಿದಂತೆ ಶನಿವಾರ, ಭಾನುವಾರವೂ ಬೆಟ್ಟಕ್ಕೆ ಖಾಸಗಿ ವಾಹನಗಳನ್ನು ನಿಷೇಧಿಸಲಾಗಿದೆ. ಭಕ್ತರು ಲಲಿಮಹಲ್ ಪ್ಯಾಲೇಸ್ ಹೋಟೆಲ್ ಬಳಿಯಿಂದ ಉಚಿತವಾಗಿ ಕೆಎಸ್ಆರ್ಟಿಸಿ ಬಸ್ ಸೌಲಭ್ಯವನ್ನು ಕಲ್ಪಿಸಿದೆ. ಭಕ್ತರು ತಮ್ಮ ಸ್ವಂತ ವಾಹನಗಳನ್ನು ಇಲ್ಲಿ ನಿಲ್ಲಿಸಿ ಕೆಎಸ್ಆರ್ಟಿಸಿ ಬಸ್ಗಳನ್ನು ಬಳಸಿಕೊಂಡು ಬೆಟ್ಟಕ್ಕೆ ಹೋಗಿ ತಾಯಿ ಚಾಮುಂಡೇಶ್ವರಿ ದರ್ಶನವನ್ನು ಪಡೆಯಬಹುದು.
ಶನಿವಾರ, ಭಾನುವಾರ ಟಿಕೆಟ್ ಕಡ್ಡಾಯ
ಪ್ರತಿ ಆಷಾಢ ಶುಕ್ರವಾರದಂದು ಪುರುಷರು ಹಾಗೂ ಮಹಿಳೆಯರಿಗೆ ಲಲಿತಮಹಲ್ನಿಂದ ಚಾಮುಂಡಿಬೆಟ್ಟದವರೆಗೆ ಉಚಿತವಾಗಿ ಕೆಎಸ್ಆರ್ಟಿಸಿ ಬಸ್ ಸೇವೆ ಒದಗಿಸಲಾಗಿದೆ. ಆದರೆ, ಶನಿವಾರ, ಭಾನುವಾರ ಪುರುಷರು ಬಸ್ ಟಿಕೆಟ್ ಕಡ್ಡಾಯವಾಗಿ ಪಡೆಯಬೇಕು.
ಮಹಿಳೆಯರಿಗೆ ‘ಶಕ್ತಿ’ ಯೋಜನೆಯಡಿ ಉಚಿತ ಪ್ರಯಾಣ ಅನ್ವಯವಾಗಲಿದೆ. 2 ಸಾವಿರ ಟಿಕೆಟ್ ಖರೀದಿಸುವ ಭಕ್ತರಿಗೆ ಬಸ್ ಟಿಕೆಟ್ ಇರುವುದಿಲ್ಲ. ಧರ್ಮದರ್ಶನ ಬಸ್ನಲ್ಲಿಹೋಗುವವರನ್ನು ಬೆಟ್ಟದ ಮೇಲಿರುವ ಮಲ್ಟಿಲೆವೆಲ್ ಪಾರ್ಕಿಂಗ್ನಲ್ಲಿಇಳಿಸಲಾಗುತ್ತದೆ. 300 ರೂ. ಟಿಕೆಟ್ ಖರೀದಿಸಿದವರನ್ನು ಬೆಟ್ಟದ ಬಸ್ ನಿಲ್ದಾಣದಲ್ಲಿ ಇಳಿಸಲಾಗುತ್ತದೆ. 2 ಸಾವಿರ ರೂ. ಟಿಕೆಟ್ ಪಡೆದವರನ್ನು ಮಹಿಷಾಸುರ ಪ್ರತಿಮೆ ಬಳಿ ನಿಲುಗಡೆ ಮಾಡಲಾಗುತ್ತದೆ. ಮೂವರು ಇಲ್ಲಿಂದ ತೆರಳಲು ಪ್ರತ್ಯೇಕ ಸರದಿ ಸಾಲು ವ್ಯವಸ್ಥೆ ಮಾಡಲಾಗಿದೆ.

ಸೇವಾ ಶುಲ್ಕ ಏರಿಕೆ ವಿರುದ್ಧ ಪ್ರತಿಭಟನೆ
ಚಾಮುಂಡೇಶ್ವರಿ ದೇವಾಲಯದಲ್ಲಿ ಸೇವಾ ಶುಲ್ಕಗಳ ಏಕಾಏಕಿ ಏರಿಕೆ ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಜತೆಗೆ ಚಾಮುಂಡಿ ಬೆಟ್ಟದಲ್ಲಿಸ್ಥಳೀಯ ನಿವಾಸಿಗಳಿಗೆ ಕುಡಿಯುವ ನೀರು, ಆಷಾಢದಲ್ಲಿಆಗಮಿಸುವ ಭಕ್ತಾದಿಗಳಿಗೆ ಸಮರ್ಪಕ ಮೂಲ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಲಾಯಿತು.
‘‘ನಾಡದೇವತೆ ಚಾಮುಂಡೇಶ್ವರಿ ಬೆಟ್ಟದಲ್ಲಿ ಸರಿಯಾಗಿ ಕುಡಿಯುವ ನೀರೇ ಇಲ್ಲ. ಐದಾರು ದಿನಗಳಿಗೊಮ್ಮೆ ಚಾಮುಂಡಿ ಬೆಟ್ಟಕ್ಕೆ ನೀರನ್ನು ಬಿಡಲಾಗುತ್ತಿದೆ. ದಿನಾಲೂ ಕುಡಿವ ನೀರಿಲ್ಲದೆ, ಅಲ್ಲಿನ ಸ್ಥಳೀಯ ನಿವಾಸಿಗಳು ಪರದಾಡುತ್ತಿದ್ದಾರೆ. ಬಹಳ ವರ್ಷಗಳ ಹಿಂದೆಯೇ ಕುಡಿಯುವ ನೀರಿಗಾಗಿ ಬೆಟ್ಟಕ್ಕೆ ಹೊಸ ಪೈಪ್ ಲೈನ್ ಅನ್ನು ಹಾಕಲು ಕಾಮಗಾರಿ ಶುರು ಮಾಡಲಾಗಿತ್ತು. ಆದರೆ, ಇನ್ನೂ ಪೂರ್ಣವಾಗಿ ಕೆಲಸ ಮುಗಿದಿಲ್ಲದ ಪರಿಣಾಮ ಬೆಟ್ಟದಲ್ಲಿನೀರಿಗಾಗಿ ಹಾಹಾಕಾರ ಉಂಟಾಗುತ್ತಿದೆ. ಉತ್ತ ಆದಾಯ ಗಳಿಸುವ ಬೆಟ್ಟದಲ್ಲಿ ಬೆಟ್ಟಕ್ಕೆ ಸಮರ್ಪಕವಾಗಿ ಪ್ರತಿ ನಿತ್ಯ ನೀರು ಒದಗಿಸಬೇಕು,’’ ಎಂದು ಒತ್ತಾಯಿಸಿದರು.
‘‘ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರಿಗೆ ಸರಿಯಾದ ಮೂಲ ಸೌಕರ್ಯಗಳೇ ಇಲ್ಲ. ಕುಡಿಯಲು ಶುಚಿಯಾದ ಉಚಿತ ನೀರಿನ ವ್ಯವಸ್ಥೆಯಾಗಲಿ, ಸುಸಜ್ಜಿತ ಶೌಚಾಲಯಗಳಾಗಲಿ, ಹೊರಗಿನಿಂದ ಬರುವವರಿಗೆ ಮಡಿಯಾಗಿ ದೇವರ ದರ್ಶನ ಮಾಡಲು ಸ್ನಾನದ ಗೃಹಗಳಾಗಲಿ ಇಲ್ಲವೇ ಇಲ್ಲ. ಈಗಿರುವ ಒಂದೇ ಶೌಚಾಲಯದಲ್ಲಿ ವಸೂಲಿ ಮಾಡಲಾಗುತ್ತಿದೆ. ಇದು ಉಚಿತ ಒದಗಿಸಬೇಕು,’’ ಎಂದು ಆಗ್ರಹಿಸಿದರು.




