
ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಪ್ರಾಜೆಕ್ಟ್ನಲ್ಲಿ ಸೀತಾದೇವಿ ಪಾತ್ರವನ್ನು ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ನೀಡಲಾಗಿತ್ತು. ಈ ಅಧಿಕೃತ ಮಾಹಿತಿಯನ್ನು ಇತ್ತೀಚೆಗೆ ಸ್ವತಃ ನಟಿ ಬಹಿರಂಗಪಡಿಸಿದ್ದರು. ಆದ್ರೆ ತಮ್ಮ ಹೇಳಿಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ರಾವಣ ಪಾತ್ರಧಾರಿ ಯಶ್ ಕಾರಣದಿಂದಾಗಿ ನಾನು ಆ ಸಿನಿಮಾ ಬಿಡಲಿಲ್ಲ. ಅಂತಿಮವಾಗಿ, ಆ ಪಾತ್ರಕ್ಕೆ ಸಾಯಿ ಪಲ್ಲವಿ ಅವರು ಆಯ್ಕೆ ಆದ್ರು ಎಂದು ಸ್ಪಷ್ಟನೆ ನೀಡಿದ್ದಾರೆ.

”ದೊಡ್ಡ ಗೊಂದಲ ಆಗಿದೆ. ನಾನು ಯಾಕಾದರೂ ಆ ಬಗ್ಗೆ ಮಾತನಾಡಿದೆ ಎಂದೆನಿಸಿದೆ. ರಾಮಾಯಣ ಸಿನಿಮಾದ ಆಡಿಷನ್ಗೆ ನನ್ನನ್ನು ಕರೆದಿದ್ದರು. ಹೊಸ ಪ್ರತಿಭೆಯನ್ನು ಅಷ್ಟು ದೊಡ್ಡ ಪಾತ್ರಕ್ಕೆ ಪರಿಗಣಿಸಿರೋದೇ ದೊಡ್ಡ ವಿಷಯ. ನಾನು ಬಹಳ ಖುಷಿಯಿಂದಲೇ ಹೋಗಿದ್ದೆ. ಆಡಿಷನ್ ಕೂಡಾ ಕೊಟ್ಟೆ. ಅದಕ್ಕೂ ಮುನ್ನ ಸಾಕಷ್ಟು ನಟಿಯರು ಆಡಿಷನ್ ಕೊಟ್ಟಿದ್ದಾರೋ, ಇಲ್ಲವೋ ಎಂಬುದು ಗೊತ್ತಿಲ್ಲ. ಫೈನಲಿ, ನಟಿ ಸಾಯಿ ಪಲ್ಲವಿ ಅವರು ಸೆಲೆಕ್ಟ್ ಆಗಿದ್ದಾರೆ.

ಅದು ನನಗೆ ಬಹಳ ಖುಷಿ ಕೊಟ್ಟಿದೆ. ಬ್ರಿಲಿಯಂಟ್ ಛಾಯ್ಸ್. ನನಗೂ ಅವರೆಂದರೆ ಬಹಳ ಇಷ್ಟ. ಅವರು ಸ್ಫೂರ್ತಿ. ಈ ಉದ್ಯಮದಲ್ಲಿ ಮಹಿಳೆಯರು ಎಷ್ಟು ಚೆನ್ನಾಗಿದ್ದಾರೆ, ಎಷ್ಟು ಎಲಿಗೆಂಟ್ ಆಗಿದ್ದಾರೆ ಎಂಬುದನ್ನು ಅವರನ್ನು ನೋಡಿ ಕಲಿಯಬೇಕು. ಅವರ ಪ್ರತಿಭೆ, ನಟನೆ ಬಗ್ಗೆ ಹೇಳೋ ಹಾಗೇ ಇಲ್ಲ. ಗ್ರೇಟ್ ಚಾಯ್ಸ್” – ಶ್ರೀನಿಧಿ ಶೆಟ್ಟಿ.

ಆಡಿಷನ್ ಕೊಟ್ಟಿದ್ದು ನಿಜ, ಆದ್ರೆ ಸೆಲೆಕ್ಟ್ ಆಗ್ಲಿಲ್ಲ: ಮಾತು ಮುಂದುವರಿಸಿದ ನಟಿ, ಯಶ್ ಕಾರಣದಿಂದ ನಾನು ಈ ಸಿನಿಮಾ ಬಿಟ್ಟೆ ಎಂದು ನನ್ನ ಹೇಳಿಕೆಗಳನ್ನು ತಿರುಚಲಾಗಿದೆ. ಸೀತಾ ಪಾತ್ರ ನನಗೆ ಮೊದಲು ಬಂದಿದ್ದು, ಆದ್ರೆ ನಾನು ರಿಜೆಕ್ಟ್ ಮಾಡಿದ್ದೇನೆ ಎಂದೆಲ್ಲಾ ವೈರಲ್ ಆಗಿದೆ. ಆ ಸಂದರ್ಶನದಲ್ಲಿ ಕ್ಯಾಶುವಲ್ ಆಗಿ ನನ್ನ ಅನಿಸಿಕೆ ಹಂಚಿಕೊಂಡಿದ್ದೆ. ಕೆಜಿಎಫ್ ಸಿನಿಮಾ ಆಗಷ್ಟೇ ತೆರೆಕಂಡು ಸೂಪರ್ ಹಿಟ್ ಆಗಿತ್ತು.

ರಾಕಿ ರೀನಾ ಪಾತ್ರಗಳು ಎಲ್ಲರಿಗೂ ಇಷ್ಟ ಆಗಿದ್ದವು. ರಾಮಾಯಣದಲ್ಲಿ ರಾವಣ ಪಾತ್ರವನ್ನು ಯಶ್ ನಿರ್ವಹಿಸಲಿದ್ದಾರೆ ಎಂಬ ಮಾತೂ ಕೂಡಾ ಕೇಳಿಬಂತು. ಹಾಗಾಗಿ, ನಾನು ಕ್ಯಾಶುವಲ್ ಆಗಿ ರಾವಣ ಸೀತೆ ವಿರುದ್ಧ ಪಾತ್ರಗಳಲ್ಲವೇ? ಎಂದು ಅನಿಸಿಕೆ ಹಂಚಿಕೊಂಡಿದ್ದೆಯಷ್ಟೇ. ಆದ್ರೆ ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ಯಶ್ ರಾವಣ ರೋಲ್ ನಿರ್ವಹಿಸುತ್ತಿರೋದ್ರಿಂದ ಶ್ರೀನಿಧಿ ಸೀತಾ ಪಾತ್ರ ಬಿಟ್ಟರು ಎಂದೆಲ್ಲಾ ಹಬ್ಬಿಸಲಾಗಿದೆ. ನಾನ್ಯಾರು ಸೀತಾ ಪಾತ್ರವನ್ನು ತಿರಸ್ಕರಿಸಲು? ಸೀತೆ ಬಹಳ ದೊಡ್ಡ ಪಾತ್ರ. ನಾನದನ್ನು ತಿರಸ್ಕರಿಸಿಲ್ಲ. ಆಡಿಷನ್ ಕೊಟ್ಟಿದ್ದು ನಿಜ. ಆದ್ರೆ ಸೆಲೆಕ್ಟ್ ಆಗ್ಲಿಲ್ಲ. ಕೊನೆಗೆ ಸಾಯಿ ಪಲ್ಲವಿ ಅವರು ಸೆಲೆಕ್ಟ್ ಆದ್ರು. ಗೊಂದಲ ಹರಡಿಸಬೇಡಿ ಎಂದು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡರು.
ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ರಣ್ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ರಾಮ ಸೀತೆಯಾಗಿ, ಯಶ್ ಅವರು ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ.




