ಮೈಸೂರು : ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 1ರಂದು ಮೈಸೂರಿಗೆ ಆಗಮಿಸಿ, ವಿವಿಧ ಸಾರ್ವಜನಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಭೇಟಿಯ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತಾ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ಸವದಲ್ಲಿ ಭಾಗವಹಿಸಲಿರುವ ರಾಷ್ಟ್ರಪತಿ,
ಸಾಂಸ್ಕೃತಿಕ ನಗರಿ ಮೈಸೂರು ಪಟ್ಟಣದ ಮಾನಸಗಂಗೋತ್ರಿಯಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ 60ನೇ ವಾರ್ಷಿಕೋತ್ಸವ (ವಜ್ರಮಹೋತ್ಸವ) ಕಾರ್ಯಕ್ರಮದಲ್ಲಿ ಸೆ.1 ರಂದು ಸಂಜೆ 4 ಗಂಟೆಗೆ ರಾಷ್ಟ್ರಪತಿ ಮುರ್ಮು ಭಾಗವಹಿಸಲಿದ್ದಾರೆ. ಅವರು ಅದೇ ದಿನ ನವದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿ, ನಗರದ ರಾಡಿಸನ್ ಬ್ಲೂ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಕಾರ್ಯಕ್ರಮದ ನಂತರ, ಅವರು ಚಾಮುಂಡಿಬೆಟ್ಟಕ್ಕೆ ತೆರಳಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವರು.
ಸೆ.2ರಂದು ಮೈಸೂರು ಅರಮನೆ ಭೇಟಿ,
ಮರುದಿನವಾದ ಸೆಪ್ಟೆಂಬರ್ 2ರಂದು ಬೆಳಿಗ್ಗೆ 8.30ಕ್ಕೆ ಮೈಸೂರು ಅರಮನೆಗೆ ಭೇಟಿ ನೀಡಲಿರುವ ರಾಷ್ಟ್ರಪತಿಗಳನ್ನು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಆಹ್ವಾನಿಸಿದ್ದಾರೆ.
ಅಂದು ಬೆಳಿಗ್ಗೆ 11.30ರವರೆಗೆ ಮೈಸೂರು ಅರಮನೆಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇನ್ನು, ಅಂದು ಸಂಜೆ ನಡೆಯಬೇಕಿದ್ದ ಧ್ವನಿ–ಬೆಳಕು (Sound and Light) ಕಾರ್ಯಕ್ರಮವನ್ನು ಕೂಡ ರದ್ದುಪಡಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಮತ್ತು ಅರಮನೆ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದ್ದಾರೆ.
ಕಾರ್ಯಕ್ರಮಗಳೆಲ್ಲಾ ಮುಗಿದ ಬಳಿಕ ರಾಷ್ಟ್ರಪತಿ ಮುರ್ಮು ಅವರು ಮೈಸೂರು ವಿಮಾನ ನಿಲ್ದಾಣದಿಂದ ದೆಹಲಿಗೆ ಹಿಂದಿರುಗಲಿದ್ದಾರೆ.
ನಗರದಲ್ಲಿ ಭದ್ರತಾ ಕ್ರಮಗಳು ಗಟ್ಟಿಯಾಗಿ: ವಾಹನ ಸಂಚಾರಕ್ಕೆ ತಾತ್ಕಾಲಿಕ ನಿಯಮ,
ರಾಷ್ಟ್ರಪತಿಯವರು ಸಂಚರಿಸಲಿರುವ ಎಲ್ಲಾ ಮಾರ್ಗಗಳ ಮೇಲೆ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೈಸೂರು ವಿಮಾನ ನಿಲ್ದಾಣದಿಂದ ರಾಡಿಸನ್ ಬ್ಲೂ ಹೋಟೆಲ್, ಹೋಟೆಲ್ನಿಂದ ವಾಕ್ ಮತ್ತು ಶ್ರವಣ ಸಂಸ್ಥೆ, ಅಲ್ಲಿಂದ ಮೈಸೂರು ಅರಮನೆ ಮತ್ತು ಚಾಮುಂಡಿಬೆಟ್ಟದವರೆಗೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗುವುದು.
ಕೆಎಸ್ಆರ್ಟಿಸಿ ಬಸ್ಗಳ ಸಂಚಾರಕ್ಕೂ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಈ ಕುರಿತು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಸಂಚಾರ ವಿಭಾಗದ ಎಸಿಪಿ ಶಿವಶಂಕರ್ ತಿಳಿಸಿದರು.
ರಸ್ತೆ ಸುಧಾರಣೆ ಮತ್ತು ಸ್ವಚ್ಛತಾ ಚಟುವಟಿಕೆಗಳಿಗೆ ವೇಗ,
ರಾಷ್ಟ್ರಪತಿಯವರ ಪ್ರವಾಸದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳ ಹೊಂಡಗಳನ್ನು ಮುಚ್ಚಿ ಡಾಂಬರೀಕರಣ, ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಗಿಡಗಳನ್ನು ತೆಗೆಯುವ, ರಸ್ತೆ ಒತ್ತುವರಿ ತೆರವು, ಹಾಗೂ ಸ್ವಚ್ಛತಾ ಕಾರ್ಯ ಭರದಿಂದ ಸಾಗುತ್ತಿವೆ.
ನಗರಪಾಲಿಕೆ ಮುಂಭಾಗ, ಕಾಡಾ ಕಚೇರಿ, ಬಸವೇಶ್ವರ ವೃತ್ತ ಹಾಗೂ ಜೆಎಸ್ಎಸ್ ವಿದ್ಯಾಪೀಠದ ಮುಂಭಾಗದ ರಸ್ತೆಗಳ ಸುಧಾರಣಾ ಕೆಲಸಗಳು ಜೋರುಗೊಳ್ಳುತ್ತಿವೆ.





