ನಗರತ್ ಪೇಟೆಯಲ್ಲಿಬೆಳಗ್ಗಿನ ಜಾವ ಮೂರು ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿ ಘೋರ ದುರಂತ ನಡೆದಿದೆ. ದುರ್ಘಟನೆಯಲ್ಲಿ ಓರ್ವ ಪ್ರಾಣ ಕಳೆದುಕೊಂಡಿರೋದು ದೃಢಪಟ್ಟಿದ್ದು, ಇನ್ನೂ ಮೂವರು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿರುವ ಅನುಮಾನ ವ್ಯಕ್ತವಾಗಿದೆ.
ಮದನ್ ಸಿಂಗ್ ಎಂಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. ಮನೆಯಲ್ಲಿ ಪತಿ, ಪತ್ನಿ ಸೇರಿ ಇಬ್ಬರು ಮಕ್ಕಳಿದ್ದರು ಎಂಬ ಮಾಹಿತಿ ಇದೆ. 8 ಹಾಗೂ 5 ವರ್ಷದ ಇಬ್ಬರು ಮಕ್ಕಳಿದ್ದರು. ಉಳಿದ ಮೂವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ರಾಜಸ್ಥಾನ ಮೂಲದ ಮದನ್ ಸಿಂಗ್ ಎಂಬಾತ, ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದ ಈ ಪ್ಲಾಸ್ಟಿಕ್ ಮ್ಯಾಟ್ ಮಳಿಗೆಗಳನ್ನು ನೋಡಿಕೊಳ್ತಿದ್ದರು. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ನೆಲಮಹಡಿ ಸೇರಿ ಎರಡು ಮಹಡಿಯಲ್ಲಿ ಪ್ಲಾಸ್ಟಿಕ್ ಗೋಡಾನ್ ಇತ್ತು. ಮೂರನೇ ಮಹಡಿಯಲ್ಲಿ ಇವರ ಕುಟುಂಬ ವಾಸವಿತ್ತು. ನಾಲ್ಕನೇ ಮಹಡಿಯಲ್ಲಿ ಚಿಕ್ಕದಾದ ರೂಮ್ ಇದ್ದ ಬಗ್ಗೆ ಮಾಹಿತಿ ಇದೆ.







