ಮೈಸೂರು : “ಒಮ್ಮೆ ವೀರೇಂದ್ರ ಹೆಗ್ಗಡೆ ಪರ, ಮತ್ತೊಮ್ಮೆ ಸೌಜನ್ಯ ಪರ – ಹಾಗಾದರೆ, ಬಿಜೆಪಿ ನಿಜವಾಗಿ ಯಾರ ಪರ?” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೀಜೇಪಿಗೆ ತೀವ್ರ ಪ್ರಶ್ನೆ ಎಸೆದಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಧರ್ಮಸ್ಥಳ ಪ್ರಕರಣ, ಸೌಜನ್ಯ ಕೇಸ್ ಮತ್ತು ಬಿಜೆಪಿ ಮುಖಂಡರ ಹೇಳಿಕೆಗಳ ಬಗ್ಗೆ ಸ್ಪಷ್ಟವಾಗಿ ತಿರುಗೇಟು ನೀಡಿದರು.
ವೀರೇಂದ್ರ ಹೆಗ್ಗಡೆ ಮತ್ತು ಸೌಜನ್ಯ: ಬಿಪೇಜಿಯ ದ್ವಂದ್ವ ಮಾತು
ಸಿಎಂ ಸಿದ್ದರಾಮಯ್ಯ ಅವರ ಟೀಕೆ:
“ಬಿಜೆಪಿಯವರು ಒಮ್ಮೆ ವೀರೇಂದ್ರ ಹೆಗ್ಗಡೆ ಪರ ಮಾತಾಡುತ್ತಾರೆ. ಮತ್ತೊಮ್ಮೆ ಸೌಜನ್ಯ ಪರ ನಿಲ್ಲುತ್ತಾರೆ. ಈ ಎರಡು ವಿರುದ್ಧ ನಿಲುವುಗಳೇ ತೋರಿಸುತ್ತವೆ, ಅವರ ನಿಜ ಉದ್ದೇಶ ರಾಜಕೀಯ ಲಾಭವೆಂದು.”
ಎಸ್ಐಟಿ ವಿರುದ್ಧದ ವಿರೋಧಕ್ಕೆ ತೀವ್ರ ಪ್ರಶ್ನೆ
ಸಿದ್ದರಾಮಯ್ಯ ಎಸ್ಐಟಿ ತನಿಖೆ ಬಗ್ಗೆ ಹೇಳಿದರು:
“ಧರ್ಮಸ್ಥಳ ಪ್ರಕರಣವನ್ನು ಎಸ್ಐಟಿ ತನಿಖೆ ನಡೆಸುತ್ತಿದೆ. ಈ ತನಿಖೆಯನ್ನು ಹೆಗ್ಗಡೆಯವರು ಸ್ವತಃ ಸ್ವಾಗತಿಸಿದ್ದಾರೆ. ಆದರೆ ಬಿಜೆಪಿ ಈಗ ಯಾಕೆ ವಿರೋಧಿಸುತ್ತಿದೆ? ಅವರನ್ನು ಸುಮ್ಮನೆ ಪ್ರಶ್ನಿಸಬೇಕು.”
“ಭಾರತೀಯ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲವೇ? ಅದಕ್ಕಾಗಿ ಎನ್ಐಎ ಬೇಕಾ ಎಂಬಂತೆ ಕೇಳುತ್ತಿದ್ದಾರೆ. ಇದು ಭಯೋತ್ಪಾದನಾ ಪ್ರಕರಣವಲ್ಲ.”
ವಿದೇಶಿ ಫಂಡಿಂಗ್ ಆರೋಪಕ್ಕೆ ತಿರುಗೇಟು
“ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಿಂದ ಹಣ ಬಂದಿದೆ ಎಂಬ ಆರೋಪವನ್ನು ಬಿಜೆಪಿ ಮಾಡುತ್ತಿದೆ. ಹಾಗಾದರೆ ಬಿಜೆಪಿಗೆ ಹಣ ಎಲ್ಲಿಂದ ಬರುತ್ತಿದೆ? ಯಾರು ಕೊಡುತ್ತಿದ್ದಾರೆ ಅವರಿಗಷ್ಟೆಲ್ಲಾ ಕಾರ್ಯಕ್ರಮ ನಡೆಸಲು?” ಎಂದು ಸಿಎಂ ಪ್ರಶ್ನಿಸಿದರು.
ಸೌಜನ್ಯ ಪ್ರಕರಣ: “ಪುನ: ತನಿಖೆ ಬೇಕೆಂಬ ನಿರ್ಧಾರ ತಾಯಿ ಕೈಯಲ್ಲಿ”
ಸಿದ್ದರಾಮಯ್ಯ ಸ್ಪಷ್ಟನೆ ನೀಡಿದಾಗ,
“ಸಿಬಿಐ ವರದಿ ಕೇಂದ್ರ ಸರಕಾರದ ಅಧೀನದಲ್ಲಿದೆ. ಈಗ ಸುಪ್ರೀಂ ಕೋರ್ಟ್ಗೆ ಹೋಗಿ ಅದರ ವಿರುದ್ಧ ಮಾತಾಡುತ್ತಿರುವವರು ಯಾರು?”
“ಮರು ತನಿಖೆ ಬೇಕಾದರೆ, ತಾಯಿ ನ್ಯಾಯಾಲಯಕ್ಕೆ ಹೋಗಲಿ. ಸರ್ಕಾರದಾಗಿ ನಾವು ಯಾವುದೇ ಅಡ್ಡಿಪಡಿಕೆಗೆ ಹೋಗಿಲ್ಲ.”
ಚಿನ್ನಯ್ಯ ವಿಚಾರ – ಅಶೋಕ್ ಮತ್ತು ಸುನೀಲ್ ಕುಮಾರ್ ವಿರುದ್ಧ ಟೀಕೆ
“ಚಿನ್ನಯ್ಯನನ್ನು ಕಾಂಗ್ರೆಸ್ ಕರೆತಂದಿದೆ ಎಂಬ ಆರೋಪ ಬಿಜೆಪಿ ಮಾಡುತ್ತಿದೆ. ಆದರೆ ವಿಧಾನಸಭೆಯಲ್ಲಿ ಚರ್ಚೆ ಸಮಯದಲ್ಲಿ ಅವರ ಮಾತು ಬೇರೆ ಇತ್ತು. ದಿನಕ್ಕೊಂದು ಹೇಳಿಕೆ ಕೊಡದಿರಿ. ಅಸತ್ಯದ ಮೇಲೆ ಚರ್ಚೆ ಮಾಡಿದರೆ ಹೀಗೆ ಆಗುತ್ತದೆ,” ಎಂದು ಸಿಎಂ ಟೀಕಿಸಿದರು.
“ಸತ್ಯ ಮುಚ್ಚುವುದು ಅಪರಾಧ” – ಮಹಿಳೆಯೊಬ್ಬರ ದೂರಿನ ಕುರಿತು ಪ್ರತಿಕ್ರಿಯೆ
“12 ವರ್ಷಗಳ ಅಪಹರಣದ ಬಗ್ಗೆ ಕಣ್ಣಾರೆ ನೋಡಿದ್ದೆವೆಂದು ಈಗ ಹೇಳುತ್ತಿರುವ ಮಹಿಳೆ, ಸಿಬಿಐ ತನಿಖೆ ವೇಳೆ ಏಕೆ ಈ ಮಾಹಿತಿ ನೀಡಲಿಲ್ಲ? ಸತ್ಯ ಗೊತ್ತಿದ್ದಾಗ ಅದನ್ನು ಮುಚ್ಚಿಡುವುದು ಅಪರಾಧವಾಗಿದೆ,” ಎಂದು ಹೇಳಿದರು.
ದಸರಾ ಉದ್ಘಾಟನೆ, ಕನ್ನಡ ಪ್ರೀತಿ ಮತ್ತು ಧರ್ಮ ರಾಜಕಾರಣ
ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಪ್ರಶ್ನೆಗಳನ್ನು ಎಸೆದರು:
“ದಿವಾನ್ ಮಿರ್ಜಾ ಇಸ್ಮಾಯಿಲ್ ಅವರನ್ನು ಮಹಾರಾಜರು ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆ ಮಾಡುತ್ತಿದ್ದರು. ಆ ಸಮಯದಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿ ಎಲ್ಲಿ ಹೋದರು?”
“ಕವಿ ನಿಸಾರ್ ಅಹಮದ್ ಅವರು 2017ರಲ್ಲಿ ದಸರಾ ಉದ್ಘಾಟಿಸಿದರು. ಆಗ ಯಾರಿಗೂ ತೊಂದರೆ ಆಗಲಿಲ್ಲ.”
“ಹಿಂದೂಗಳಾಗಿ ಹಬ್ಬ ಆಚರಿಸು” ಎಂಬುವುದು ತರವಲ್ಲ
ಬಾನು ಮುಷ್ತಾಕ್ ಅವರನ್ನು ಉದ್ಘಾಟಕರಾಗಿ ಆಯ್ಕೆ ಮಾಡಿರುವ ವಿಚಾರದಲ್ಲಿ ಬಿಜೆಪಿ ವಾದಿಸಿರುವ “ಕುಂಕುಮ ಹಾಕಿಕೊಳ್ಳಿ” ಹೇಳಿಕೆಗೆ ಸಿಎಂ ಕಠಿಣ ತಿರುಗೇಟು ನೀಡಿದರು:
“ಬಾನು ಮುಷ್ತಾಕ್ ಮುಸ್ಲಿಂ ಮಹಿಳೆ. ಅವರು ಕುಂಕುಮ ಹಾಕುವುದು ಅವರ ಧರ್ಮಕ್ಕೆ ಅನುಗುಣವಲ್ಲ. ನಾಡಹಬ್ಬವಾಗಿ ದಸರಾ ಆಚರಿಸುತ್ತೇವೆ. ಬೇರೆ ಧರ್ಮದವರನ್ನು ಆಹ್ವಾನಿಸಿದರೆ, ಹಿಂದೂ ಪದ್ಧತಿ ಅನುಸರಿಸಬೇಕು ಎನ್ನುವುದು ತರವಲ್ಲ.”
“ಬಾನು ಅವರ ವಿರುದ್ಧ ಯಾವುದೇ ಫತ್ವಾ ಹೊರಡಿಸಿಲ್ಲ ಎಂಬುದು ಮುಸ್ಲಿಂ ಧರ್ಮಗುರುಗಳ ಸ್ಪಷ್ಟನೆ,” ಎಂದು ಅವರು ಹೇಳಿದರು.





