ಅಮಿತ್ ಶಾ ಭೇಟಿಯಾದ ಮಠಾಧೀಶರ ನಿಯೋಗ ಧರ್ಮಸ್ಥಳ ಅಪಪ್ರಚಾರದ ತನಿಖೆಯನ್ನು ಎನ್ಐಎಗೆ ವಹಿಸಲು ಮನವಿ ಸಂದರ್ಭ ಬಂದಾಗ ಕೇಂದ್ರ ಎಂಟ್ರಿ ಕೊಡುತ್ತೆ ಎಂದ ಅಮಿತ್ ಶಾ ಧರ್ಮಸ್ಥಳದಲ್ಲಿ ಬುರುಡೆ ಗ್ಯಾಂಗ್ನಿಂದ ಅಪಪ್ರಚಾರ ವಿಚಾರವಾಗಿ ರಾಜ್ಯದ ವಿವಿಧ ಮಠಾಧೀಶರು ದೆಹಲಿಗೆ ತೆರಳಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮಠಾಧೀಶರ ನಿಯೋಗ ಹರಿಹರದ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿಗಳ ನೇತೃತ್ವದ ವಿವಿಧ ಮಠಾಧೀಶರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಪ್ರಕರಣದ ತನಿಖೆಯನ್ನು ರಾಜ್ಯದ ಎಸ್ಐಟಿಯಿಂದ ಕೇಂದ್ರದ ಎನ್ಐಎಗೆ ವರ್ಗಾಯಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಸ್ವಾಮೀಜಿಗಳ ನಿಯೋಗಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಬಗ್ಗೆ ಅಭಯ ನೀಡಿದ್ದಾರೆ ಎಂದು ತಿಳಿದು ಬಂದಿದೆ. ನೀವೇನು ಆತಂಕಕ್ಕೆ ಒಳಗಾಗಬೇಡಿ. ನಾವು ಧರ್ಮಸ್ಥಳದ ಪ್ರಕರಣವನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ರಾಜ್ಯ ಸರ್ಕಾರ ಪ್ರಕರಣ ತನಿಖೆಯನ್ನು ಎಸ್ಐಟಿಗೆ ವಹಿಸಿರುವುದು ಗೊತ್ತಿದೆ. ಎಸ್ಐಟಿ ತನಿಖೆಯನ್ನು ಯಾವ ಮಾರ್ಗದಲ್ಲಿ ಕೊಂಡ್ಯೊಯ್ಯುತ್ತಿದೆ ಎಂಬುದರ ಪಿನ್ ಟು ಪಿನ್ ಮಾಹಿತಿ ನಮಗಿದೆ. ಧರ್ಮಸ್ಥಳ ವಿಚಾರದಲ್ಲಿ ನಾವಿದ್ದೇವೆ. ಯಾವಾಗ ಸಂದರ್ಭ ಎದುರಾಗುತ್ತೋ ಆಗ ಖಂಡಿತಾ ನಾವು ಪ್ರವೇಶ ಮಾಡಿಯೇ ತೀರುತ್ತೇವೆ. ನೀವುಗಳು ನೆಮ್ಮದಿಯಿಂದ ಇರಿ. ಧರ್ಮಸ್ಥಳಕ್ಕೆ ಒಂದೇ ಒಂದು ಹುಲ್ಲುಕಡ್ಡಿಯಷ್ಟು ತೊಂದರೆಯಾಗದಂತೆ ಹಿಂದೂಗಳ ಪವಿತ್ರ ಸ್ಥಳವಾಗಿ ಶಾಶ್ವತವಾಗಿ ಇರುವ ಹಾಗೇ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು ಎಂದು ಅಮಿತ್ ಶಾ ಮಠಾಧೀಶರ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ನಾವು ಅಂದರೆ ಕೇಂದ್ರ ಸರ್ಕಾರ ಧರ್ಮಸ್ಥಳದ ಪರವಾಗಿದ್ದೇವೆ. ಒಂದೇ ಒಂದು ಕೂದಲು ಅಪಕೀರ್ತಿ ಈ ಸ್ಥಳಕ್ಕೆ ಬಾರದ ರೀತಿ ನಾವು ನೋಡಿಕೊಳ್ಳುತ್ತೇವೆ. ಧರ್ಮಸ್ಥಳದ ಪರಂಪರೆಯ ಬಗ್ಗೆ ನಮಗೆ ಮಾಹಿತಿಯಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಇನ್ನೂ ಇದೇ ಸ್ವಾಮೀಜಿಗಳ ನಿಯೋಗವು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ಕೇಂದ್ರದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಮನವಿ ಪತ್ರ ಸಲ್ಲಿಸಿದೆ. ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರದ ಎಸ್ಐಟಿಯಿಂದ ಕೇಂದ್ರ ಸರ್ಕಾರದಡಿ ಇರುವ ಎನ್ಐಎ ತನಿಖೆಗೆ ವಹಿಸಬೇಕೆಂದು ಮನವಿ ಮಾಡಿದೆ.




