ಇಂದು ನಾಡಿನೆಲ್ಲೆಡೆ ಗೌರಿಗಣೇಶ ಹಬ್ಬವನ್ನು ಭಕ್ತಿಯಿಂದ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಎಲ್ಲರ ಮನೆಮನೆಗಳಲ್ಲಿ ವಿನಾಯಕನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಗಣಪತಿಯ ಆರಾಧನೆ ಶ್ರೆದ್ಧೆ, ಭಕ್ತಿಯಿಂದ ನಡೆಯುತ್ತಿದೆ. ಗಣೇಶನ ಮೂರ್ತಿ ನೋಡಿ ಫುಲ್ ಖುಷಿಯಲ್ಲಿರುವ ಮಕ್ಕಳು ಹೊಸ ಉಡುಪುಗಳಲ್ಲಿ ಕಂಗೊಳಿಸುತ್ತಿದ್ದಾರೆ.
ಉದ್ಯಾನ ನಗರಿಯಲ್ಲೂ ಯಾವುದಕ್ಕೂ ಏನು ಕಡಿಮೆ ಇಲ್ಲದಂತೆ ಬೀದಿ ಬೀದಿಗಳಲ್ಲೂ ವಿಘ್ನ ನಿವಾರಕ, ವಿಘ್ನವಿನಾಶಕ, ಮೂಷಿಕ ವಾಹನ, ಮೋದಕ ಪ್ರಿಯ, ವಿನಾಯಕ, ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಇಂದೇ ಹಬ್ಬವಾಗಿದ್ದರಿಂದ ಬಹುತೇಕ ಕಡೆ ಹೆಚ್ಚು ಗಣಪತಿ ಮೂರ್ತಿಗಳನ್ನ ಯುವಕರು ಪ್ರತಿಷ್ಠಾಪನೆ ಮಾಡುತ್ತಾರೆ. ಬೆಂಗಳೂರಿನ ದೊಡ್ಡ ಗಣೇಶ ದೇಗುಲದಲ್ಲಿ ಹಬ್ಬರ ಸಡಗರ ಕಳೆಗಟ್ಟಿದೆ.
ದೊಡ್ಡ ಗಣೇಶ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜೆ ಪುನಸ್ಕಾರ, ಹೋಮ ನಡೆಯುತ್ತಿದ್ದು, ಗಣೇಶನ ದರ್ಶನಕ್ಕೆ ಭಕ್ತರು ಬೆಳಗ್ಗೆಯಿಂದಲೇ ಕ್ಯೂನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ಭಕ್ತರಿಗೆ ಪ್ರಸಾದ ನೀಡಲಾಗುತ್ತಿದೆ. ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ರಾತ್ರಿಯಿಂದಲೇ ದೇವಾಲಯದಲ್ಲಿ ಪೂಜೆ ಸಂಬಂಧ ಕೆಲಸಗಳು, ದೇಗುಲದ ಅಲಂಕಾರ ಸೇರಿ ಎಲ್ಲವನ್ನು ಮಾಡಲಾಗಿತ್ತು.
ಇನ್ನು ಮಾರುಕಟ್ಟೆಗಳಲ್ಲಿ ಗಣೇಶನ ಮೂರ್ತಿ, ಹೂವು, ಹಣ್ಣುಗಳು ಮತ್ತು ಪೂಜಾ ಸಾಮಗ್ರಿಗಳನ್ನು ಖರೀದಿಸಲು ಜನಸಂದಣಿ ಹೆಚ್ಚಿದೆ, ನಗರಗಳಲ್ಲಿ ಸಂಚಾರ ದಟ್ಟಣೆಯೂ ಏರ್ಪಟ್ಟಿದೆ. ಕೆಲವೆಡೆ ಬೆಳಗಿನ ಜಾವಾ ತುಂತುರು ಮಳೆಯಾಗಿದ್ದು ಚಳಿ ಕೂಡ ಮೈಕೊರೆಯುತ್ತಿತ್ತು. ಹಬ್ಬವಾಗಿದ್ದರಿಂದ ಜನರು ಯಾವುದನ್ನೂ ಲೆಕ್ಕಿಸದೇ ವಿನಾಯಕನ ಪೂಜೆಗಳಲ್ಲಿ ತೊಡಗಿಕೊಳ್ಳುತ್ತಾರೆ.






