
ಸಿಲಿಕಾನ್ ಸಿಟಿ ಬೆಂಗಳೂರಿಗೆ ಪ್ರಧಾನಿ ಮೋದಿ ಅವರು ಇಂದು ಆಗಮಿಸುತ್ತಿದ್ದಾರೆ. ಕೆಎಸ್ಆರ್ ರೈಲು ನಿಲ್ದಾಣದಿಂದ ಮೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಇದಾದ ಮೇಲೆ ಹಳದಿ ಮಾರ್ಗದ ಮೆಟ್ರೋವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ವೇಳೆ ಮೆಟ್ರೋದ 3ನೇ ಹಂತದ ಶಂಕುಸ್ಥಾಪನೆ ಕೂಡ ಇದೇ ವೇಳೆ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರಿಗೆ ಭದ್ರತಾ ದೃಷ್ಟಿಯಿಂದ ಹಸಿರು ಮಾರ್ಗದ ಮೆಟ್ರೋವನ್ನ ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳು ಮುಗಿದ ಬಳಿಕ ಹಸಿರು ಮಾರ್ಗದ ಮೆಟ್ರೋ ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಪ್ರಯಾಣಿಕರು ಸಹಕರಿಸಬೇಕು ಎಂದು ಕೋರಲಾಗಿದೆ.
ನಗರದ ಬಸವನಗುಡಿ ಪೊಲೀಸರ ಮನವಿ ಹಿನ್ನೆಲೆ ಹಸಿರು ಮಾರ್ಗದಲ್ಲಿ ಬರುವಂತಹ 4 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗುತ್ತಿದೆ. ಲಾಲ್ ಬಾಗ್, ಸೌತ್ ಎಂಡ್, ಜಯನಗರ, ಆರ್.ವಿ ರಸ್ತೆಯ ಮೆಟ್ರೋ ಸ್ಟೇಷನ್ಗಳನ್ನು ಭದ್ರತೆ ದೃಷ್ಟಿಯಿಂದ ತಾತ್ಕಾಲಿಕವಾಗಿ ಮುಚ್ಚಲಾಗಿರುತ್ತದೆ. ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೂ ಬಂದ್ ಆಗಿರುತ್ತವೆ. 12 ಗಂಟೆ ನಂತರ ಎಂದಿನಂತೆ ಸಂಚಾರ ಆರಂಭ ಮಾಡಲಾಗುತ್ತದೆ.





