ಐಪಿಎಲ್ 2026ರ ಮೊದಲ ಸೂಪರ್ ಓವರ್ ಸೆಣಸಾಟದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಹೀನಾಯವಾಗಿ ಸೋತಿದೆ. ಗೆಲ್ಲುವ ಉತ್ತಮ ಅವಕಾಶವಿದ್ದರೂ ಲಖನೌ ತಂಡದ ತಪ್ಪು ನಿರ್ಧಾರಗಳೇ ಸೋಲಿಗೆ ಕಾರಣವಾಯಿತು ಎಂದು ಮಾಜಿ ವೇಗಿ ಡೇಲ್ ಸ್ಟೇನ್ ಕಟುವಾಗಿ ಟೀಕಿಸಿದ್ದಾರೆ. ವಿಶೇಷವಾಗಿ ಫಾರ್ಮ್ನಲ್ಲಿಲ್ಲದ ನಿಕೋಲಸ್ ಪೂರನ್ ಅವರನ್ನು ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ಗೆ ಕಳುಹಿಸಿದ್ದು ದೊಡ್ಡ ತಪ್ಪು. ಐಪಿಎಲ್ ಇತಿಹಾಸದಲ್ಲಿ ಪೂರನ್ ಮೂರು ಬಾರಿ ಸೂಪರ್ ಓವರ್ನಲ್ಲಿ ಆಡಿದ್ದು, ಮೂರು ಬಾರಿಯೂ ಶೂನ್ಯಕ್ಕೆ ಔಟಾಗಿರುವುದು ಅವರ ಆಯ್ಕೆಯ ಬಗ್ಗೆ ಪ್ರಶ್ನೆ ಮೂಡಿಸಿದೆ ಎಂದು ಸ್ಟೇನ್ ಅಭಿಪ್ರಾಯಪಟ್ಟಿದ್ದಾರೆ.
ಏಕನಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್, ರಿಂಕು ಸಿಂಗ್ ಅವರ ಅಮೋಘ 83 ರನ್ಗಳ (51 ಎಸೆತ) ನೆರವಿನಿಂದ 155 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಲಖನೌ ಪರ ನಾಯಕ ರಿಷಭ್ ಪಂತ್ (42) ಮತ್ತು ಏಡೆನ್ ಮಾರ್ಕ್ರಮ್ (31) ಹೋರಾಟ ನೀಡಿದರೂ ಪಂದ್ಯ ಟೈ ಆಯಿತು. ಬಳಿಕ ನಡೆದ ಸೂಪರ್ ಓವರ್ನಲ್ಲಿ ಸುನಿಲ್ ನರೇನ್ ಅವರ ಮೊದಲ ಎಸೆತದಲ್ಲೇ ಪೂರನ್ ಔಟಾದರು. ಕೇವಲ 2 ರನ್ಗಳ ಗುರಿ ಪಡೆದ ಕೆಕೆಆರ್ ಪರ ರಿಂಕು ಸಿಂಗ್ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಈ ಪಂದ್ಯದಲ್ಲಿ ಅನುಭವಿಸಿದ ಸೋಲಿನಿಂದಾಗಿ ಲಖನೌ ತಂಡ ಪ್ರಸಕ್ತ ಸರಣಿಯಲ್ಲಿ 6ನೇ ಸೋಲು ಕಂಡಂತಾಗಿದೆ. ಇದರಿಂದಾಗಿ ತಂಡದ ಪ್ಲೇಆಫ್ ಪ್ರವೇಶದ ಹಾದಿ ಬಹುತೇಕ ಮುಚ್ಚಲ್ಪಟ್ಟಿದೆ. ತಂಡದಲ್ಲಿ ಮಿಚೆಲ್ ಮಾರ್ಷ್ ಮತ್ತು ಪಂತ್ ಅವರಂತಹ ಸ್ಪೋಟಕ ಬ್ಯಾಟರ್ಗಳಿದ್ದರೂ ಪೂರನ್ ಅವರನ್ನು ಕಳುಹಿಸಿದ ನಿರ್ಧಾರ ತಂಡಕ್ಕೆ ಭಾರಿ ಹೊಡೆತ ನೀಡಿತು. ನಿರ್ಣಾಯಕ ಹಂತದಲ್ಲಿ ಭಾವನಾತ್ಮಕ ನಿರ್ಧಾರಗಳ ಬದಲು ಫಾರ್ಮ್ನಲ್ಲಿರುವ ಆಟಗಾರರಿಗೆ ಮನ್ನಣೆ ನೀಡಬೇಕು ಎಂದು ಸ್ಟೇನ್ ಎಲ್ಎಸ್ಜಿ ಮ್ಯಾನೇಜ್ಮೆಂಟ್ಗೆ ಕಿವಿಮಾತು ಹೇಳಿದ್ದಾರೆ.




