ನಾಸಿಕ್ನ ಟಿಸಿಎಸ್ (TCS) ಕಚೇರಿಯಲ್ಲಿ ನಡೆದಿದೆ ಎನ್ನಲಾದ ಧಾರ್ಮಿಕ ಮತಾಂತರ ಮತ್ತು ಭಾವನೆಗಳಿಗೆ ಧಕ್ಕೆ ತಂದ ಪ್ರಕರಣವು ಈಗ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿಯಾದ ನಿದಾ ಖಾನ್ ವಿರುದ್ಧದ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ (SIT), ಈ ಜಾಲವು ಕೇವಲ ನಾಸಿಕ್ಗೆ ಸೀಮಿತವಾಗಿಲ್ಲ, ಬದಲಾಗಿ ಮಾಲೆಗಾಂವ್ನಿಂದ ಹಿಡಿದು ಮಲೇಷ್ಯಾದವರೆಗೂ ಹರಡಿದೆ ಎಂಬ ಆಘಾತಕಾರಿ ಅಂಶಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ವಿಶೇಷ ಸರ್ಕಾರಿ ವಕೀಲ ಅಜಯ್ ಮಿಶ್ರಾ ಅವರು ಈ ಕುರಿತು ಹೊಸ ಸಾಕ್ಷ್ಯಗಳನ್ನು ಮಂಡಿಸಿದ್ದು, ಪ್ರಕರಣದ ಅಂತರರಾಷ್ಟ್ರೀಯ ಆಯಾಮಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಆರೋಪಿ ನಿದಾ ಖಾನ್ ದೂರುದಾರರ ಮೇಲೆ ತೀವ್ರವಾದ ಧಾರ್ಮಿಕ ಪ್ರಭಾವ ಬೀರಲು ಯತ್ನಿಸಿದ ಆರೋಪ ಎದುರಿಸುತ್ತಿದ್ದಾರೆ. ಸಂತ್ರಸ್ತರಿಗೆ ಬುರ್ಖಾ, ಹಿಜಾಬ್ ಮತ್ತು ಧಾರ್ಮಿಕ ಪುಸ್ತಕಗಳನ್ನು ನೀಡಿ, ನಮಾಜ್ ಮಾಡುವ ತರಬೇತಿ ನೀಡಲಾಗುತ್ತಿತ್ತು ಎನ್ನಲಾಗಿದೆ. ಅಲ್ಲದೆ, ದೂರುದಾರರ ಮೊಬೈಲ್ನಲ್ಲಿ ಧಾರ್ಮಿಕ ಶಿಕ್ಷಣದ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿಸಿ, ಅವರ ಹೆಸರನ್ನು ‘ಹಾನಿಯಾ’ ಎಂದು ಬದಲಾಯಿಸುವ ಸಂಚು ರೂಪಿಸಲಾಗಿತ್ತು. ಮಲೇಷ್ಯಾದಲ್ಲಿ ಉದ್ಯೋಗದ ಆಮಿಷವೊಡ್ಡಿ ಮತಾಂತರಕ್ಕೆ ಪ್ರೇರೇಪಿಸಲಾಗುತ್ತಿತ್ತು ಎಂಬುದು ಎಸ್ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಸ್ತುತ ನಿದಾ ಖಾನ್ ತಲೆಮರೆಸಿಕೊಂಡಿದ್ದು, ಆಕೆಯ ಮೊಬೈಲ್ ಫೋನ್ ವಶಪಡಿಸಿಕೊಳ್ಳುವುದು ತನಿಖೆಗೆ ಅತ್ಯಗತ್ಯವಾಗಿದೆ ಎಂದು ಸರ್ಕಾರಿ ವಕೀಲರು ವಾದಿಸಿದ್ದಾರೆ. ಒಂದು ವೇಳೆ ಆಕೆಗೆ ನಿರೀಕ್ಷಣಾ ಜಾಮೀನು ನೀಡಿದರೆ, ಸಾಕ್ಷ್ಯಗಳನ್ನು ನಾಶಪಡಿಸುವ ಅಥವಾ ಸಂತ್ರಸ್ತರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಜಾಮೀನು ನೀಡಬಾರದು ಎಂದು ಮನವಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಇನ್ನು ಹೆಚ್ಚಿನ ಸಂತ್ರಸ್ತರು ಇರುವ ಸಾಧ್ಯತೆಯನ್ನು ತನಿಖಾ ಸಂಸ್ಥೆಗಳು ಶಂಕಿಸಿವೆ.
ಮತ್ತೊಂದೆಡೆ, ನಿದಾ ಖಾನ್ ಪರ ವಕೀಲ ರಾಹುಲ್ ಕಸ್ಲಿವಾಲ್ ಈ ಎಲ್ಲಾ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿದ್ದಾರೆ. ಮಹಾರಾಷ್ಟ್ರದಲ್ಲಿ ನಿರ್ದಿಷ್ಟವಾದ ಮತಾಂತರ ವಿರೋಧಿ ಕಾನೂನು ಇಲ್ಲದಿರುವುದನ್ನು ಉಲ್ಲೇಖಿಸಿದ ಅವರು, ಕೇವಲ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಇಷ್ಟು ದೊಡ್ಡ ಮಟ್ಟದ ತನಿಖೆ ಅನಗತ್ಯ ಎಂದು ವಾದಿಸಿದರು. ಅಲ್ಲದೆ, ಒಂದೇ ಘಟನೆಗೆ ಸಂಬಂಧಿಸಿದಂತೆ ಒಂಬತ್ತು ಪ್ರತ್ಯೇಕ ಎಫ್ಐಆರ್ ದಾಖಲಿಸಿರುವುದು ಕಾನೂನುಬಾಹಿರ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಸದ್ಯ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮೇ 02ಕ್ಕೆ ಮುಂದೂಡಿದ್ದು, ಅಂದು ಎರಡೂ ಕಡೆಯ ವಾದ-ಪ್ರತಿವಾದಗಳು ಮುಂದುವರಿಯಲಿವೆ.




