
ಇಡೀ ವಿಶ್ವದಲ್ಲೇ ಅತ್ಯಂತ ನಿಷ್ಠಾವಂತ ಅಭಿಮಾನಿಗಳಿದ್ದರೆ ಅದು RCB ಫ್ಯಾನ್ಸ್. ಹೀಗೆ ಅಂದಿರುವುದು ಮತ್ಯಾರೂ ಅಲ್ಲ. ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್. ಅಂತಹದೊಂದು ವಿಶೇಷ ಅಭಿಮಾನಿಗಳ ಬಳಗವನ್ನೇ ಆರ್ಸಿಬಿ ಸಂಪಾದಿಸಿಕೊಂಡಿದೆ. ಈ ಅಭಿಮಾನಿಗಳೇ ಇದೀಗ ಮತ್ತೊಮ್ಮೆ ಅಭಿಮಾನಿಗಳೆಂದರೆ ಹೇಗಿರಬೇಕೆಂದು ಇಡೀ ವಿಶ್ವಕ್ಕೆ ಸಾರಿದೆ. ಅದು ಕೂಡ ತನ್ನ ನೆಚ್ಚಿನ ಆಟಗಾರನಿಗೆ ವಿಶೇಷ ಗೌರವ ಸಲ್ಲಿಸುವ ಮೂಲಕ. ಹೌದು, ಟೆಸ್ಟ್ ಕ್ರಿಕೆಟ್ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿರುವ ವಿರಾಟ್ ಕೊಹ್ಲಿ ದೀರ್ಘಾವಧಿ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಈ ನಿವೃತ್ತಿ ಘೋಷಣೆ ಮೂಡಿಬಂದಿದ್ದು ಸೋಷಿಯಲ್ ಮೀಡಿಯಾದಲ್ಲಿ. ಅದಕ್ಕಾಗಿ ಫ್ಯಾನ್ಸ್ ಗಳು ಸಹ ಬಿಳಿ ಜರ್ಸಿಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂಗೆ ಆಗಮಿಸಿ ವಿರಾಟ್ ಕೊಹ್ಲಿಯವರಿಗೆ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ.

14 ವರ್ಷಗಳ ಕಾಲ ಭಾರತ ಟೆಸ್ಟ್ ತಂಡವನ್ನು ಪ್ರತಿನಿಧಿಸಿದ್ದ ವಿರಾಟ್ ಕೊಹ್ಲಿ ವಿದಾಯ ಪಂದ್ಯದ ಮೂಲಕ ಗುಡ್ ಬೈ ಹೇಳಬೇಕಿತ್ತು. ಆದರೆ ಬಿಸಿಸಿಐ ಅಂತಹದೊಂದು ಪಂದ್ಯವನ್ನು ಏರ್ಪಡಿಸಲಿಲ್ಲ. ಹೀಗಾಗಿಯೇ ಆರ್ಸಿಬಿ ಅಭಿಮಾನಿಗಳು ತನ್ನ ನೆಚ್ಚಿನ ಟೆಸ್ಟ್ ಆಟಗಾರನಿಗೆ ಗೌರವಪೂರ್ವಕ ವಿದಾಯ ಹೇಳಲು ಯೋಜನೆ ರೂಪಿಸಿದರು. ಅದಕ್ಕಾಗಿ ನೀಡಿದ್ದು ಒಂದೇ ಒಂದು ಕರೆಯಷ್ಟೇ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ಎಲ್ಲರೂ ವೈಟ್ ಜೆರ್ಸಿಯಲ್ಲಿ ಬನ್ನಿ ಎಂದು ಆರ್ಸಿಬಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದರು. ಈ ಒಂದು ಮನವಿಗೆ ಸಿಕ್ಕಿದ ಸ್ಪಂದನೆ ಅಭೂತಪೂರ್ವ. ಇದಕ್ಕೆ ಸಾಕ್ಷಿಯೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ಕಂಡು ಬಂದ ವೈಟ್ ಜೆರ್ಸಿಗಳು.

ಆರ್ಸಿಬಿ ತಂಡದ ಬಹುತೇಕ ಅಭಿಮಾನಿಗಳು ವೈಟ್ ಜೆರ್ಸಿಯಲ್ಲಿ ಆಗಮಿಸಿದ್ದರು. ಇನ್ನೂ ಕೆಲವರು ಬಳಿ ಉಡುಪಿನಲ್ಲಿ ಕಾಣಿಸಿಕೊಂಡರು. ಈ ಮೂಲಕ ವಿರಾಟ್ ಕೊಹ್ಲಿಯನ್ನು ತಾವೆಷ್ಟು ಪ್ರೀತಿಸುತ್ತೇವೆ ಎಂಬುದನ್ನು ವಿಶ್ವಕ್ಕೆ ಸಾರಿದರು. ಹೌದು, ಇಡೀ ವಿಶ್ವದಲ್ಲೇ ಅತ್ಯಂತ ನಿಷ್ಠಾವಂತ ಅಭಿಮಾನಿಗಳಿದ್ದರೆ ಅದು RCB ಫ್ಯಾನ್ಸ್ ಮಾತ್ರ. ಆ ಅಭಿಮಾನಿಗಳ ಅಭಿಮಾನ ಹೇಗಿರುತ್ತೆ ಎಂಬುದಕ್ಕೆ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಗಿತ್ತು.





