ಒಂದೇ ಕಾರಿನಲ್ಲಿ ಆಗಮನ:
ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಮತ್ತು ಮುಖ್ಯಮಂತ್ರಿ ಗಾದಿಯ ಕುರಿತು ಭಾರಿ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇಂದು ವಿಧಾನಸೌಧಕ್ಕೆ ಒಂದೇ ಕಾರಿನಲ್ಲಿ ಆಗಮಿಸಿ ಎಲ್ಲರ ಗಮನ ಸೆಳೆದರು. ಲೋಕಭವನದಲ್ಲಿ ನವೀಕೃತ ಸ್ವಾಗತ ಕೇಂದ್ರ ಮತ್ತು ಗೋಶಾಲೆ ಉದ್ಘಾಟನಾ ಕಾರ್ಯಕ್ರಮ ಮುಗಿಸಿ, ಅಲ್ಲಿಂದ ಇಬ್ಬರೂ ನಾಯಕರು ಜೊತೆಯಾಗಿಯೇ ಒಂದೇ ವಾಹನದಲ್ಲಿ ವಿಧಾನಸೌಧಕ್ಕೆ ಬಂದಿಳಿದರು.
ಗೌಪ್ಯ ಸಮಾಲೋಚನೆ:
ವಿಧಾನಸೌಧಕ್ಕೆ ಬಂದ ನಂತರ ಮುಖ್ಯಮಂತ್ರಿಯವರ ಕೊಠಡಿಯಲ್ಲಿ ಈ ಇಬ್ಬರೂ ಪ್ರಮುಖ ನಾಯಕರು ಕೆಲಕಾಲ ಒಂಟಿಯಾಗಿ ಸಮಾಲೋಚನೆ ನಡೆಸಿದರು. ಬಳಿಕ ಮುಖ್ಯ ಮಾಹಿತಿ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ಆಯ್ಕೆ ಸಮಿತಿ ಸಭೆಯಲ್ಲೂ ಭಾಗವಹಿಸಿದರು. ನಾಯಕತ್ವ ಬದಲಾವಣೆಯ ವದಂತಿಗಳು ಜೋರಾಗಿರುವ ಈ ಸಮಯದಲ್ಲಿ, ಇಬ್ಬರು ನಾಯಕರು ಒಟ್ಟಿಗೆ ಕಾಣಿಸಿಕೊಂಡಿರುವುದು ಮತ್ತು ನಡೆಸಿದ ಸುದೀರ್ಘ ಚರ್ಚೆಯು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಾಜಕೀಯ ಮಹತ್ವ:
ಸಿಎಂ ಮತ್ತು ಡಿಸಿಎಂ ಆಪ್ತ ವಲಯಗಳು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿರುವ ಈ ಸಂದರ್ಭದಲ್ಲಿ, ಇಬ್ಬರೂ ನಾಯಕರು ಒಗ್ಗಟ್ಟು ಪ್ರದರ್ಶಿಸುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆಯೇ ಎಂಬ ಮಾತುಗಳು ಕೇಳಿಬರುತ್ತಿವೆ. ಸಂಪುಟ ಪುನಾರಚನೆ ಮತ್ತು ಸಿಎಂ ಬದಲಾವಣೆ ಕುರಿತು ಹೈಕಮಾಂಡ್ನಿಂದ ಇನ್ನೂ ಸ್ಪಷ್ಟ ಸಂದೇಶ ಬಾರದಿರುವ ಹಿನ್ನೆಲೆಯಲ್ಲಿ, ಈ ಇಬ್ಬರು ನಾಯಕರ ಮುಂದಿನ ನಡೆ ಏನು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.




