ಮುಂಬೈ:ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಡುವೆ, ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ಮಿಥಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಿಸಲಾಗಿದೆ. ಅದೃಷ್ಟವಶಾತ್, ಸಕಾಲಿಕ ಸಹಾಯದಿಂದ 30 ವರ್ಷದ ಶಿಕ್ಷಕ ಅಮನ್ ಇಮ್ತಿಯಾಜ್ ಸಯ್ಯದ್ ಪವಾಡಸದೃಶವಾಗಿ ಪಾರಾಗಿದ್ದಾರೆ.
ಘಟನೆ ನಡೆದಿದ್ದು ಹೀಗೆ…
ಆಗಸ್ಟ್ 19 ರಂದು, ಪೊವಾಯಿಯ ಫಿಲ್ಟರ್ಪಾಡಾದ ನಿವಾಸಿಯಾದ ಅಮನ್, ತಮ್ಮ ಸ್ನೇಹಿತರೊಂದಿಗೆ ಮಿಥಿ ನದಿಗೆ ಈಜಲು ಹೋಗಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ನದಿಯ ನೀರಿನ ಹರಿವು ಹೆಚ್ಚಾಗಿ, ಪ್ರವಾಹದಲ್ಲಿ ಸಿಲುಕಿಕೊಂಡರು. ಆರಂಭದಲ್ಲಿ, ಅವರು ನದಿಯ ತಡೆಗೋಡೆಯನ್ನು ಹಿಡಿದುಕೊಂಡಿದ್ದರು. ಆದರೆ ನೀರಿನ ರಭಸಕ್ಕೆ ಹಿಡಿತ ತಪ್ಪಿ, ಕೊಚ್ಚಿ ಹೋಗತೊಡಗಿದರು.
ಸ್ಥಳೀಯರ ಸಮಯಪ್ರಜ್ಞೆ ಮತ್ತು ರಕ್ಷಣೆ:
ಅಮನ್ ಸಹಾಯಕ್ಕಾಗಿ ಕೂಗುತ್ತಿದ್ದನ್ನು ಕಂಡ ಸ್ಥಳೀಯರು ಕೂಡಲೇ ರಕ್ಷಣೆಗೆ ಧಾವಿಸಿದರು. ಅವರು ಹಗ್ಗವನ್ನು ಎಸೆದರು. ಆದರೆ ಅಮನ್ಗೆ ಅದನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಪರಿಸ್ಥಿತಿ ಅರಿತ ಸ್ಥಳೀಯರು ಹಗ್ಗವನ್ನು ಮತ್ತೊಮ್ಮೆ ಎಸೆದು, ಅಮನ್ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಮಾತನಾಡಿದ ಮುಂಬೈ ಪೊಲೀಸ್ ವಲಯ 10ರ ಉಪ ಪೊಲೀಸ್ ಆಯುಕ್ತ ದತ್ತ ನಲವಾಡೆ, “ಭಾರೀ ಪ್ರವಾಹದ ನಡುವೆಯೂ, ಸ್ಥಳೀಯರ ಸಮಯಪ್ರಜ್ಞೆ ಹಾಗೂ ಸಹಾಯದಿಂದ ವ್ಯಕ್ತಿಯ ಜೀವ ಉಳಿಯಿತು. ಇದು ಸಮಾಜದಲ್ಲಿನ ಮಾನವೀಯತೆಯ ಪ್ರತೀಕ” ಎಂದಿದ್ದಾರೆ.
ಇದೇ ವೇಳೆ, ಮುಂಬೈನಲ್ಲಿ ಮಳೆಯ ನಡುವೆ ಪೊವಾಯಿಯಲ್ಲಿ ಕೆಲವರು ಈಜುತ್ತಿದ್ದು, ಪೊಲೀಸರು ಆಗಮಿಸುತ್ತಿದ್ದಂತೆ ಓಡಿಹೋಗಿರುವ ಘಟನೆಗಳೂ ವರದಿಯಾಗಿವೆ. ಇನ್ನೊಂದು ವಿಡಿಯೋದಲ್ಲಿ ಸ್ಪೈಡರ್ ಮ್ಯಾನ್ ವೇಷಭೂಷಣ ಧರಿಸಿದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನೀರನ್ನು ಹೊರಹಾಕುತ್ತಿರುವುದು ಗಮನ ಸೆಳೆದಿದೆ.







