
‘ಸೂಪರ್ ಸ್ಟಾರ್’ ರಜನಿಕಾಂತ್ ಅವರ ‘ಕೂಲಿ’ ಸಿನಿಮಾದಲ್ಲಿ ಉಪೇಂದ್ರ ನಟನೆ ‘ಕೂಲಿ’ ಚಿತ್ರದಲ್ಲಿ ಕಲೀಶ ಎಂಬ ಪಾತ್ರವನ್ನು ಮಾಡಿರುವ ಉಪೇಂದ್ರ, ಅವರ ಪ್ರತಿಭೆಯನ್ನು ಬಹಿರಂಗ ವೇದಿಕೆಯಲ್ಲಿ ಹೊಗಳಿದ ರಜನಿಕಾಂತ್
‘ನನ್ನ ಬಾಷಾ ಸಿನಿಮಾಕ್ಕಿಂತ ಓಂ 10 ಪಟ್ಟು ದೊಡ್ಡದು’ ಎಂದ ರಜನಿಕಾಂತ್; ಉಪೇಂದ್ರಗೆ ‘ತಲೈವಾ’ ಭಾರಿ ಮೆಚ್ಚುಗೆ!
ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’ ಸಿನಿಮಾದಲ್ಲಿ ‘ಸೂಪರ್ ಸ್ಟಾರ್’ ರಜನಿಕಾಂತ್ ಜೊತೆಗೆ ಉಪೇಂದ್ರ ನಟಿಸುತ್ತಿದ್ದಾರೆ. ಈ ಸಿನಿಮಾದ ಆಡಿಯೋ ಈಚೆಗೆ ಚೆನ್ನೈನಲ್ಲಿ ನಡೆದಿತ್ತು. ಈ ವೇಳೆ ರಜನಿಕಾಂತ್ ಅವರು ಉಪೇಂದ್ರ ಅವರನ್ನ ಮನಸಾರೆ ಹೊಗಳಿದ್ದಾರೆ. ಜೊತೆಗೆ ‘ಓಂ’ ಚಿತ್ರವನ್ನು ಕೂಡ ನೆನಪು ಮಾಡಿಕೊಂಡಿದ್ದಾರೆ.
ಏನೇನ್ ಮಾತಾಡಿದ್ರು ರಜನಿಕಾಂತ್?
‘ಕೂಲಿ’ ಚಿತ್ರದಲ್ಲಿ ಉಪೇಂದ್ರ ಅವರು ಕಲೀಶ ಎಂಬ ಪಾತ್ರವನ್ನು ಮಾಡಿದ್ದಾರೆ. ಆ ಬಗ್ಗೆ ಮಾತನಾಡುತ್ತಾ ರಜನಿಕಾಂತ್, “ನಮ್ಮ ಸಿನಿಮಾದಲ್ಲಿ ಉಪೇಂದ್ರ ಅವರು ಒಂದು ಪಾತ್ರ ಮಾಡಿದ್ದಾರೆ. ಭಾರತದ ಅತ್ಯಂತ ಬುದ್ಧಿವಂತ ನಿರ್ದೇಶಕರಿಗೆಲ್ಲಾ ಉಪೇಂದ್ರ ಅವರೇ ದೊಡ್ಡ ಸ್ಪೂರ್ತಿ. ಮಲಯಾಳಂ, ಹಿಂದಿ, ತೆಲುಗು, ತಮಿಳು ಎಲ್ಲಾ ಭಾಷೆಯವರಿಗೂ ಉಪೇಂದ್ರ ಸ್ಪೂರ್ತಿ. ಅಂತಹ ದೊಡ್ಡ ಡೈರೆಕ್ಟರ್. ಅವರಿಗೆ ನಟನಾಗಬೇಕು ಎಂದು ಇಷ್ಟವಿರಲಿಲ್ಲ. ಅವರು ಮೂಲತಃ ನಿರ್ದೇಶಕರು” ಎಂದು ಹೇಳಿದ್ದಾರೆ.
“ಅವರು ‘ಓಂ’ ಅಂತ ಒಂದು ಸಿನಿಮಾವನ್ನು ಶಿವರಾಜ್ಕುಮಾರ್ಗೆ ಮಾಡಿದ್ದಾರೆ. ನನಗೆ ಇಲ್ಲಿ ‘ಬಾಷಾ’ ಸಿನಿಮಾ ಹೇಗೋ, ಅಲ್ಲಿ (ಕರ್ನಾಟಕದಲ್ಲಿ) ಅದಕ್ಕಿಂತಲೂ 10 ಪಟ್ಟು ದೊಡ್ಡ ಸಿನಿಮಾ ‘ಓಂ’. ಆದಾದ ಮೇಲೆ ಅವರು ಮಾಡಿರುವ ಒಂದೊಂದು ಪಾತ್ರಗಳು ಡಿಫರೆಂಟ್. ಈಗ ಲೋಕೇಶ್ ಕನಕರಾಜ್ ನಾನ್ ಲೀನಿಯರ್ ಅಂತೇನೋ ಟೆಕ್ನಿಕ್ ಬಳಸುತ್ತಾರಲ್ವಾ? ಅದನ್ನು ಉಪೇಂದ್ರ ಅಂದೇ ಮಾಡಿದ್ದಾರೆ” ಎಂದು ರಜನಿಕಾಂತ್ ಹೇಳಿದ್ದಾರೆ.
“ತುಂಬಾ ಓದಿಕೊಂಡಿದ್ದಾರೆ. ಜನರ ಮೇಲೆ ಸಾಕಷ್ಟು ಪ್ರೀತಿ ತೋರುತ್ತಾರೆ. ಅವರು ನಮ್ಮ ಸಿನಿಮಾದಲ್ಲಿ ನಟಿಸಿದ್ದಕ್ಕೆ ನಾನಂತೂ ತುಂಬಾ ಖುಷಿಯಾಗಿದ್ದೇನೆ” ಎಂದು ರಜನಿಕಾಂತ್ ಹೇಳಿದ್ದಾರೆ. ಇನ್ನು, ರಜನಿಕಾಂತ್ ಅವರ ಬಗ್ಗೆ ಖುಷಿಯಿಂದ ಮಾತನಾಡಿರುವ ಉಪೇಂದ್ರ, “ನಾನು ಈಗ ಹೇಳುವುದು ಅತಿಶಯೋಕ್ತಿ ಎನಿಸಬಹುದು. ಆದರೆ ನಾನು ನಿಜವಾಗಿಯೂ ಹೇಳುತ್ತಿದ್ದೇನೆ, ನಾನು 25 ವರ್ಷದ ಹಿಂದೆ ತಲೈವಾ ಅವರನ್ನು ಭೇಟಿಯಾದೆ. ಅದು ನನಗೆ ಯಾವತ್ತೂ ಮರೆಯದಂತಹ ಕ್ಷಣ. ಅಂದಿನಿಂದ ದ್ರೋಣಾಚಾರ್ಯರನ್ನು ಏಕಲವ್ಯ ಹೇಗೆ ಫಾಲೋ ಮಾಡುತ್ತಾನೋ, ಹಾಗೇ ನಾನು ಫಾಲೋ ಮಾಡಿದ್ದೇನೆ” ಎಂದು ಹೇಳಿದ್ದಾರೆ.
ದ್ರೋಣಾಚಾರ್ಯ ಬೆರಳು ಕೇಳಿದ್ದ.. ಆದ್ರೆ…
“ಅಂದು ದ್ರೋಣಾಚಾರ್ಯ ಮೊದಲ ಬಾರಿಗೆ ಏಕಲವ್ಯನನ್ನು ಭೇಟಿಯಾದಾಗ ಬೆರಳು ಕೇಳಿದ್ದ. ಆದರೆ ಈ ದ್ರೋಣಾಚಾರ್ಯ (ರಜನಿಕಾಂತ್) ಈ ಏಕಲವ್ಯನ (ಉಪೇಂದ್ರ) ಬೆರಳು ಹಿಡಿದುಕೊಂಡು ಕೂಲಿ ಅನ್ನೋ ಪ್ರಪಂಚಕ್ಕೆ ಕರೆದುಕೊಂಡು ಬಂದರು. ಆದರೆ ಆ ಪ್ರಪಂಚದಲ್ಲಿ ನಾಗಾರ್ಜುನ, ಆಮಿರ್ ಖಾನ್, ಸತ್ಯರಾಜ್.. ಅಬ್ಬಬ್ಬಾ.. ನಾನಿದನ್ನು ನಿರೀಕ್ಷೆ ಮಾಡಿರಲಿಲ್ಲ. ಎಲ್ಲಾ ಸ್ಟಾರ್ಗಳಿಗೂ ಅಭಿಮಾನಿಗಳು ಇರುತ್ತಾರೆ. ಆ ಎಲ್ಲಾ ಸ್ಟಾರ್ಗಳು ನಿಮಗೆ (ರಜನಿಕಾಂತ್) ಅಭಿಮಾನಿಗಳಾಗಿರುತ್ತಾರೆ. ‘ಕೂಲಿ’ ಅನ್ನೋದು ಹಬ್ಬ. ನಾವೆಲ್ಲರೂ ಆಗಸ್ಟ್ 14ರಂದು ಸೆಲೆಬ್ರೇಷನ್ ಮಾಡೋಣ” ಎಂದು ಹೇಳಿದ್ದಾರೆ ಉಪೇಂದ್ರ.
ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿರುವ ‘ಕೂಲಿ’ ಸಿನಿಮಾವನ್ನು ಲೋಕೇಶ್ ಕನಕರಾಜ್ ನಿರ್ದೇಶನ ಮಾಡಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಶ್ರುತಿ ಹಾಸನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದು, ಆಗಸ್ಟ್ 14ರಂದು ಬಹುಭಾಷೆಯಲ್ಲಿ ‘ಕೂಲಿ’ ಸಿನಿಮಾ ರಿಲೀಸ್ ಆಗಲಿದೆ.




