ಇತ್ತೀಚೆಗೆ ಗಂಡ-ಹೆಂಡತಿ ಸಣ್ಣ, ಸಣ್ಣ ವಿಷಯಗಳಿಗೂ ಬೇರ್ಪಟ್ಟು ನೆಕ್ಸ್ಟ್ ಲೇವೆಲ್ಗೆ ಹೋಗ್ತಾರೆ. ಅಂತೆಯೇ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಆಘಾತಕಾರಿ ಘಟನೆ ನಡೆದಿದೆ.
ಕೋಳಿ ಸಾರು ಮಾಡದಿದ್ದಕ್ಕೆ ಕೋಪಿಸಿಕೊಂಡ ಪತಿ ಆಕೆಯ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಆಕೆ ಜೀವವನ್ನೇ ಕಳೆದುಕೊಂಡಿದ್ದಾಳೆ. ಕೊನೆಗೆ ಪ್ರಕರಣವನ್ನು ಮುಚ್ಚಿ ಹಾಕಲು ಆರೋಪಿ ನದಿಗೆ ಎಸೆದು ಬಂದಿದ್ದ. ಕಳೆದ ಆಗಸ್ಟ್ನಲ್ಲಿಯೇ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.
ಆಗಿದ್ದೇನು..?
ರೀನಾ ಎಂಬ 21 ವರ್ಷದ ಹುಡುಗಿ ನಿಗಮ್ ಎಂಬಾತನ ಮದುವೆ ಆಗಿದ್ದಳು. ಕಳೆದ ಆಗಸ್ಟ್ 21 ರಂದು ನಿಗಮ್ ಮನೆಗೆ ಮದ್ಯ ಸೇವಿಸಿ ಬಂದಿದ್ದ. ಬರುವಾಗ ಚಿಕನ್ ತೆಗೆದುಕೊಂಡು ಬಂದಿದ್ದ. ಚಿಕನ್ ತಂದಿದ್ದ ಆತ, ಪತ್ನಿ ಕೋಳಿ ಸಾರು ಮಾಡುತ್ತಾಳೆ ಅಂದುಕೊಂಡಿದ್ದ. ಆದರೆ ಆಕೆ, ಮುಂಚೆಯೇ ಸಾಂಬರ್ಗೆ ತಯಾರಿ ಮಾಡಿದ್ದರಿಂದ ತರಕಾರಿ ಸಾರು ಮಾಡಿದ್ದಳು. ಇದರಿಂದ ಕೋಪಿಸಿಕೊಂಡು ಆತ, ರೀನಾ ಮೇಲೆ ಹಲ್ಲೆ ಮಾಡಿದ್ದಾನೆ.
ಗಂಡನ ಹಲ್ಲೆಯಿಂದ ಮನನೊಂದ ರೀನಾ ದುಡುಕಿ ನಿರ್ಧಾರಕ್ಕೆ ಬಂದು ನೇಣು ಬಿಗಿದುಕೊಂಡಿದ್ದಾಳೆ. ಹೆಂಡತಿ ಮೃತಪಟ್ಟಿರೋದು ಗೊತ್ತಾಗುತ್ತಿದ್ದಂತೆಯೇ ನಿಗಮ್ ಭಯಭೀತನಾದ. ನಂತರ ಸಂಬಂಧಿಕರ ಸಹಾಯದಿಂದ ರೀನಾಳ ಮೃತ ದೇಹವನ್ನು ಗಂಗಾ ನದಿಗೆ ಎಸೆದು ಬಂದಿದ್ದ. ನಂತರ ಪೊಲೀಸ್ ಠಾಣೆಗೆ ಹೋಗಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದ.
ತನಿಖೆಯಲ್ಲಿ ಸತ್ಯ ಬಯಲು
ಪೊಲೀಸರು ತನಿಖೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಮಿಸ್ಸಿಂಗ್ ಕೇಸ್ ದಾಖಲಾಗುತ್ತಿದ್ದಂತೆಯೇ ರೀನಾಳ ಕುಟುಂಬಸ್ಥರು ನಿಗಮ್ ವಿರುದ್ಧ ವರದಕ್ಷಿಣೆ ಮತ್ತು ಕಿರುಕುಳ ಕೇಸ್ ದಾಖಲಿಸಿದ್ದರು. ನಂತರ ಅಧಿಕಾರಿಗಳು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಗೊತ್ತಾಗಿದೆ.




