ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸ ದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ. ಪಾಟೀಲ್, ಸುಗ್ರೀವಾಜ್ಞೆಯಲ್ಲಿ ಸಾಲಗಾರರ ಹಿತ ಕಾಪಾಡುವ ಅಂಶಗಳನ್ನು ಅಳವಡಿಸಲಾಗಿದೆ.
ಆದರೆ, ಇದರಲ್ಲಿ ಸಣ್ಣ-ಪುಟ್ಟ ಲೋಪ ದೋಷಗಳಿವೆ ಎಂದು ಕಾನೂನು ಮತ್ತು ಆರ್ಥಿಕ ಇಲಾಖೆ ಸಲಹೆ ಹಿನ್ನೆಲೆಯಲ್ಲಿ ಸಂಪುಟ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿ, ಇರುವ ಸಣ್ಣ-ಪುಟ್ಟ ಲೋಪದೋಷಗಳನ್ನು ಬಗೆಹರಿಸಿ ಜಾರಿಗೆ ತರುವ ಅಧಿಕಾರವನ್ನು ಮುಖ್ಯಮಂತ್ರಿ ಅವರಿಗೆ ನೀಡಿದೆ. ಅವರು, ಹಣಕಾಸು, ಕಾನೂನು, ಕಂದಾಯ, ಗೃಹ ಇಲಾಖೆ ಸಚಿವರು ಮತ್ತು ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಕಾಯ್ದೆಗೆ ಒಂದು ರೂಪ ನೀಡಲಿದ್ದಾರೆ ಎಂದರು.
ಜಲ ಭದ್ರತೆಗೆ 5000 ಕೋಟಿ ಬೃಹತ್ ಯೋಜನೆ: ಸತತ ಬರಗಾಲಕ್ಕೆ ತುತ್ತಾಗುವ ಕರ್ನಾಟಕವನ್ನು ಪಾರು ಮಾಡಲು ಜಲ ಭದ್ರತೆಗಾಗಿ 5,000 ಕೋಟಿ ರೂ.ಗಳ ಬೃಹತ್ ಯೋಜನೆಗೆ ಸಂಪುಟ ಹಸಿರು ನಿಶಾನೆ ತೋರಿದೆ. ವಿಶ್ವಬ್ಯಾಂಕ್ ನಿಂದ 3,500 ಕೋಟಿ ರೂ. ಸಾಲ ಪಡೆದು ಅದಕ್ಕೆ ಸರಿಸಮನಾಗಿ ರಾಜ್ಯ ಸರ್ಕಾರ 1,500 ಕೋಟಿ ರೂ. ಒದಗಿಸಿ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ತಡೆದು ಅಣೆಕಟ್ಟೆ, ಚೆಕ್ಡ್ಯಾಂ ನಿರ್ಮಾಣ ಮತ್ತು ಕೆರೆ ತುಂಬಿಸುವುದು ಇದರ ಉದ್ದೇಶವಾಗಿದೆ.

ಬೆಂಗಳೂರು ಅರಮನೆ ಮೈದಾನ ಜಾಗ ಬಳಕೆ ಮತ್ತು ನಿಯಂತ್ರಣಕ್ಕೆ ಕಳೆದ ಸಂಪುಟ ಸಭೆಯಲ್ಲಿ ಹೊರಡಿಸಿದ ಸುಗ್ರೀವಾಜ್ಞೆ ಅನುಷ್ಠಾನಕ್ಕೆ ಸಂಪುಟ ಸಮ್ಮತಿಸಿದೆ. ರಾಜಧಾನಿ ಹೊರವಲಯದ ಹೆಸರ ಘಟ್ಟದ 5,678 ಎಕರೆ ಪ್ರದೇಶವನ್ನು ವನ್ಯ ಜೀವಿ ಸಂರಕ್ಷಣಾ ನಿಯಮದಡಿ ಮೀಸಲು ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 19 ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಾಲೇಜು ಕಟ್ಟಡಗಳನ್ನು 304 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣಕ್ಕೆ ಅನುಮತಿ ನೀಡ ಲಾಗಿದೆ. ಸರ್ಕಾರದಿಂದ ನೇರವಾಗಿ ಮತ್ತು ಪರೋಕ್ಷವಾಗಿ ನೇಮಕಗೊಂಡಿರುವ ವಿವಿಧ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆ ಜಾರಿಗೆ ತರಲು ತೀರ್ಮಾನಿಸಿದೆ.





