ಕೆ.ಜಿ.ಕೊಪ್ಪಲು ಸಿದ್ದಪ್ಪಾಜಿ ದೇವಸ್ಥಾನದ ಬಳಿ ನಡುರಸ್ತೆಯಲ್ಲೇ ಲಾಂಗ್ ಹಿಡಿದು ಪ್ರದರ್ಶಿಸಿ, ಭಯದ ವಾತಾವರಣ ಸೃಷ್ಟಿಸಿದ ಆರೋಪದಡಿ ಮೋಹನ್ ಅಲಿಯಾಸ್ ಚಿಂಟು(21) ಹಾಗೂ ಆತನ ಸಹಚರ ರಕ್ಷಿತ್ ಅಲಿಯಾಸ್ ಕೇಕು(21) ವಿರುದ್ಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಸೋಮವಾರ ಎಫ್ಐಆರ್ ದಾಖಲಾಗಿದೆ.
ಯುವಕನೊಬ್ಬ ಲಾಂಗ್ ಹಿಡಿದು ಮತ್ತೊಬ್ಬನೊಂದಿಗೆ ಜಗಳವಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣ ದಲ್ಲಿ ಗಮನಿಸಿದ ಸರಸ್ವತಿಪುರಂ ಠಾಣೆ ಸಿಬ್ಬಂದಿ ಬಸವರಾಜ್ ಅರಸ್, ಈ ಬಗ್ಗೆ ಸ್ಥಳಕ್ಕೆ ತೆರಳಿ ವಿಚಾರಿಸಿ, ವಿಡಿಯೋ ದಲ್ಲಿರುವವರ ಮಾಹಿತಿ ಕಲೆಹಾಕಿದ ನಂತರ
ದೂರು ನೀಡಿದ್ದಾರೆ. ಮಾ.11ರಂದು ತಡರಾತ್ರಿ 11 ಗಂಟೆ ವೇಳೆಯಲ್ಲಿ ಸಿದ್ದಪ್ಪಾಜಿ ದೇವಸ್ಥಾನದ ಬಳಿ ರೌಡಿಶೀಟರ್ ಮೋಹನ್, ಕೈಯ್ಯಲ್ಲಿ ಲಾಂಗ್ ಹಿಡಿದು ಸಾರ್ವಜನಿಕ ವಾಗಿ ಪ್ರದರ್ಶಿಸಿ ಭಯದ ವಾತಾವರಣ ಸೃಷ್ಟಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಲಾಂಗ್ ಹಿಡಿದಿರುವ ಯುವಕನನ್ನು ಮತ್ತೊಬ್ಬ ಸಮಾಧಾನಪಡಿಸುವಂತೆ ಕಂಡು ಬಂದಿದೆ. ಕೆಲ ಹೊತ್ತಿನ ಬಳಿಕ ಮೂರಾಲ್ಕು ಮಂದಿ ಬಂದು ದೂರದಿಂದಲೇ ಜಗಳ ನೋಡುತ್ತಿ ರುತ್ತಾರೆ. ರೈಲ್ವೆ ಗೇಟ್ ಬಂದ್ ಮಾಡಿದ್ದ ರಿಂದ ಒಂದು ಕಾರು, ಬೈಕ್ ಅಲ್ಲಿಯೇ ನಿಂತಿ ರುತ್ತವೆ. ಅನೇಕ ವಾಹನಗಳು ಇಲ್ಲೇ ಹಾದುಹೋಗುತ್ತವೆ ಆದರೆ ಯಾರಿಗೂ ಲಾಂಗ್ ತೋರಿಸಿ, ಹೆದರಿಸಿದಂತೆ ಕಾಣಿಸುವುದಿಲ್ಲ.
ಸದ್ಯ ಈ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಸಾರ್ವಜನಿಕವಾಗಿ ಲಾಂಗ್ ಝಳಪಿಸಿ ಭಯದ ವಾತಾವರಣ ಸೃಷ್ಟಿಸಿದವರ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.





