ಸೌತ್ ಆಫ್ರಿಕಾ, ನಮೀಬಿಯಾ ಮತ್ತು ಝಿಂಬಾಬ್ವೆ ಜಂಟಿಯಾಗಿ ಆಯೋಜಿಸಲಿರುವ 2027ರ ಏಕದಿನ ವಿಶ್ವಕಪ್ಗೆ ಟೀಮ್ ಇಂಡಿಯಾದ ಸಿದ್ಧತೆಗಳು ಶುರುವಾಗಿದೆ. ಈ ಸಿದ್ಧತೆಗಳ ನಡುವೆ ಭಾರತ ತಂಡದ ನಾಯಕ ಶುಭ್ಮನ್ ಗಿಲ್ ನೀಡಿರುವ ಹೇಳಿಕೆಗಳು ಇದೀಗ ಭಾರೀ ವೈರಲ್ ಆಗಿದೆ.
ಭಾರತೀಯ ಏಕದಿನ ಕ್ರಿಕೆಟ್ ತಂಡದ ನಾಯಕ ಶುಭ್ಮನ್ ಗಿಲ್, ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ನಿವೃತ್ತಿಯ ಬಗೆಗಿನ ಎಲ್ಲಾ ವದಂತಿಗಳಿಗೆ ಸಂಪೂರ್ಣ ಬ್ರೇಕ್ ಹಾಕಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಿಲ್, ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್ ಯೋಜನೆಯಲ್ಲಿ ಕೊಹ್ಲಿ ಮತ್ತು ರೋಹಿತ್ ಪ್ರಮುಖ ಆಧಾರಸ್ತಂಭಗಳಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಈ ಸರಣಿಯ ಆರಂಭಕ್ಕೆ ಮುನ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ತರಬೇತಿ ಅವಧಿಯಲ್ಲಿ ಶುಭ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಸುದೀರ್ಘ ಚರ್ಚೆಯಲ್ಲಿ ತೊಡಗಿದ್ದರು. ಈ ಬಗ್ಗೆ ಮಾತನಾಡಿದ ಗಿಲ್, “ಕಳೆದ ಎರಡು ದಿನಗಳ ಹಿಂದೆಯಷ್ಟೇ ನಾನು ಮತ್ತು ವಿರಾಟ್ ಭಾಯ್ 2027ರ ವಿಶ್ವಕಪ್ ಯೋಜನೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದೇವೆ. ತಂಡದ ಸಂಯೋಜನೆಗಳು ಹೇಗೆ ಇರಬೇಕು, ಸದ್ಯ ತಂಡದಲ್ಲಿಲ್ಲದಿದ್ದರೂ ಭವಿಷ್ಯದಲ್ಲಿ ಯಾರು ಪ್ರಮುಖ ಪಾತ್ರ ವಹಿಸಬಹುದು ಮತ್ತು ಪ್ರತಿ ಆಟಗಾರನಿಗೆ ಯಾವ ಸ್ಥಾನ ಸೂಕ್ತ ಎಂಬುದರ ಕುರಿತು ನಾವು ಗಂಭೀರವಾಗಿ ಚರ್ಚಿಸಿದ್ದೇವೆ” ಎಂದು ಬಹಿರಂಗಪಡಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರು ತಂಡದಲ್ಲಿ ತಮಗೆ ಬೇಕಾದ ಬದಲಾವಣೆಗಳನ್ನು ತರಲು ಮತ್ತು ವಿರಾಟ್ ಕೊಹ್ಲಿ ಅವರ ಪ್ರಭಾವವನ್ನು ಕೊಂಚ ಸೈಡ್ಲೈನ್ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಚರ್ಚೆಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿರುವುದು ಸುಳ್ಳಲ್ಲ. ಆದರೆ, ಭವಿಷ್ಯದ ನಾಯಕ ಶುಭ್ಮನ್ ಗಿಲ್ ಮಾತ್ರ ಕೊಹ್ಲಿಯ ಆಟ ಹಾಗೂ ಅನುಭವದ ಅನಿವಾರ್ಯತೆಯನ್ನು ಚೆನ್ನಾಗಿ ಅರಿತಿದ್ದಾರೆ.
ಗಂಭೀರ್ ಅವರ ಹೊಸ ಆಲೋಚನೆಗಳ ನಡುವೆಯೂ, ಶುಭ್ಮನ್ ಗಿಲ್ ನೇರವಾಗಿ ‘ಕಿಂಗ್’ ಕೊಹ್ಲಿ ಬಳಿಯೇ ತೆರಳಿ 2027ರ ಭವಿಷ್ಯದ ಬ್ಲೂಪ್ರಿಂಟ್ ಸಿದ್ಧಪಡಿಸುತ್ತಿರುವುದು ತಂಡದಲ್ಲಿ ಕೊಹ್ಲಿ ಸ್ಥಾನ ಅಲುಗಾಡದಂತೆ ಮಾಡಿದೆ. ಕೋಚ್ ಗಂಭೀರ್ ಅವರ ರಣತಂತ್ರ ಏನೇ ಇರಲಿ, ಮೈದಾನದ ಒಳಗೆ ಮತ್ತು ಕಾರ್ಯತಂತ್ರದ ರೂಪುರೇಷೆಯಲ್ಲಿ ವಿರಾಟ್ ಕೊಹ್ಲಿ ಇಂದಿಗೂ ಟೀಮ್ ಇಂಡಿಯಾದ ಅಪ್ರತಿಮ ಮಾರ್ಗದರ್ಶಕ ಹಾಗೂ ‘ಅಧಿಪತಿ’ ಎಂಬುದನ್ನು ಗಿಲ್ ಅವರ ಈ ಮಾಸ್ಟರ್ ಪ್ಲಾನ್ ಸ್ಪಷ್ಟಪಡಿಸಿದೆ.




