ಸೋನಿಯಾ ಗಾಂಧಿ ಹೇಳಿದ್ದೇನು?

ದ್ರೌಪದಿ ಮುರ್ಮು ಅವರ ಭಾಷಣದ ನಂತರ ಪತ್ರಕರ್ತರ ಬಳಿ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ, ರಾಷ್ಟ್ರಪತಿಗಳ ಭಾಷಣ ಬೋರಿಂಗ್ ಆಗಿತ್ತು. ಭಾಷಣದ ಕೊನೆಯಲ್ಲಿ ‘ಪೂವರ್ ಲೇಡಿ’ ದಣಿದಿದ್ದರು ಎಂದಿದ್ದರು. ಸೋನಿಯಾ ಗಾಂಧಿ ಈ ಹೇಳಿಕೆ ನೀಡುವ ವೇಳೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕೂಡ ಹಾಜರಿದ್ದರು. ಸೋನಿಯಾ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ದುರದೃಷ್ಟಕರ ಮತ್ತು ಅವಮಾನಕರ ಹೇಳಿಕೆ ಎಂದು ರಾಷ್ಟ್ರಪತಿ ಭವನ ಕೂಡ ಹೇಳಿದೆ.
ಕಾಂಗ್ರೆಸ್ ರಾಜಮನೆತನದ ದುರಹಂಕಾರ: ಮೋದಿ

ಸೋನಿಯಾ ಗಾಂಧಿಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಇಂದು ದೇಶವು ಮತ್ತೆ ಕಾಂಗ್ರೆಸ್ ರಾಜಮನೆತನದ ದುರಹಂಕಾರವನ್ನು ನೋಡಿದೆ ಎಂದು ಹೇಳಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನಲ್ಲಿ ಮಾತನಾಡಿದರು. ಅಭಿವೃದ್ಧಿ ಹೊಂದಿದ ಭಾರತದ ಸಾಧನೆಗಳು ಮತ್ತು ದೂರದೃಷ್ಟಿಯ ಬಗ್ಗೆ ದೇಶವಾಸಿಗಳಿಗೆ ತಿಳಿಸಿದರು. ಹಿಂದಿ ಅವರ ಮಾತೃಭಾಷೆಯಲ್ಲ, ಆದರೂ ಅವರು ಅತ್ಯುತ್ತಮ ಭಾಷಣ ಮಾಡಿದರು. ಆದರೆ ಕಾಂಗ್ರೆಸ್ನ ರಾಜಮನೆತನದವರು ಅವರನ್ನು ಅವಮಾನಿಸಿದರು ಎಂದು ಮೋದಿ ಹೇಳಿದ್ದಾರೆ. ಕಾಂಗ್ರೆಸ್ನವರು ರಾಷ್ಟ್ರಪತಿಗಳನ್ನು ಪೂವರ್ ಲೇಡಿ ಎಂದು ಕರೆದಿದ್ದಾರೆ. ದಣಿದವರು ಎಂದು ಜರೆದಿದ್ದಾರೆ. ಇದು ದೇಶದ ಆದಿವಾಸಿ ಸಹೋದರ ಸಹೋದರಿಯರಿಗೆ ಮಾಡಿದ ಅವಮಾನ ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.





