ಭಾರತದಲ್ಲಿ ಈ ವರ್ಷ ಹೆಚ್ಚು ವೈರಲ್ ಆದ ಟಾಪ್-5 ಸುದ್ದಿಗಳ ವಿವರಗಳು ಇಲ್ಲಿವೆ. ಇವುಗಳಲ್ಲಿ ವಿವಿಧ ವಲಯಗಳ ಸುದ್ದಿಗಳು ಸೇರಿವೆ. ಈ ಸುದ್ದಿಗಳ ಬಗ್ಗೆ ನಡೆದ ಚರ್ಚೆಯನ್ನು ಸಹ ಕಡೆಗಣಿಸುವಂತಿಲ್ಲ. ಕೆಲವು ಸುದ್ದಿಗಳಂತೂ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಹುಟ್ಟು ಹಾಕಿತ್ತು.
ಈ ವರ್ಷ ವೈರಲ್ ಆದ ಭಾರತದ ಸುದ್ದಿಗಳು ಯಾವುವು?
ಟಾಪ್-1, ಅನಂತ್-ರಾಧಿಕಾ ವಿವಾಹ: ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ, ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಭಾರತ ಮಾತ್ರವಲ್ಲ ವಿಶ್ವಮಟ್ಟದಲ್ಲಿ ಸುದ್ದಿ ಮಾಡಿತು. ಜುಲೈನಲ್ಲಿ ನಡೆದ ಈ ವಿವಾಹ, ವಿವಾಹದ ಪೂರ್ವಭಾವಿ ಕಾರ್ಯಕ್ರಮಗಳಲ್ಲಿ ರಾಜಕೀಯ ನಾಯಕರು, ಕ್ರಿಕೆಟ್ ಆಟಗಾರರು, ವಿವಿಧ ಭಾಷೆಗಳ ನಟರು ಪಾಲ್ಗೊಂಡರು. ಸಾವಿರಾರು ಕೋಟಿ ರೂಪಾಯಿ ಖರ್ಚಿನಲ್ಲಿ ನಡೆದ ವಿವಾಹ ಮಹೋತ್ಸವಕ್ಕೆ ಅಂತರಾಷ್ಟ್ರೀಯ ಮಟ್ಟದ ಗಣ್ಯರು ಸಹ ಆಗಮಿಸಿದ್ದರು. ಅಚ್ಚುಕಟ್ಟಾಗಿ ನಡೆದ ವಿವಾಹ ಕಾರ್ಯಕ್ರಮ ದೇಶದಲ್ಲಿ ಹಲವು ದಿನಗಳ ಕಾಲ ಚರ್ಚೆಗೆ ಕಾರಣವಾಗಿತ್ತು.

ಟಾಪ್-2, ಲೋಕಸಭೆ ಚುನಾವಣೆ: ಈ ವರ್ಷ ಭಾರತದಲ್ಲಿ ಲೋಕಸಭೆ ಚುನಾವಣೆ ನಡೆದು ಹೊಸ ಸರ್ಕಾರ ಅಧಿಕಾರಕ್ಕೆ ಬಂದಿತು. ಕೇಂದ್ರ ಚುನಾವಣಾ ಆಯೋಗ ಮಾರ್ಚ್ 16ರಂದು ಲೋಕಸಭೆ ಚುನಾವಣೆ ವೇಳಾಪಟ್ಟಿ ಘೋಷಣೆ ಮಾಡಿತು. ಏಪ್ರಿಲ್ 19 ರಿಂದ ಜೂನ್ 1ರ ತನಕ ಒಟ್ಟು 7 ಹಂತದಲ್ಲಿ 543 ಸದಸ್ಯ ಬಲದ ಲೋಕಸಭೆಗೆ ಮತದಾನ ನಡೆಯಿತು. ಜೂನ್ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಯಿತು. ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25, ಜೂನ್ 1ರಂದು ಒಟ್ಟು 7 ಹಂತದಲ್ಲಿ ಮತದಾನ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿಯೇ ಮತ್ತೊಮ್ಮೆ ಎನ್ಡಿಎ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದಿತು.

ಟಾಪ್-3, ವಿಶ್ವ ಚಾಂಪಿಯನ್ ಆದ ಭಾರತ: ಈ ವರ್ಷ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ನಲ್ಲಿ ನಡೆಯಿತು. ಆದರೆ ಭಾರತ 11 ವರ್ಷಗಳ ಬಳಿಕ ಕಪ್ ಗೆದ್ದ ಕಾರಣ ಭಾರತದಲ್ಲಿ ಈ ಸುದ್ದಿ ಬಹಳ ವೈರಲ್ ಆಯಿತು. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 7 ರನ್ಗಳ ರೋಚಕ ಜಯ ಸಾಧಿಸುವ ಮೂಲಕ ವಿಶ್ವ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿತು. ತವರಿಗೆ ಮರಳಿಗೆ ಭಾರತೀಯ ಆಟಗಾರರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಈ ಕುರಿತು ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಿ ಹೋದವು.

ಟಾಪ್-4, ಕಲ್ಕಿ ಸಿನಿಮಾ ಬಿಡುಗಡೆ: ಜೂನ್ನಲ್ಲಿ ಬಿಡುಗಡೆಯಾದ ಕಲ್ಕಿ 2898 AD ಚಲನಚಿತ್ರ ಈ ವರ್ಷ ದೇಶದಲ್ಲಿ ಚಲನಚಿತ್ರ ವಿಭಾಗದಲ್ಲಿ ಭಾರೀ ಸುದ್ದಿ ಮಾಡಿತು. ಪ್ರಭಾಸ್, ದೀಪಿಕಾ ಪಡುಕೋಣೆ ಅಲ್ಲದೇ ಹಲವು ಹಿರಿಯ ಕಲಾವಿದರ ದಂಡೇ ಇರುವ ಚಿತ್ರ ಬಾಕ್ಸ್ ಅಫೀಸ್ನಲ್ಲಿ ಸಖತ್ ಸದ್ದು ಮಾಡಿತು. 1000 ಕೋಟಿ ಕ್ಲಬ್ ಸೇರಿದ ಕಲ್ಕಿ ಸಿನಿಮಾ, ಮಹಾಭಾರತದ ಹಿನ್ನೆಲೆಯಲ್ಲಿ ತಯಾರಾಗಿತ್ತು. ಈ ಸಿನಿಮಾ ಬಗ್ಗೆ ದೇಶದಲ್ಲಿ ಭಾರೀ ಚರ್ಚೆ ನಡೆಯಿತು. ಸಿನಿಮಾ ಕುರಿತ ಸುದ್ದಿಗಳು ವೈರಲ್ ಆದವು.

ಟಾಪ್-5, ಉದ್ಯಮಿ ರತನ್ ಟಾಟಾ ಅಗಲಿಕೆ: ಖ್ಯಾತ ಉದ್ಯಮಿ, ಟಾಟಾ ಸನ್ಸ್ ಗೌರವಾಧ್ಯಕ್ಷ ಹಾಗೂ ಕೊಡುಗೈ ದಾನಿಯಾಗಿದ್ದ ರತನ್ ಟಾಟಾ (86) ಅಕ್ಟೋಬರ್ನಲ್ಲಿ ಮುಂಬೈನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಭಾರತ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ದೇಶಗಳ ಗಣ್ಯರು ರತನ್ ಟಾಟಾ ಆಗಲಿಕೆಗೆ ಸಂತಾಪವನ್ನು ಸೂಚಿಸಿದರು.






