
ಕೇಂದ್ರ ಸರ್ಕಾರದ ಆದೇಶವೇನು?
ಮಾ. 28ರಂದು ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ, ಪ್ರತಿ ವರ್ಷ ಏ. 14ರಂದು ಸ್ಮರಿಸುವ ಅಂಬೇಡ್ಕರ್ ಜನ್ಮದಿನವನ್ನು ಸಾರ್ವತ್ರಿಕ ರಜೆಯನ್ನಾಗಿ ಘೋಷಿಸಿತ್ತು. ಅಂದರೆ, ಅದುವರೆಗೆ ಅದು ಸಾರ್ವತ್ರಿಕ ರಜೆಯಾಗಿರಲಿಲ್ಲ. ಅಂದರೆ, ಸರ್ಕಾರಿ ಕಚೇರಿಗಳಷ್ಟೇ ರಜೆ ಮೀಸಲಾಗಿರುತ್ತಿತ್ತು. ಇದೀಗ ಕೇಂದ್ರ ಸರ್ಕಾರದ ಆದೇಶದ ತರುವಾಯ ಅಂಬೇಡ್ಕರ್ ಜಯಂತಿಯನ್ನು ಖಾಸಗಿ ಕಂಪನಿಗಳಲ್ಲೂ ಆಚರಿಸಿ ಅಂದು ಕಡ್ಡಾಯ ರಜೆ ಘೋಷಿಸಬೇಕಿದೆ. ಈ ಆದೇಶದ ವಿರುದ್ಧ ಅನುರಾಧಾ ತಿವಾರಿ ಕಿಡಿಕಾರಿದ್ದಾರೆ. “ರಾಮನವಮಿಯಂದು ಸಾರ್ವತ್ರಿಕ ರಜೆಯಿಲ್ಲ. ಹೋಳಿಗೆ ಸಾರ್ವತ್ರಿಕ ರಜೆಯಿಲ್ಲ. ಜನ್ಮಾಷ್ಟಮಿಯಂದು ಸಾರ್ವತ್ರಿಕ ರಜೆಯಿಲ್ಲ, ಮಹಾ ಶಿವರಾತ್ರಿಗೆ ಸಾರ್ವತ್ರಿಕ ರಜೆಯಿಲ್ಲ. ಆದರೆ, ಅಂಬೇಡ್ಕರ್ ಜಯಂತಿಗೆ ಮಾತ್ರ ಸಾರ್ವತ್ರಿಕ ರಜೆ ನೀಡಲಾಗಿದೆ. ನೀವು ಹಿಂದೂಗಳಾಗಿದ್ದರೆ ನಿಮ್ಮ ಬಹುತೇಕ ಹಬ್ಬಗಳಿಗೆ ಸಾರ್ವತ್ರಿಕ ರಜೆಯಿರುವುದಿಲ್ಲ. ಆದರೆ, ನೀವು ವೋಟ್ ಬ್ಯಾಂಕ್ ಆಗಿದ್ದರೆ ನಿಮ್ಮ ಜನನಾಯಕನ ಜನ್ಮದಿನವನ್ನು ಸಾರ್ವತ್ರಿಕ ಕಡ್ಡಾಯ ರಜೆ ಎಂದು ಘೋಷಿಸಲಾಗುತ್ತದೆ‘’ ಎಂದು ಹೇಳಿದ್ದಾರೆ. ಇದಕ್ಕೆ ಹಲವಾರು ಮಂದಿ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ತಿವಾರಿಯವರ ಪೋಸ್ಟ್ ಗೆ ಕೆಲವರು ಬೆಂಬಲ ಸೂಚಿಸಿದ್ದಾರೆ. ಭಾರತೀಯ್ ನಿವೇಶ್ ಎಂಬ ಟ್ವಿಟರ್ ಖಾತೆಯಿಂದ ಬಂದಿರುವ ಟ್ವೀಟ್ ನಲ್ಲಿ, “ಈ ಭೂಮಿಯಲ್ಲಿ ಇರುವ ಯಾರಿಗೂ ಅಂಬೇಡ್ಕರ್ ಜಯಂತಿ, ಗಾಂಧಿ ಜಯಂತಿ ಬೇಕಿಲ್ಲ. ನಮಗೆ ಬೇಕಿರುವುದು ನಮ್ಮ ಹಿಂದೂ ಹಬ್ಬಗಳಿಗೆ ರಜೆ. ಆದರೆ, ಸರ್ಕಾರದ ಮಟ್ಟದಲ್ಲಿರುವವರಿಗೆ ಅವರಿಗೆ ಯಾರನ್ನೋ ಮೆಚ್ಚಿಸುವದಷ್ಟೇ ಬೇಕು. ಹಾಗಾಗಿ, ಅವರ ಜನನಾಯಕನ ಹುಟ್ಟುಹಬ್ಬಕ್ಕೆ ರಜೆ ಘೋಷಿಸಿದ್ದಾರೆ’’ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ದೇಶದ ಹೊಸ ದೇವರಾಗಿ ಅಂಬೇಡ್ಕರ್ ಉದಯಿಸಿದ್ದಾರೆ. ಅದಕ್ಕಾಗಿಯೇ ಅವರ ಜನ್ಮದಿನವನ್ನು ಸಾರ್ವತ್ರಿಕ ಕಡ್ಡಾಯ ರಜೆ ಎಂದು ಹೇಳಿದ್ದಾರೆ ಎಂದಿದ್ದಾರೆ. ಆದರೆ, ಇದಕ್ಕೆ ಹೆಚ್ಚಿನವರು ತಿರುಗೇಟು ನೀಡಿದ್ದಾರೆ. ದಿವಿಕಾಂತ್ ಎಂಬವರು, “ಹಿಂದೂ ಹಬ್ಬಗಳಿಗೆ ತಿಂಗಳಿಗೆ ಒಂದು, ಎರಡು ಇದ್ದೇ ಇರುತ್ತವೆ. ಹೀಗೆ, ಎಲ್ಲದಕ್ಕೂ ರಜೆ ಕೊಡುತ್ತಾ ಹೋದರೆ ದೇಶದ ಪ್ರೊಡಕ್ಟಿವಿಟಿ ಇಂಪ್ರೂವ್ ಆಗೋದಾದರೂ ಹೇಗೆ’’ ಎಂದು ಕೇಳಿದ್ದಾರೆ.ಮತ್ತೊಬ್ಬರು, ಅಂಬೇಡ್ಕರ್ ಅವರು ಈ ದೇಶದ ಎಲ್ಲರಿಗೂ ವಿದ್ಯಾಭ್ಯಾಸವನ್ನು ಸಮಾನವಾಗಿ ಹಂಚಿದರು. ನಿಮ್ಮ ಪೂರ್ವಿಕರು ಹಂಚಿಲ್ಲ. ಹಾಗಾಗಿ, ಅವರ ಜನ್ಮದಿನವನ್ನು ಸಾರ್ವತ್ರಿಕ ರಜೆಯನ್ನಾಗಿ ಮಾಡಿದರೆ ನಿಮಗೇನು ಕಷ್ಟ ಎಂದು ಕೇಳಿದ್ದಾರೆ.
ವಿವಾದಾತ್ಮಕ ಪೋಸ್ಟ್ ಹಾಕುವ ತಿವಾರಿ

ಅನುರಾಧಾ ತಿವಾರಿ ಅವರು ಕಳೆದ ವರ್ಷ ಮೀಸಲಾತಿಯನ್ನು ವಿರೋಧಿಸಿ ಹಾಕಿದ್ದ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದವು. ಕಳೆದ ವರ್ಷ ಆಗಸ್ಟ್ ನಲ್ಲಿ ಅವರು ಹಾಕಿದ್ದ ಬ್ರಾಹ್ಮಿನ್ ಜೀನ್ಸ್ ಎಂಬ ಪೋಸ್ಟ್ ಕೂಡ ವೈರಲ್ ಆಗಿತ್ತು. ಆದರೆ, ಅದಕ್ಕೆ ಅನೇಕ ವಿರೋಧಗಳೂ ವ್ಯಕ್ತವಾಗಿದ್ದವು. ಆದರೆ, ಅಂಥ ವಿರೋಧಗಳನ್ನೂ ವಿರೋಧಿಸಿದ್ದ ಅವರು, ಈ ಎಲ್ಲಾ ವಿರೋಧಗಳು ನೈಜ ಜಾತಿವಾದಿಗಳ ಬಣ್ಣವನ್ನು ಬಯಲು ಮಾಡಿದೆ. ಕಡೆಯವರೆಗೂ ಬ್ರಾಹ್ಮಣಳಾಗಿಯೇ ಉಳಿಯುತ್ತೇನೆ’’ ಎಂದಿದ್ದರು.





