
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸದ್ಯ 2025ರ ಐಪಿಎಲ್ ಸೀಸನ್ನಲ್ಲಿ ಅಗ್ರಸಿಂಹಾಸನದಲ್ಲಿ ಆಸನವಾಗಿದೆ. ಎಲ್ಲ ಟೀಮ್ಗಳಿಗೂ ಟಕ್ಕರ್ ಕೊಟ್ಟ ಆರ್ಸಿಬಿ ಈ ಸಲ ಕಪ್ ಗೆಲ್ಲುವ ಹಾಟ್ ಫೇವರಿಟ್ ಟೀಮ್ ಎನಿಸಿದೆ. 18 ವರ್ಷಗಳ ಕನಸನ್ನು ನನಸು ಮಾಡಲು ಆರ್ಸಿಬಿಯ ಕ್ಯಾಪ್ಟನ್ ರಜತ್ ಪಾಟಿದಾರ್ ಸೇರಿ ಮೂವರು ಆಟಗಾರರು ತಿಮ್ಮಪ್ಪನ ಮೊರೆ ಹೋಗಿದ್ದಾರೆ..

ಈ ಸಲ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ತಂಡದ ವಿರುದ್ಧದ ಭರ್ಜರಿ ಜಯ ಗಳಿಸಿದ್ದ ಆರ್ಸಿಬಿ ಇದರ ಬೆನ್ನಲ್ಲೇ 17 ವರ್ಷಗಳ ಬಳಿಕ ಚೆನ್ನೈ ಅನ್ನು ಅವರ ಪಿಚ್ನಲ್ಲೇ ಮಣಿಸಿ ವಿಜಯಭೇರಿ ಬಾರಿಸಿತ್ತು. ಈ ವಿಜಯ ಈಗಲೂ ಮುಂದುವರೆದಿದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಅಗ್ರಜನಾಗಿ ಆರ್ಸಿಬಿ ಆಸನವಾಗಿದೆ. 18 ವರ್ಷಗಳ ಟ್ರೋಫಿ ಬರವನ್ನು ಈ ವರ್ಷ ನೀಗಿಸಲು ನಾಯಕ ರಜತ್ ಪಾಟಿದಾರ್ ಉತ್ಸುಕರಾಗಿದ್ದಾರೆ. ಇದರಿಂದಲೇ ಆಂಧ್ರದಲ್ಲಿರುವ ತಿರುಪತಿಯ ಶ್ರೀವೆಂಕಟೇಶ್ವರ ಸ್ವಾಮಿಯ ದಿವ್ಯ ದರ್ಶನ ಪಡೆದುಕೊಂಡಿದ್ದಾರೆ.

ಆರ್ಸಿಬಿ ಪ್ಲೇಯರ್ಸ್ ದೇವಾಲಯಕ್ಕೆ ಬರುವ ಕುರಿತು ಮೊದಲೇ ಮಾಹಿತಿ ಇದ್ದಿದ್ದರಿಂದ ಅಲ್ಲಿನ ಸಿಬ್ಬಂದಿ ವಿಶೇಷ ವ್ಯವಸ್ಥೆ ಮಾಡಿದ್ದರು. ಆದರೆ ನಾಯಕ ರಜತ್ ಪಾಟಿದಾರ್ ಅವರು ವಿಶೇಷ ವ್ಯವಸ್ಥೆ ನಿರಾಕರಿಸಿ ಎಲ್ಲರಂತೆ ಕ್ಯೂನಲ್ಲಿ ಬಂದು ಗೋವಿಂದನ ದರ್ಶನ ಪಡೆದಿದ್ದಾರೆ. ಅಷ್ಟೇ ಅಲ್ಲ, ರಂಗನಾಯಕ ಪಂಟಪದಲ್ಲಿ ಕೊಡುವ ತೀರ್ಥಪ್ರಸಾದಂ ಕೂಡ ಸಾಲಿನಲ್ಲಿ ನಿಂತು ತೆಗೆದುಕೊಂಡಿದ್ದಾರೆ. ದೇವರನ್ನು ನೋಡಿ, ದರ್ಶನ ಪಡೆದಿರುವುದು ತುಂಬಾ ಖುಷಿ ಆಗಿದೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.





