
ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಡುಪಿ ಶ್ರೀ ಕೃಷ್ಣ ಮಠದಿಂದ ಹಲವು ದಶಕಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಹಿಂದೆಯೂ ಹಲವು ಬಾರಿ ಕೃಷ್ಣಮಠದಿಂದ ವಿವಿಧ ಕಾರ್ಯಕ್ರಮಗಳಿಗೆ ಆಹ್ವಾನ ನೀಡಲಾಗಿತ್ತು. ಮುಖ್ಯಮಂತ್ರಿಗಳು ಉಡುಪಿಗೆ ಭೇಟಿ ನೀಡಿದಾಗಲೂ, ಕೃಷ್ಣ ಮಠದೊಂದಿಗೆ ಅಂತರ ಕಾಯ್ದುಕೊಂಡಿದ್ದರು. ಆದರೆ, ಈ ಬಾರಿಯ ಕೃಷ್ಣ ಜನ್ಮಾಷ್ಟಮಿಗೆ ಸಿದ್ದರಾಮಯ್ಯ ತೆರಳುತ್ತಾರಾ? ಕಾದು ನೋಡಬೇಕಿದೆ.
ದಶಕಗಳ ಹಿಂದೆ ಶ್ರೀಕೃಷ್ಣ ಮಠದಲ್ಲಿ ಕನಕ ಗೋಪುರ ವಿವಾದಕ್ಕೆ ಕಾರಣವಾಗಿತ್ತ್ತು. ಮಠದ ವಿರುದ್ಧದ ಪ್ರತಿಭಟನೆಯ ನೇತೃತ್ವವನ್ನು ಸಿದ್ದರಾಮಯ್ಯ ಅವರೇ ವಹಿಸಿಕೊಂಡಿದ್ದರು. ಅಂದಿನಿಂದ ಇಲ್ಲಿಯವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಶಕಗಳಿಂದಲೂ ಕೃಷ್ಣ ಮಠದೊಂದಿಗೆ ಯಾವುದೇ ಭಾಂದವ್ಯ ಹೊಂದಿಲ್ಲ ಎಂದು ತಿಳಿದುಬಂದಿದೆ.

ಏನಿದು ಕನಕ ಗೋಪುರ ವಿವಾದ?
ದಶಕಗಳ ಹಿಂದೆ ಉಡುಪಿ ಶ್ರೀ ಕೃಷ್ಣ ದೇಗುಲ ಹೊರಭಾಗದಲ್ಲಿ ಪುರಸಭೆ ಜಾಗದಲ್ಲಿದ್ದ ಹಳೆಯ ಕನಕ ಗೋಪುರ ಶಿಥಿಲಗೊಂಡಿತ್ತು. ಹೀಗಾಗಿ, ಕನಕ ಗೋಪುರವನ್ನು ತೆರವುಗೊಳಿಸಲಾಗಿತ್ತು. ಈ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಉಡಪಿ ಶ್ರೀ ಕೃಷ್ಣ ಮಠದ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಈ ಪ್ರತಿಭಟನೆಯ ನೇತೃತ್ವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಹಿಸಿಕೊಂಡಿದ್ದರು.
ಬಳಿಕ, ವಿಶ್ವೇಶತೀರ್ಥ ಶ್ರೀಪಾದರು ಪ್ರತಿಭಟನಾಕಾರರನ್ನು ಕರೆಸಿ ಮಾತನಾಡಿ, ಕನಕ ಪ್ರತಿಮೆ ಸಹಿತ ಗೋಪುರ ನಿರ್ಮಾಣ ಮಾಡಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಣೆಯಾಗುವಂತೆ ಮಾಡಿದರು. ಅಂದಿನಿಂದ ಇಲ್ಲಿಯವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷ್ಣ ಮಠದೊಂದಿಗೆ ಯಾವುದೇ ಭಾಂದವ್ಯ ಹೊಂದಿಲ್ಲ.





