ಧಾರವಾಡ: “ತುರ್ತು ಪರಿಸ್ಥಿತಿಗಿಂತ ಕೆಟ್ಟ ಪರಿಸ್ಥಿತಿಯಲ್ಲಿ ಇವತ್ತು ದೇಶವಿದೆ. ಆ ಬಗ್ಗೆ ಬಿಜೆಪಿಯವರು ಚರ್ಚೆ ಮಾಡ್ತಾರಾ?. ಪಹಲ್ಗಾಮ್, ಪುಲ್ವಾಮಾ ದಾಳಿ ಕುರಿತು ಕೇಳಬಾರದು ಎಂದು ಅವರು ಇಂಥ ಅಭಿಯಾನಗಳನ್ನು ತರುತ್ತಿದ್ದಾರೆ. ವಿಷಯಾಧಾರಿತ ಸಮಸ್ಯೆಗಳು ಜನರಿಗೆ ಗೊತ್ತಾಗಬಾರದೆಂಬುದು ಇವರ ಉದ್ದೇಶ” ಎಂದು ಸಚಿವ ಸಂತೋಷ್ ಲಾಡ್ ಟೀಕಿಸಿದರು.
“ಇವರ ಪ್ರಕಾರ ನಮ್ಮನ್ನು ಯಾವುದೇ ಬೇರೆ ದೇಶಕ್ಕೆ ಹೋಲಿಸಿ ನೋಡುವಂತಿಲ್ಲ. ಬೇರೆ ರಾಜ್ಯಕ್ಕೂ ಹೋಲಿಸಿ ನೋಡುವಂತಿಲ್ಲ. ನಮ್ಮ ದೇಶವೇ ಗ್ರೇಟ್, ನಮ್ಮ ಪ್ರಧಾನಿಯೇ ಗ್ರೇಟ್. ತುರ್ತು ಪರಿಸ್ಥಿತಿ ಈಗ ಪ್ರಸ್ತುತವೇ? ಚರ್ಚಿಸುವ ವಿಷಯವೇ? ಎಂದು ಅವರು ಕೇಳಿದರು. ಇದೇ ವೇಳೆ, ಈ ಬಾರಿಯ ದಸರಾವನ್ನು ಹೊಸ ಸಿಎಂ ಉದ್ಘಾಟನೆ ಮಾಡಲಿದ್ದಾರೆ ಎಂಬ ಆರ್.ಅಶೋಕ್ ಹೇಳಿಕೆಗೆ, “ಯಾರು ಸಿಎಂ ಆಗ್ತಾರೆ ಅಂತ ಅಶೋಕ್ ಅವರನ್ನೇ ಕೇಳಬೇಕು” ಎಂದರು.
“ಡಿಕ್ಟೇಟರ್ಶಿಪ್ ಕಾಂಗ್ರೆಸ್ ಪಕ್ಷದ ರಕ್ತ, ಡಿಎನ್ಎಯಲ್ಲೇ ಇದೆ” ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶನಿವಾರ ವಾಗ್ದಾಳಿ ನಡೆಸಿದರು. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ತುರ್ತು ಪರಿಸ್ಥಿತಿ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಮ್ಯೂನಿಸ್ಟ್ ಪಾರ್ಟಿಯ ಸರ್ಕಾರ ಕಿತ್ತೊಗೆದರು. ಅಂಬೇಡ್ಕರ್ ಅವರನ್ನು ರಾಜಕೀಯವಾಗಿ ತುಳಿದ ಪಕ್ಷ ಕಾಂಗ್ರೆಸ್. ಕರುಣಾನಿಧಿಯವರನ್ನು ಒಳಗೆ ಹಾಕಿಸಿದರು. ಇಂದಿರಾ ಗಾಂಧಿ ಹಿಟ್ಲರ್ ಅವರಂತೆ ವರ್ತಿಸಿದರು. 50 ವರ್ಷಗಳ ಹಿಂದೆ ಕಾಂಗ್ರೆಸ್ ಪಾರ್ಟಿ ಹೇಗೆ ನಡೆದುಕೊಂಡಿತ್ತು ಎಂನ್ನುವುದನ್ನು ತಿಳಿಸುವುದೇ ಈ ಕಾರ್ಯಕ್ರಮದ ಉದ್ದೇಶ. ಜಾತ್ಯತೀತತೆ ನಮ್ಮ ರಕ್ತದಲ್ಲಿದೆ. ಬಸವಣ್ಣನವರ ಕಾಲದಲ್ಲೇ ಜಾತ್ಯತೀತತೆ ಇತ್ತು. ನಾವು ಕಾಂಗ್ರೆಸ್ ಪಕ್ಷದಿಂದ ಕಲಿಯಬೇಕಿಲ್ಲ” ಎಂದು ವಾಕ್ಸಮರ ನಡೆಸಿದರು.





