
ಬೆಂಗಳೂರು, ಜುಲೈ 15: ತಾವು ಎಸ್ಸಿ ಎಸ್ಟಿ (SC ST) ಪರ, ಹಿಂದುಳಿದ ವರ್ಗಗಳ ಹಿತ ಕಾಯುವುದೇ ಆದ್ಯತೆ ಹಾಗೂ ಸಂವಿಧಾನಾತ್ಮಕಾಗಿಯೇ ಆಡಳಿತ ನಡೆಸುವುದು ಎಂದೇ ಸದಾ ಬಿಂಬಿಸಿಕೊಂಡು ಬಂದಿರುವ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿಯೇ ಹಿಂದುಳಿದ ವರ್ಗಗಳ ನೌಕರರಿಗೆ ಸಮಸ್ಯೆಯಾಗುತ್ತಿದೆಯೇ? ಇಂಥದ್ದೊಂದು ಪ್ರಶ್ನೆಗೆ ಈಗ ನಡೆದಿರುವ ಬೆಳವಣಿಗೆ ಕಾರಣವಾಗಿದೆ. ಎಸ್ಸಿ ಎಸ್ಟಿ ನೌಕರರ ಮುಂಬಡ್ತಿಯಲ್ಲಿ ನಿಯಮ ಪಾಲನೆಯಾಗುತ್ತಿಲ್ಲ. ಈ ಕುರಿತು ಗಮನಹರಿಸಿ ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ಸಿಎಂ ಸಿದ್ದರಾಮಯ್ಯಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ./ಎಸ್.ಟಿ. ನೌಕರರ ಸಂಘದವರು ಎಸ್.ಸಿ.ಎಸ್.ಟಿ ನೌಕರರಿಗೆ ಮುಂಬಡ್ತಿಯನ್ನು ನೀಡುವಲ್ಲಿ ರೋಸ್ಟರ್ ಬಿಂದುವನ್ನು ಸರ್ಕಾರದ ಆದೇಶದ ಪ್ರಕಾರ ನಗದಿಪಡಿಸಿದ್ದರೂ, ಅದನ್ನು ಕಟುನಿಟ್ಟಾಗಿ ಪಾಲನೆ ಮಾಡಬೇಕೆಂಬ ನಿರ್ದೇಶನವಿದ್ದರೂ ಕೆಲವು ಇಲಾಖೆಗಳ ಅಧಿಕಾರಿಗಳು ಪಾಲನೆ ಮಾಡದಿರುವ ಬಗ್ಗೆ ಪತ್ರಿಕೆಯಲ್ಲಿ ಬಂದಿರುವ ಕೆಲವು ಪ್ರಮುಖ ಅಂಶಗಳ ಜೊತೆಗೆ ಈ ವಿಚಾರವಾಗಿ ನಿಮಗೂ ಕೂಡ ಬರೆದಿರುವ ಪತ್ರದ ಪ್ರತಿಯನ್ನು ಸಂಘದ ಅಧ್ಯಕ್ಷರು ನನ್ನ ಗಮನಕ್ಕೆ ತಂದಿದ್ದಾರೆ.

ಇದರ ಜೊತೆ ಲಗತ್ತಿಸಿರುವ ಪತ್ರಿಕೆಯಲ್ಲಿ ಬಂದಿರುವ ವಿವರಗಳನ್ನು ಹಾಗೂ ಸಂಘದವರು ನಿಮಗೆ ಈಗಾಗಲೇ ನೀಡಿರುವ ಪತ್ರವನ್ನು ಸ್ವತಃ ಅವಲೋಕಿಸುವುದರ ಜೊತೆಗೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ವಿವರವಾಗಿ ಚರ್ಚಿಸಿ ಸರ್ಕಾರವೇ ಹೊರಡಿಸಿರುವ ಅದೇಶ ಹಾಗೂ ಸುತ್ತೋಲೆಗಳಲ್ಲಿ ತಿಳಿಸಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸ್ಪಷ್ಟ ಆದೇಶವನ್ನು ನೀಡುವುದು ಸೂಕ್ತ. ಇಲ್ಲದಿದ್ದರೆ ಅಧಿಕಾರಿಗಳ ಮಟ್ಟದಲ್ಲಿ ಅಸಮಧಾನ ಉಂಟಾಗಿ ಸರ್ಕಾರದ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆಯಲು ಕಷ್ಟವಾಗುತ್ತದೆ ಎಂದು ಖರ್ಗೆ ಅವರು ಸಿದ್ದರಾಮಯ್ಯಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.





