ಮೈಸೂರು : ದೇಶದಲ್ಲಿ ಚುನಾವಣಾ ಅವ್ಯವಹಾರ ನಡೆಯುತ್ತಿದೆ. ಮತಗಳ್ಳತನದ ವಿರುದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಧ್ವನಿ ಎತ್ತಿದ್ದಾರೆ. ಹೀಗಾಗಿ ನೀವು ಕೂಡ ಹೋರಾಟ ನಡೆಸಿ ರಾಹುಲ್ ಗಾಂಧಿ ಅವರ ಜೊತೆ ಕೈ ಜೊಡಿಸಿ ಎಂದು ಸಾರ್ವಜನಿಕರಿಗೆ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಕರೆ ನೀಡಿದರು.
ವರುಣಾ ಕ್ಷೇತ್ರ ಕಾರ್ಯಕ್ರಮದಲ್ಲಿ ಮಾತನಾಡಿದ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ, ವರುಣಾ ಕ್ಷೇತ್ರ ನಮ್ಮ ಕ್ಷೇತ್ರ ನಮ್ಮ ಮನೆ. ವರುಣಾದಲ್ಲಿ 1108 ಕೋಟಿ ವೆಚ್ಚದಲ್ಲಿ ಕಾಮಗಾರಿ ಮಾಡುತ್ತಿದ್ದೇವೆ. ಕಳೆದ ಬಾರಿ 570 ಕೋಟಿ ಅನುದಾನ ಕೊಟ್ಟಿದ್ದರು. ಇದೀಗ ದುಪ್ಪಟ್ಟು ಅನುದಾನ ಸಿಎಂ ಕೊಟ್ಟಿದ್ದಾರೆ. ಇದರಿಂದ ಅಭಿವೃದ್ಧಿ ವಿಚಾರಕ್ಕೆ ಹಣದ ಕೊರತೆ ಇಲ್ಲ ಎಂದು ತೋರಿಸುತ್ತೆ. ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಯನ್ನು ಟೀಕೆ ಮಾಡುತ್ತಾರೆ. ಗ್ಯಾರೆಂಟಿ ಯೋಜನೆಯಿಂದ ಖಜಾನೆ ಖಾಲಿ ಆಗಿದೆ ಅಂತ ಹೇಳುತ್ತಿದ್ದಾರೆ ಅವರ ಹೇಳಿಕೆಗಳಿಗೆ ಇಂದಿನ ಕಾರ್ಯಕ್ರಮ ಉತ್ತರ. ಕೇವಲ ವರುಣಾ ಅಲ್ಲ ರಾಜ್ಯಾದ್ಯಂತ ಅಭಿವೃದ್ದಿ ನಡೆಯುತ್ತಿದೆ.
ಕರ್ನಾಟಕ ರಾಜ್ಯ ತಲಾ ಆದಾಯದಲ್ಲಿ ಭಾರತದಲ್ಲೆ ಮೊದಲಿದೆ. ಎರಡು ಲಕ್ಷಕ್ಕೂ ಮೀರದ ತಲಾ ಆದಾಯ. ತಲಾ ಆದಾಯ ಹೆಚ್ಚಳಕ್ಕೆ ಗ್ಯಾರಂಟಿ ಯೋಜನೆ ಕಾರಣ. ಜನರ ತೆರಿಗೆ ಹಣ ಅವರಗೆ ವಾಪಸ್ ಕೊಟ್ಟಿದ್ದೇವೆ. ಅದೇ ಹಣವನ್ನು ಅವರು ಖರ್ಚು ಮಾಡಿ ಆರ್ಥಿಕ ಪ್ರಗತಿ ಆಗಿದೆ . ಇದು ಗ್ಯಾರೆಂಟಿ ಯೋಜನೆ ಟೀಕಿಸಿದವರಿಗೆ ಮುಖಕ್ಕೆ ಹೊಡೆದ ಹಾಗೇ ಆಗಿದೆ ಎಂದರು.
ಶ್ರೀಮಂತರು ಹಾಗೂ ಬಡವರ ನಡುವೆ ಆರ್ಥಿಕತೆ ಅಂತರ ಹೆಚ್ಚಾಗುತ್ತಿದೆ. ಇದಕ್ಕೆ ಕೇಂದ್ರದ ನಿಯಮಗಳು ಕಾರಣ. ಇದನ್ನ ನಿವಾರಿಸಲು ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆ ಜಾರಿ ಮಾಡಿದ್ದು. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರ. ಭಾರತದಲ್ಲೆ ಕೊಟ್ಟ ಭರವಸೆ ಈಡೇರಿಸಿದ ಸರ್ಕಾರ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.
ರಾಹುಲ್ ಗಾಂಧಿ ಪ್ರತಿಭಟನೆ ವಿಚಾರ ಕುರಿತು ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ದೇಶದಲ್ಲಿ ಚಯನಾವಣಾ ಅವ್ಯವಹಾರ ನಡೆಯುತ್ತಿದೆ. ಅಡ್ಡದಾರಿಯಿಂದ ಸರ್ಕಾರ ಅಧಿಕಾರಕ್ಕೆ ಬರುತ್ತಿವೆ . ಇದರಲ್ಲಿ ಚುನಾವಣೆ ಆಯೋಗ ಶಾಮೀಲಾಗಿದೆ ಎಂದು ರಾಹುಲ್ ಗಾಂಧಿ ಸಾಕ್ಷಿ ಸಮೇತ ಆರೋಪಿಸಿದ್ದಾರೆ. ಇದರಿಂದ ಜನಾದೇಶಕ್ಕೆ ವಿರುದ್ದವಾದ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಫೇಕ್ ವೋಟರ್ ಐಡಿ ಬಳಸಿ ಮತದಾನ ಮಾಡೋದು. ಪ್ರತಿ ಚುನಾವಣೆ ಫೇಕ್ ಮತದಾರರನ್ನು ಸೇರಿಸಿ ಬಿಜೆಪಿ ಪಕ್ಷ ಗೆದ್ದಿದೆ.
ಎಲೆಕ್ಟ್ರಾನಿಕ್ ಡೇಟಾ ಕೊಡಲು ಚುನಾವಣೆ ಆಯೋಗ ಹಿಂದೇಟು ಹಾಕುತ್ತಿದೆ.. ರಾಹುಲ್ ಗಾಂಧಿ ಯವರ ಪ್ರಶ್ನೆಗೆ ಆಯೋಗ ಉತ್ತರ ಕೊಡುತ್ತಿಲ್ಲ. ಇದರಿಂದ ಈ ಅಕ್ರಮದಲ್ಲಿ ಆಯೋಗ ಶಾಮೀಲಾಗಿದೆ ಎಂಬ ಅನುಮಾನ ಮೂಡಿಸುತ್ತಿದೆ. ಚುನಾವಣೆ ಅಕ್ರಮದಿಂದ ಜನಾದೇಶದ ವಿರುದ್ದ ಫಲಿತಾಂಶ ಬರುತ್ತೆ. ಕೇವಲ ದುಡ್ಡು ಇರುವವರು ಚುನಾವಣೆಯಲ್ಲಿ ಆರಿಸಿ ಬರುತ್ತಾರೆ. ಆದರಿಂದ ರಾಹುಲ್ ಗಾಂಧಿ ಕೊಟ್ಟ ಕರೆಗೆ ನಾವು ಜೊತೆಯಾಗಬೇಕು. ನೀವು ಕೂಡ ಹೋರಾಟ ನಡೆಸಿ ರಾಹುಲ್ ಗಾಂಧಿಯವರಿಗೆ ಕೈ ಜೊಡಿಸಿ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.





