ಮೈಸೂರು: ನಾಲ್ವರು ಯುವಕರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಮೈಸೂರಿನ ಮಂಡಿ ಮೊಹಲ್ಲಾದ ನಿವಾಸಿ ಅಭಿಲಾಷ್ ಹಾಗೂ ರವಿ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆ ನಡೆಸಿದ ನಂಜನಗೂಡಿನ ಸುಭಾಷ್ ಅಲಿಯಾಸ್ ಸುಬ್ಬು, ಆಕಾಶ್ ಅಲಿಯಾಸ್ ಮಿಂಡ್ರಿ, ಸತ್ಯ, ಮಂಟಿ ಎಂಬವರ ಮೇಲೆ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಅಭಿಷೇಕ್ ನಂಜನಗೂಡಿನ ಶ್ರೀರಾಂಪುರದ ಯುವತಿಯನ್ನು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ. ಪತ್ನಿಯ ದೊಡ್ಡಮ್ಮನ ಮಗ ಶಿವಕುಮಾರ್ನನ್ನು ಸುಭಾಷ್, ಆಕಾಶ್, ಸತ್ಯ ಎಂಬವರು ಕಪಿ ಕಪಿ ಎಂದು ಛೇಡಿಸುತ್ತಿದ್ದರು. ಶಿವಕುಮಾರ್ ತಾಯಿ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಮೂವರು ಶಶಿಕುಮಾರ್ ಮೇಲೆ ದ್ವೇಷ ಬೆಳೆಸಿಕೊಂಡಿದ್ದರು. ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಅಭಿಷೇಕ್ ಪತ್ನಿ ಮನೆಗೆ ಬಂದಾಗ, ಶಶಿಕುಮಾರ್ ಅವರ ಅಣ್ಣನನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು.
ಇದೇ ವೇಳೆ ಹೊಂಚು ಹಾಕಿದ ಸುಭಾಷ್ ತಂಡ ಮಂಟಿಯ ಪ್ಯಾಸೆಂಜರ್ ಆಟೋದಲ್ಲಿ ಮಾರಕಾಸ್ತ್ರಗಳ ಸಮೇತ ಬಂದು ಲಾಂಗ್ಗಳನ್ನು ಹಿಡಿದು ಭಯ ಸೃಷ್ಟಿಸಿ ಅಭಿಷೇಕ್ ಮೇಲೆ ದಾಳಿ ಮಾಡಿದ್ದಾರೆ. ಬಿಡಿಸಲು ಬಂದ ಶಶಿಕುಮಾರ್ ಅವರ ಅಣ್ಣ ರವಿ ಮೇಲೂ ದಾಳಿ ಮಾಡಿದ್ದಾರೆ. ಚಾಕು, ಕಬ್ಬಿಣದ ರಾಡ್, ರಿಪೀಸ್ ಪಟ್ಟಿಗಳಿಂದ ಹಲ್ಲೆ ನಡೆಸಿದ್ದಾರೆ. ಇವರಿಂದ ಅಭಿಷೇಕ್ ತಪ್ಪಿಸಿಕೊಂಡು ಓಡಿದರೂ, ಬೆನ್ನಟ್ಟಿಕೊಂಡು ಬಂದ ಆರೋಪಿಗಳು ಹಟ್ಟಿಮಾರಮ್ಮನ ದೇವಸ್ಥಾನದ ಬಳಿ ಹಿಡಿದು ಮತ್ತೆ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದಲೂ ಬೈದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ತೀವ್ರವಾಗಿ ಗಾಯಗೊಂಡ ಅಭಿಷೇಕ್ ಹಾಗೂ ರವಿ ಅವರನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ನಡೆಸಿದ ನಾಲ್ವರ ವಿರುದ್ದ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.





