ನೆಲಮಂಗಲ ತಾಲೂಕಿನ ಅರಳಸಂದ್ರ ಗ್ರಾಮದ ರಸ್ತೆಯಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ಎರಡು ಹಳ್ಳಿಕಾರ್ ತಳಿಯ ಹೋರಿಗಳು ಪತ್ತೆಯಾಗಿವೆ. ಈ ಘಟನೆಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಬಳಿ ಈ ಘಟನೆ ನಡೆದಿದ್ದು, ಅಕ್ರಮ ಸಾಗಣೆಯ ಅನುಮಾನ ವ್ಯಕ್ತವಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.
ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಬಳಿ ಈ ಘಟನೆ ನಡೆದಿದ್ದು, ಅಕ್ರಮ ಸಾಗಣೆಯ ಅನುಮಾನ ವ್ಯಕ್ತವಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.
- ನೆಲಮಂಗಲ ತಾಲೂಕಿನ ಅರಳಸಂದ್ರ ಗ್ರಾಮದಲ್ಲಿ ಅಮಾನವೀಯ ಘಟನೆ
- ಕತ್ತು ಕೊಯ್ದು ಸ್ಥಿತಿಯಲ್ಲಿ 2 ಹಳ್ಳಿಕಾರ್ ಜಾತಿಯ ನಾಟಿ ಹೋರಿಗಳು ಪತ್ತೆ
- ನಾಟಿ ಹೋರಿಗಳನ್ನು ಕಳ್ಳಸಾಗಣೆ ಮಾಡುವ ಉದ್ದೇಶದಿಂದ ಕತ್ತು ಕೊಯ್ದಿರುವ ಅನುಮಾನ
- ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ
ನೆಲಮಂಗಲ: ತಾಲೂಕಿನ ಅರಳಸಂದ್ರ ಗ್ರಾಮದ ರಸ್ತೆಯಲ್ಲಿ ಕತ್ತು ಕೊಯ್ದು ಸ್ಥಿತಿಯಲ್ಲಿ 2 ಹಳ್ಳಿಕಾರ್ ಜಾತಿಯ ನಾಟಿ ಹೋರಿಗಳು ಪತ್ತೆಯಾಗಿದ್ದು, ಅಮಾನವೀಯ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಿಂದ 2 ಕಿಮೀ ದೂರದ ಕುಮುಧ್ವತಿ ನದಿಗೆ ಅಡ್ಡಲಾಗಿ ಅರಳಸಂದ್ರದ ಬಳಿ ನಿರ್ಮಿಸಿರುವ ಸೇತುವೆಯ ಮೇಲೆ ಕತ್ತು ಕೊಯ್ದಿರುವ ಲಕ್ಷಾಂತರ ಬೆಲೆ ಬಾಳುವ ನಾಟಿಹೋರಿಗಳನ್ನು ಭಾನುವಾರ ರಾತ್ರಿ ಎಸೆದು ಹೋಗಿರುವ ಘಟನೆ ಬೆಳಕಿಗೆ ಬಂದಿದ್ದು, ನಾಟಿ ಹೋರಿಗಳ ಮೇಲೆ ಬಣ್ಣದಲ್ಲಿ ನಂಬರ್ ಬರೆದಿರುವ ಪರಿಣಾಮ ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿರುವ ದನಗಳು ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರಸ್ತೆಯ ಮೇಲೆ ಬಿದ್ದಿರುವ ಈ ನಾಟಿ ದನಗಳ ಮೇಲೆ ನಂಬರ್ ಪತ್ತೆಯಾಗಿದ್ದು ಯಾವ ಕಾರಣಕ್ಕೆ ಕತ್ತು ಕೊಯ್ದು ಎಸೆದು ಹೋಗಿದ್ದಾರೆ ಎಂಬುದು ತಿಳಿದುಬಂದಿಲ್ಲ. 2 ಹಸುಗಳ ಕತ್ತಿನ ಭಾಗವನ್ನು ಕೊಯ್ದು ಬೇರೆ ಕಡೆಯಿಂದ ನಮ್ಮ ಗ್ರಾಮದ ಬಳಿ ತಂದು ಹಾಕಿದ್ದಾರೆ, ಈ ಸ್ಥಳದಲ್ಲಿ ಕತ್ತು ಕೊಯ್ದಿದ್ದರೆ ರಕ್ತ ಚೆಲ್ಲಿರಬೇಕಿತ್ತು. ಆ ರೀತಿ ಆಗಿಲ್ಲ. ಸಾಗಣೆ ಮಾಡುವಾಗ ಇಲ್ಲಿ ಎಸೆದು ಹೋಗಿರುವುದು ಕಂಡುಬರುತ್ತದೆ. ಇದು ಬೆಂಗಳೂರಿಗೆ ಅಥವಾ ಬೇರೆ ಭಾಗಕ್ಕೆ ಅಕ್ರಮವಾಗಿ ಸಾಗಣೆ ಮಾಡುವ ಗೋವುಗಳು ಇರಬೇಕು. ಇಂತಹ ಅಮಾನವೀಯ ಕೃತ್ಯದಲ್ಲಿ ಭಾಗಿಯಾಗಿರುವ ಪಾಪಿಗಳನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಗಳನ್ನು ಬಂಧಿಸುತ್ತೇವೆ ಪ್ರಚಾರ ಮಾಡಬೇಡಿ ಎಂದು ಪೊಲೀಸರು ಸ್ಥಳೀಯರನ್ನು ಸ್ಥಳದಿಂದ ಕಳುಹಿಸಿದ್ದಾರೆ.
ಪೊಲೀಸರ ಭೇಟಿ
ಘಟನಾ ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ದೂರು ದಾಖಲು ಮಾಡಿಕೊಂಡಿದ್ದಾರೆ. ಸಮೀಪದಲ್ಲಿಯೇ 2 ಹಸುಗಳನ್ನು ಸ್ಥಳೀಯರು ಹಾಗೂ ಜೆಸಿಬಿಯ ಸಹಾಯದಿಂದ ಅಂತ್ಯಕ್ರಿಯೆ ಮಾಡಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಸೇತುವೆ ಸ್ಥಳದಲ್ಲಿಒಂದೆರಡು ಬಾರಿ ಸತ್ತ ಹಸುಗಳನ್ನು ಎಸೆದು ಹೋಗಿದ್ದರು, ಆದರೆ ಈ ಬಾರಿ ಕತ್ತು ಕೊಯ್ದು ನಡು ರಸ್ತೆಯಲ್ಲಿಯೇ ನಾಟಿ ದನಗಳನ್ನು ಎಸೆದು ಹೋಗಿರುವುದು ಖಂಡನೀಯ. ಇಂತಹ ಅಮಾನವೀಯ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು. ಹೋರಿಗಳ ಸ್ಥಿತಿ ಕಂಡು ನಿಜಕ್ಕೂ ಆತಂಕವಾಗುತ್ತದೆ ಎಂದು ಸ್ಥಳೀಯ ಗ್ರಾಮಸ್ಥ ಗೋವಿಂದರಾಜು ಹೇಳಿದ್ದಾರೆ.







