
ಧರ್ಮಸ್ಥಳದಲ್ಲಿ ಅಸ್ಥಿಪಂಜರ ಹುಡುಕಾಟಕ್ಕೆ ಎಸ್ಐಟಿ ತಂಡ ಹರಸಾಹಸ ಪಡುತ್ತಿದೆ. ಈಗ ಎಸ್ಐಟಿ ಅಧಿಕಾರಿಗಳಿಗೆ 13ನೇ ಪಾಯಿಂಟ್ ಸವಾಲಾಗಿದೆ. ನಿನ್ನೆ ಅಗೆದು.. ಅಗೆದು 18 ಅಡಿ ಆಳಕ್ಕೆ ಇಳಿದಿದ್ದ ಎಸ್ಐಟಿ ಟೀಂ ಇಂದು ಮತ್ತಷ್ಟು ಆಳ ಭೂಮಿಯ ಬಗೆಯಲು ಸಜ್ಜಾಗಿದೆ.
ಅನಾಮಿಕ ದೂರುದಾರನ ಜೊತೆ ಎಸ್ಐಟಿ ತಂಡ
13ನೇ ಸ್ಪಾಟ್ನ 18 ಅಡಿ ಆಳ, 22 ಅಡಿ ಅಗಲ ಅಗೆದ್ರೂ ಎಸ್ಐಟಿಗೆ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಕಾರ್ಯಾಚರಣೆ ವೇಳೆ ಭೂಮಿಯಿಂದ ಚಿಮ್ಮಿದ ಜಲರಾಶಿಯಿಂದ ಕಾರ್ಯಾಚರಣೆಗೆ ತೊಡಕಾಗಿತ್ತು. ನಿನ್ನೆ ಕತ್ತಲಾದ ಕಾರಣ ಕಾರ್ಯಾಚರಣೆಗೆ ಬ್ರೇಕ್ ಬಿದ್ದಿದ್ದು, ಅನಾಮಿಕ ದೂರುದಾರ ಉಳಿದ ಜಾಗವನ್ನು ಅಗೆಯಲು ಪಟ್ಟು ಹಿಡಿದಿದ್ದ. ಹೀಗಾಗಿ ಇಂದು 13ನೇ ಸ್ಪಾಟ್ನಲ್ಲಿ ಮತ್ತಷ್ಟು ಅಡಿ ಆಳ ಮಣ್ಣು ಅಗೆಯುವ ಕಾರ್ಯ ನಡೆಯಲಿದೆ.

ಇನ್ನೂ, ಮತ್ತೊಂದು ಕಡೆ ತನಿಖೆಗೆ ದೆಹಲಿಯಿಂದ ರಾಷ್ಟ್ರೀಯ ಮಾನವಹಕ್ಜು ಆಯೋಗದ ಅಧಿಕಾರಿಗಳು ಬಂದಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ಯುವರಾಜ್ ನೇತೃತ್ವದಲ್ಲಿ NHRC ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಈಗಾಗಲೇ NHRC ಅಧಿಕಾರಿಗಳು ಅನಾಮಿಕ ದೂರುದಾರನ ವಿಚಾರಣೆ ನಡೆಸಿದ್ದಾರೆ. ಅಲ್ಲದೇ NHRC ಅಧಿಕಾರಿಗಳು ಧರ್ಮಸ್ಥಳ ಗ್ರಾಮ ಪಂಚಾಯತ್ನಿಂದ ದಾಖಲೆಗಳನ್ನು ಪಡೆಯುತ್ತಿದ್ದಾರೆ. ಹೀಗಾಗಿ ಬೆಳ್ತಂಗಡಿ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಯಿಂದ UDR ಪ್ರಕರಣದ ದಾಖಲೆ ಸಂಗ್ರಹಿಸಲಾಗಿದೆ. ಪಡೆದ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲನೆ ನಟೆಸುತ್ತಿದ್ದಾರೆ.





