ವರ್ಲ್ಡ್ ಫುಟ್ಬಾಲ್ ಸ್ಟಾರ್ ಲಿಯೋನೆಲ್ ಮೆಸ್ಸಿ ಹಾಗೂ ಅರ್ಜೆಂಟೀನಾ ತಂಡದ ಫುಟ್ಬಾಲ್ ಆಟಗಾರರು ಅಕ್ಟೋಬರ್ನಲ್ಲಿ ಕೇರಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಅರ್ಜೆಂಟೀನಾದ ಫುಟ್ಬಾಲ್ ಅಸೋಸಿಯೇಷನ್ (ಎಎಫ್ಎ) ಅಧಿಕೃತವಾಗಿ ಮಾಹಿತಿ ನೀಡಿದೆ.
ಫುಟ್ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿ ಹಾಗೂ ಅರ್ಜೆಂಟೀನಾ ತಂಡದ ಫುಟ್ಬಾಲ್ ಆಟಗಾರರು ನವೆಂಬರ್ 10 ರಿಂದ 18ರ ವರೆಗೆ ಭಾರತದ ಪ್ರವಾಸದಲ್ಲಿ ಇರುತ್ತಾರೆ. ಈ ವೇಳೆ ಕೇರಳ ಸರ್ಕಾರ ಹಾಗೂ ರಿಪೋರ್ಟರ್ ಬ್ರಾಡ್ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ನ ಸಹಭಾಗಿತ್ವದಲ್ಲಿ ಫುಟ್ಬಾಲ್ ಪಂದ್ಯವನ್ನು ಆಯೋಜನೆ ಮಾಡಲಾಗುತ್ತದೆ. ತಿರುವನಂತಪುರದ ಗ್ರೀನ್ಫೀಲ್ಡ್ ಸ್ಟೇಡಿಯಂನಲ್ಲಿ ನಡೆಯುವ ಈ ಮಹತ್ವದ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಹಾಗೂ ಅರ್ಜೆಂಟೀನಾ ತಂಡದ ಫುಟ್ಬಾಲ್ ಆಟಗಾರರು ಅಖಾಡಕ್ಕೆ ಇಳಿಯಲಿದ್ದಾರೆ. ಇದು ಭಾರತದ ಫುಫ್ಬಾಲ್ ಅಭಿಮಾನಿಗಳಿಗೆ ಐತಿಹಾಸಿಕ ಕ್ಷಣವಾಗಿರಲಿದೆ ಎಂದು ಹೇಳಲಾಗಿದೆ.
ಲಿಯೋನೆಲ್ ಮೆಸ್ಸಿ ಅವರು ಕೇರಳಕ್ಕೆ ಭೇಟಿ ನೀಡುತ್ತಾರೋ, ಇಲ್ವೋ ಎನ್ನುವ ಅನುಮಾನವಿತ್ತು. ಇನ್ನು ಫಿಫಾ ಟ್ರೋಫಿಯಲ್ಲಿ ಅರ್ಜೆಂಟೀನಾ ಟೀಮ್ ಪಾಲ್ಗೊಳ್ಳುವುದರಿಂದ ಕೇರಳಕ್ಕೆ ಪ್ರಯಾಣಿಸುವುದಿಲ್ಲ ಎನ್ನಲಾಗಿತ್ತು. ಆದರೆ ರಿಪೋರ್ಟರ್ ಟಿವಿಯ ವ್ಯವಸ್ಥಾಪಕ ನಿರ್ದೇಶಕ, ಸಂಪಾದಕ ಆಂಟೊ ಆಗಸ್ಟೀನ್ ಅವರು ಇದನ್ನ ತಳ್ಳಿ ಹಾಕಿದ್ದರು. ಅದರಂತೆ ಇದೀಗ ಎಎಫ್ಎ ಅಧಿಕೃತವಾಗಿ ಮಾಹಿತಿ ನೀಡಿದ್ದರಿಂದ ಲಿಯೋನೆಲ್ ಮೆಸ್ಸಿ ಹಾಗೂ ಅರ್ಜೆಂಟೀನಾ ಟೀಮ್ ಕೇರಳಕ್ಕೆ ಭೇಟಿ ನೀಡುವುದಷ್ಟೇ ಅಲ್ಲ, ಫುಟ್ಬಾಲ್ ಪಂದ್ಯ ಕೂಡ ಆಡಲಿದೆ ಎನ್ನುವುದು ಅಭಿಮಾನಿಗಳಿಗೆ ಸಂತಸವನ್ನು ಮತ್ತಷ್ಟು ಹೆಚ್ಚು ಮಾಡಿದೆ.
2022ರಲ್ಲಿ ಕತಾರ್ನಲ್ಲಿ ನಡೆದಂತಹ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಲಿಯೋನೆಲ್ ಮೆಸ್ಸಿ ಹಾಗೂ ಅವರ ಅರ್ಜೆಂಟೀನಾ ಟೀಮ್ಗೆ ಕೇರಳಿಗರು ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತಪಡಿಸಿದ್ದರು. ಅಲ್ಲದೇ ಈ ಟೂರ್ನಿಯಲ್ಲಿ ಅರ್ಜೆಂಟೀನಾ ವರ್ಲ್ಡ್ಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಕಾರಣದಿಂದಲೇ ಅವರು ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ. ಆ ತಂಡ ಭೇಟಿ ನೀಡುವುದನ್ನು ಈ ಹಿಂದೆಯೇ ಕೇರಳದ ಕ್ರೀಡಾ ಸಚಿವ ವಿ ಅಬ್ದುರಹಿಮಾನ್ ಅವರು ಸ್ಪಷ್ಟ ಪಡಿಸಿದ್ದರು.





