ಯಶ್ ತಾಯಿ: ಸ್ಟಾರ್ ನಟ ಯಶ್ ಅವರ ತಾಯಿ ಪುಷ್ಪಲತಾ ಸಿನಿಮಾ ನಿರ್ಮಾಪಕಿ ಆಗಿದ್ದಾರೆ. ಅವರ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿತ್ತು. ಆದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಫ್ಲಾಪ್ ಆಯ್ತು. ಇದೀಗ ಯಶ್ ತಾಯಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಸಿನಿಮಾ ಸೋಲಿಗೆ ಖ್ಯಾತ ನಿರ್ಮಾಪಕರೊಬ್ಬರು ಕಾರಣವೆಂದು ಹೆಸರು ಹೇಳಿ ಆರೋಪ ಮಾಡಿದ್ದಾರೆ. ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ಮಾಪಕಿ ಪುಷ್ಪ, ‘ನಮ್ಮ ಸಿನಿಮಾ ಸೋಲಲು ಜನರು ಕಾರಣ ಅಲ್ಲ, ಬೇರೆ ಕಾರಣ ಇದೆ. ನಮ್ಮ ಸಿನಿಮಾಕ್ಕೆ ಚಿತ್ರಮಂದಿರ ಕೊಡದೆ ತೊಂದರೆ ಮಾಡಲಾಗಿದೆ. ಅದು ಯಾರೂ ಅಲ್ಲ ಕಾರ್ತಿಕ್, ಆ ವ್ಯಕ್ತಿ ತನ್ನ ಸಿನಿಮಾಕ್ಕೆ ಚಿತ್ರಮಂದಿರಗಳನ್ನು ಇಟ್ಟುಕೊಂಡು ನಮ್ಮ ಸಿನಿಮಾಕ್ಕೆ ಸರಿಯಾಗಿ ಚಿತ್ರಮಂದಿರಗಳನ್ನು ಕೊಡದೆ ತೊಂದರೆ ಕೊಟ್ಟಿದ್ದಾರೆ. ನಾನು ಹೆಸರು ಹೇಳಿಯೇ ಆರೋಪ ಮಾಡುತ್ತೀನಿ’ ಎಂದಿದ್ದಾರೆ. ಆ ಮೂಲಕ ಕೆಆರ್ಜಿ ನಿರ್ಮಾಣ ಸಂಸ್ಥೆಯ ನಿರ್ಮಾಪಕ ಮತ್ತು ವಿತರಕ ಕಾರ್ತಿಕ್ ಗೌಡ ಮೇಲೆ ನೇರ ಆರೋಪ ಮಾಡಿದ್ದಾರೆ.
‘ನಾಳೆ ನನ್ನ ಸಿನಿಮಾಗಳು ಚೆನ್ನಾಗಿ ಹೋದಾಗ ನಾನು ಸಹ ಅವರಿಗೆ ಇದೇ ಕೆಲಸ ಕೊಡುತ್ತೇನೆ. ಅವರು ಮಾಡಿದ್ದು ಸಹಿಸಿಕೊಂಡು ಇರೋಕೆ ಬಂದವಳಲ್ಲ ನಾನು, ನನಗೆ ತಿರುಗಿ ಕೊಡೋದು ಗೊತ್ತು, ಅದೇ ಕೆಲಸವನ್ನು ನಾನು ಮಾಡುತ್ತೇನೆ. ಕಾರ್ತಿಕ್ ಮಾಡಿದ್ದಾನೆ ಎಂಬುದು ನನಗೆ ಗೊತ್ತು, ಅವರ ಹಿಂದೆ ಯಾರೋ ಇದ್ದು ಈ ಕೆಲಸ ಮಾಡಿಸಿದ್ದಾರೆ. ಅದು ಯಾರು ಎಂಬುದು ಸಹ ನನಗೆ ಗೊತ್ತು, ಮುಂದಿನ ದಿನಗಳಲ್ಲಿ ಅವರ ಹೆಸರನ್ನೂ ಸಹ ಮಾಧ್ಯಮಗಳ ಮುಂದೆ ತರುತ್ತೀನಿ’ ಎಂದಿದ್ದಾರೆ ಪುಷ್ಪಲತಾ.‘ಪ್ರಪಂಚ ಗುಂಡಗಿದೆ, ಇಂದು ನನಗೆ ಆಗಿದ್ದು ನಾಳೆ ಅವರಿಗೆ ಆಗಲಿದೆ.
ಯಾರೋ ದುರುದ್ದೇಶದಿಂದಲೇ ಚಿತ್ರಮಂದಿರಗಳ ವಿಷಯದಲ್ಲಿ ನನ್ನನ್ನು ತುಳಿದಿದ್ದಾರೆ ಎಂಬುದು ನನಗೆ ಗೊತ್ತು. ಹಾಗೆಂದು ಹೆದರಿ ನಾನು ಹಿಂದಕ್ಕೆ ಹೋಗುವವಳಲ್ಲ. ನನ್ನನ್ನು ತುಳಿದಷ್ಟೂ ಸಹ ನಾನು ಎದುರು ನಿಂತುಕೊಳ್ಳುತ್ತೀನಿ. ನನ್ನ ಯಾರೂ ಕೆಣಕಬಾರದು, ಕೆಣಕಿದರೆ ನಾನಿನ್ನೂ ಡಬಲ್ ಆಗುತ್ತೀನಿ’ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಪುಷ್ಪ. ಕೆಆರ್ಜಿ ಸಂಸ್ಥೆ ನಿರ್ಮಾಣ ಮಾಡಿದ್ದ ‘ಎಕ್ಕ’ ಸಿನಿಮಾ ಜುಲೈ 18ಕ್ಕೆ ಬಿಡುಗಡೆ ಆಗಿತ್ತು. ಅದಾದ ಕೆಲ ದಿನಗಳ ಬಳಿಕ ಪುಷ್ಪ ಅವರ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ ಬಿಡುಗಡೆ ಆಗಿತ್ತು. ಈಗ ಪುಷ್ಪ ಅವರ ಆರೋಪವೆಂದರೆ ‘ಎಕ್ಕ’ ಸಿನಿಮಾ ಪ್ರದರ್ಶನ ಆಗುತ್ತಿದ್ದ ಕಾರಣದಿಂದಾಗಿ ಕಾರ್ತಿಕ್ ಅವರು ‘ಕೊತ್ತಲವಾಡಿ’ ಸಿನಿಮಾಕ್ಕೆ ಚಿತ್ರಮಂದಿರಗಳನ್ನು ಬಿಟ್ಟುಕೊಡಲಿಲ್ಲ ಎಂದಿದ್ದಾರೆ. ಆರೋಪದ ಬಗ್ಗೆ ಕಾರ್ತಿಕ್ ಈ ವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.





