ದಕ್ಷಿಣ ಕನ್ನಡ, ಬಂಟ್ವಾಳ: ಸರ್ಕಾರ ನೀಡುವ ಪಡಿತರ ಅಕ್ಕಿಯನ್ನು ಖಾಸಗಿ ಕಟ್ಟಡದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಘಟನೆಯಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗಿದೆ.
ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಸಮೀಪದ ಪಟ್ಟೆಕೋಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ಸರ್ಕಾರದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಇಟ್ಟುಕೊಂಡಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಬಂಟ್ವಾಳ ತಹಸಿಲ್ದಾರ ಕಚೇರಿಯ ಆಹಾರ ನಿರೀಕ್ಷಕ ಎ. ಪ್ರಶಾಂತ್ ಶೆಟ್ಟಿ ಅವರು ಬಂಟ್ವಾಳ ನಗರ ಠಾಣಾ ಪೊಲೀಸರ ಸಹಕಾರದಿಂದ ದಾಳಿ ನಡೆಸಿದರು.
ದಾಳಿಯಲ್ಲಿ, ಕಲ್ಲಡ್ಕ ನಿವಾಸಿ ಹಾಗೂ ಗೋಡೌನ್ ನಿರ್ವಾಹಕ ಉಮ್ಮರಬ್ಬ ಹಾಗೂ ಕೆಲಸಗಾರ ರಫೀಕ್ ಎಂಬವರನ್ನು ಬಂಧಿಸಲಾಗಿದೆ. ದಾಳಿ ವೇಳೆ ಉಮ್ಮರಬ್ಬ ಅವರು ಪಟ್ಟೆಕೋಡಿಯ ಅಂಗಡಿಕಟ್ಟಡವೊಂದರಲ್ಲಿ 64 ಗೋಣಿಗಳಲ್ಲಿ 2,103.35 ಕೆ.ಜಿ ಬೆಳ್ತಿಗೆ ಅಕ್ಕಿ ಹಾಗೂ 467.10 ಕೆ.ಜಿ ಕುಚ್ಚಲಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಕೊಂಡಿರುವುದು ಪತ್ತೆಯಾಗಿದೆ. ಈ ಅಕ್ಕಿಯ ಮೌಲ್ಯ ರೂ. 58,288 ಎಂದು ಅಂದಾಜಿಸಲಾಗಿದೆ.
ಇದಲ್ಲದೆ, ಅಕ್ಕಿಯ ಸಾಗಾಟಕ್ಕಾಗಿ ಆಟೋರಿಕ್ಷಾವೊಂದನ್ನು ಸಿದ್ಧಪಡಿಸಿರುವುದೂ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ದೊರೆತ ಅಕ್ಕಿಯ ಗೋಣಿಗಳು, ಆಟೋರಿಕ್ಷಾ, ತೂಕದ ಯಂತ್ರ, ಖಾಲಿ ಗೋಣಿಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ: 96/2025ರಂತೆ, 1955ರ ಅಗತ್ಯ ವಸ್ತುಗಳ ಕಾಯ್ದೆಯ ಸೆಕ್ಷನ್ 3 ಮತ್ತು 7 ಹಾಗೂ 2016ರ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ (ನಿಯಂತ್ರಣ ಆದೇಶ)ನ ಸೆಕ್ಷನ್ 18ರಡಿ ಪ್ರಕರಣ ದಾಖಲಿಸಲಾಗಿದೆ.







