ಮೈಸೂರು : ರಾಷ್ಟ್ರಕವಿ ಕುವೆಂಪು ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಕುವೆಂಪು ವಿಶ್ವಮಾನವ ಕ್ಷೇಮಾಭಿವೃದ್ಧಿ ಟ್ರಸ್ಟ್ ಆಗ್ರಹಿಸಿದೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಅಧ್ಯಕ್ಷ ಹೆಚ್.ಕೆ.ರಾಮು ಮಾತನಾಡಿ, “ಆ.31ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಈ ಸಂಬಂಧ ಮನವಿಪತ್ರವನ್ನು ಸಲ್ಲಿಸಲಾಗುವುದು,” ಎಂದು ತಿಳಿಸಿದರು. ಈ ಮನವಿಗೆ ಶಾಸಕ ಜಿ.ಟಿ.ದೇವೇಗೌಡ, ಕೆ.ಹರೀಶ್ ಗೌಡ, ಮಾಜಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಸೇರಿದಂತೆ ಅನೇಕ ಗಣ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಇವರೂ ಉಪಸ್ಥಿತರಿರಲಿದ್ದಾರೆ ಎಂದರು.
ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಅವರು ಮಾತನಾಡಿ, “ಕುವೆಂಪು ಎಂದರೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಶತಪುರುಷ. ಯುಗದ ಕವಿ, ಜಗದ ಕವಿ ಎಂಬೆಲ್ಲಾ ಬಿರುದಿನಿಂದ ಭೂಷಿತರು. ಅವರ ಹೆಸರನ್ನು ಕೇಳದವರು ಕನ್ನಡದಲ್ಲಿ ಯಾರೂ ಇಲ್ಲ. ಅವರ ಸಾಮಾಜಿಕ-ಮಾನವೀಯ ಸಂದೇಶಕ್ಕೆ ‘ವಿಶ್ವರತ್ನ’ ಎಂಬ ಬಿರುದು ಕೂಡ ಯೋಗ್ಯವಾಗಿದೆ,” ಎಂದರು.
“ಅವರು ಬದುಕಿದ್ದಾಗಲೇ ಭಾರತ ರತ್ನ ಲಭಿಸಿದ್ದರೆ ಇನ್ನೂ ಹೆಚ್ಚಿನ ಮಹತ್ವ ಇದ್ದೀತು. ದುರದೈವವಶಾತ್ ಅದು ಸಾಧ್ಯವಾಗಲಿಲ್ಲ. ಅವರ ಕೃತಿಗಳು ಸಮಯಕ್ಕೆ ಸರಿಯಾಗಿ ಇಂಗ್ಲಿಷಿಗೆ ಭಾಷಾಂತರವಾಗಿದ್ದರೆ ನೊಬೆಲ್ ಪ್ರಶಸ್ತಿ ಕೂಡ ಸಾಧ್ಯವಾಗುತ್ತಿತ್ತು,” ಎಂದೂ ಅವರು ವಿಷಾದ ವ್ಯಕ್ತಪಡಿಸಿದರು.
ಪ್ರೊ.ಸಿ. ನಾಗಣ್ಣ ಅವರು ಮಾತನಾಡಿ, “ಈಗ ನಾವು ಸಕಾರಾತ್ಮಕ ಚಿಂತನೆಯ ಕಾಲದಲ್ಲಿ ಇದ್ದೇವೆ. ಕುವೆಂಪುಗೆ ಭಾರತ ರತ್ನ ಪ್ರಶಸ್ತಿ ದೊರಕಬೇಕು ಎಂಬ ಒತ್ತಾಸೆಯು ಕನ್ನಡಿಗರ ಮನಸ್ಸಿನಲ್ಲಿ ಬೆಳೆಯುತ್ತಿದೆ. ಇದು ಕನ್ನಡ ಭಾಷೆಯ ಬೆಳವಣಿಗೆಯ ಜೊತೆಗೆ ರಾಜ್ಯದ ಅಭಿವೃದ್ಧಿಗೂ ನಾಂದಿ ಆಗಲಿದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಕಸಾಪದ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್ ಹಾಗೂ ಜಯಣ್ಣ ಸಹ ಭಾಗವಹಿಸಿದ್ದರು.





