ಬೆಂಗಳೂರು : ಜಿಎಸ್ಟಿ ದರಗಳಲ್ಲಿ ಕೇಂದ್ರ ಸರ್ಕಾರ ಮಾಡಿರುವ ಕಡಿತದಿಂದ ಕರ್ನಾಟಕ ರಾಜ್ಯಕ್ಕೆ ಅಂದಾಜು ₹70,000 ಕೋಟಿ ಹಣಕಾಸು ನಷ್ಟ ಸಂಭವಿಸಬಹುದೆಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಿಎಸ್ಟಿ ಕಡಿತದ ನಿರ್ಧಾರವು ಸ್ವಾಗತಾರ್ಹವಾದುದು. ಕೆಲ ಅಗತ್ಯ ವಸ್ತುಗಳಿಗೆ ಶೂನ್ಯ ಅಥವಾ ಶೇಕಡಾ 5ರಷ್ಟು ತೆರಿಗೆ ವಿಧಿಸಿರುವುದು ಸಮರ್ಥನೀಯ. ಆದರೆ ಇನ್ನೂ ಹಲವಾರು ಅಗತ್ಯ ದಿನಸಿ ಮತ್ತು ಬಳಕೆಯ ವಸ್ತುಗಳ ಮೇಲೆ ಹೆಚ್ಚಿದ ಜಿಎಸ್ಟಿ ದರಗಳು ಇದ್ದು, ಇದು ಸಾಮಾನ್ಯ ಜನರ ಮೇಲೆ ಆರ್ಥಿಕ ಬರುಡನ್ನುಂಟುಮಾಡುತ್ತದೆ,” ಎಂದು ತಿಳಿಸಿದರು.
“ಸಾಮಾನ್ಯ ಜನರಿಗೆ ನಿತ್ಯ ಬಳಕೆಯ ವಸ್ತುಗಳು ಕಡಿಮೆ ದರದಲ್ಲಿ ಸಿಗಬೇಕು ಎಂಬುದು ಕಾಂಗ್ರೆಸ್ ಪಕ್ಷದ ನಿರಂತರ ಒತ್ತಾಯವಾಗಿದೆ. ನಾವು ಕಳೆದ ಕೆಲವು ವರ್ಷಗಳಿಂದ ಜಿಎಸ್ಟಿ ಸರಳೀಕರಣದ ಬಗ್ಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದೆವು. ಈಗ ಅದರಲ್ಲಿ ಕೆಲವೊಂದು ಬದಲಾವಣೆಗಳು ಆಗಿರುವುದು ಸಕಾರಾತ್ಮಕ ಬೆಳವಣಿಗೆ,” ಎಂದರು.
ಆದರೆ, ತೆರಿಗೆ ಕಡಿತವಾದಾಗ ರಾಜ್ಯ ಸರ್ಕಾರಕ್ಕೂ ಆದಾಯದ ಕೊರತೆ ಎದುರಾಗುವುದು ಸಹಜ. ಈ ನಷ್ಟವನ್ನು ಸರಿಪಡಿಸಲು ಪರ್ಯಾಯ ಮಾರ್ಗಗಳನ್ನು ಅನ್ವೇಷಿಸಬೇಕಿದೆ. ಜೊತೆಗೆ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುವ ಅನುದಾನ, ಹಾಗೂ ಅನಗತ್ಯ ಖರ್ಚುಗಳ ನಿಯಂತ್ರಣದ ಮೇಲೂ ಗಮನ ಹರಿಸಬೇಕಿದೆ ಎಂದು ಪರಮೇಶ್ವರ್ ಒತ್ತಾಯಿಸಿದರು.
ಮಂಗಳೂರು ಭೇಟಿ – ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ
ಮಂಗಳೂರು ನಗರಕ್ಕೆ ಭೇಟಿ ನೀಡಿದ ಗೃಹ ಸಚಿವರು, ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಮಂಗಳೂರು ಕಮಿಷನರೇಟ್ನ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲೆಯ ಶಾಂತಿ-ಸುವ್ಯವಸ್ಥೆ ಹಾಗೂ ಇತ್ತೀಚೆಗೆ ಸಂಭವಿಸಿದ ಘಟನೆಗಳ ಕುರಿತು ಸಮಗ್ರ ಚರ್ಚೆ ನಡೆಯಿತು.
ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ವಿಷಯಗಳು:
- ಧರ್ಮಸ್ಥಳ ಪ್ರಕರಣ
- ಹಬ್ಬಗಳ ಸಂದರ್ಭದಲ್ಲಿ ವಿಧಿಸಲಾಗಿರುವ ಸಮಯ ನಿರ್ಬಂಧಗಳು
- ಡ್ರಗ್ಸ್ ಜಾಲ ವಿರುದ್ಧದ ಕ್ರಮಗಳು
- ಕೆಂಪುಕಲ್ಲು ಮತ್ತು ಮರಳುಗಾರಿಕೆ ನಿಯಂತ್ರಣ
- ವಿಶೇಷ ಕಾರ್ಯಪಡೆಯ ಕಾರ್ಯಾಚರಣೆಗಳು
ಈ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ. ಅರುಣ್ ಕೆ., ಉಡುಪಿ ಎಸ್ಪಿ ಹರಿರಾಮ್ ಶಂಕರ್, ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಡಿಸಿಪಿಗಳು ಮಿಥುನ್ ಎಚ್.ಎನ್. ಮತ್ತು ರವಿಶಂಕರ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸಮಾಲೋಚನೆಯ ವೇಳೆ, ಗೃಹ ಸಚಿವರು ಶಾಂತಿ-ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದ್ದು, ರಾಜ್ಯ ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದರು.





