ಮದುವೆ ಎಂದರೆ ಕೇವಲ ಸಂಬಂಧಿಕ–ಸ್ನೇಹಿತರಿಗೆ ಔತಣಕೂಟ, ಆನಂದ–ಆಡಂಬರವೆಂದುಕೊಳ್ಳುವ ಅನೇಕ ಯುವ ದಂಪತಿಗಳಿಗೆ, ಈ ಜೋಡಿ ನಿಜಕ್ಕೂ ಮಾದರಿಯಾಗಿದ್ದಾರೆ. ಮಾಂಗಲ್ಯ ಧಾರಣೆ ಬಳಿಕ ನವ ದಂಪತಿ ಇಬ್ಬರೂ ಸ್ವಇಚ್ಛೆಯಿಂದಲೇ ಮೈಸೂರಿನ ಅಗ್ರವಾಲ್ ಕಣ್ಣಿನ ಆಸ್ಪತ್ರೆಯ ವೈದ್ಯರ ಸಮ್ಮುಖದಲ್ಲಿ ದೇವಸ್ಥಾನದಲ್ಲೇ ನೇತ್ರದಾನ ಪ್ರಕ್ರಿಯೆಗೆ ಸಹಿ ಹಾಕಿದರು.ಮುಂದಿನ ಪೀಳಿಗೆಯ ನಾಲ್ಕು ಮಂದಿಗೆ, ನಾಲ್ಕು ಕುಟುಂಬಗಳಿಗೆ ಬೆಳಕಾಗುವ ಹಾದಿಯನ್ನು ಬರೆದು ಇವರು ಸಮಾಜದ ಮುಂದೆ ವಿಶಿಷ್ಟ ಮಾದರಿಯಾಗಿದ್ದಾರೆ.

ನವವರ ಚಂದನ್ ಅವರು:“ಇಂದಿನ ಯುವಕರಿಗೆ ಮದುವೆ ಎಂದರೆ ಹಳದಿ, ಸಂಗೀತ್, ಪ್ರೀ–ವೆಡಿಂಗ್ ಫೋಟೋ ಶೂಟ್ ಅಷ್ಟೆ. ನಾವು ಸಹ ಹಾಗೆ ಅಂದುಕೊಂಡಿದ್ದೆವು. ಆದರೆ ಮದುವೆಯ ಕ್ಷಣ ಸಮಾಜಕ್ಕೆ ಕೊಡುಗೆಯಾಗಿ ನೆನಪಾಗಲಿ ಎಂದುಕೊಂಡಾಗ ಡಾ. ರಾಜ್ ಕುಮಾರ್ ಅವರ ದಾರಿಯನ್ನು ಅನುಸರಿಸಿ, ‘ನೇತ್ರದಾನ ಮಹಾದಾನ’ ಎಂಬ ಮಾತಿನಂತೆ ನಾವು ಈ ಕಾರ್ಯಕ್ಕೆ ಮುಂದಾದೆವು. ಇದರಿಂದ ಮನಸ್ಸಿಗೆ ನಿಜವಾದ ಆತ್ಮತೃಪ್ತಿ ದೊರಕಿದೆ.”
ನಂತರ ಮಾತನಾಡಿದ ವಧು ಲಾವಣ್ಯ ಅವರು: “ಹತ್ತು ವರ್ಷಗಳ ಪ್ರೀತಿಯನ್ನು ಕುಟುಂಬದವರ ಒಪ್ಪಿಗೆಯೊಂದಿಗೆ ಇಂದು ಮದುವೆಯಾಗಿ ಸಾರ್ಥಕತೆ ಕಂಡಿದ್ದೇವೆ. ಈ ಕ್ಷಣವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ನೇತ್ರದಾನಕ್ಕೆ ಸಹಿ ಹಾಕಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಂದಿ ಇಂತಹ ಕಾರ್ಯಕ್ಕೆ ಮುಂದೆ ಬರಲಿ ಎಂದು ಹಾರೈಸುತ್ತೇನೆ.”ತಮ್ಮ ಭಾವನೆ ಹಂಚಿಕೊಂಡುರು.
ಒಟ್ಟಾರೆಯಾಗಿ ಮದುವೆಯ ಸಂಭ್ರಮವನ್ನು ಸಮಾಜಮುಖಿ ಕಾರ್ಯದ ಮೂಲಕ ಅರ್ಥಪೂರ್ಣಗೊಳಿಸಿದ ನವ ದಂಪತಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ





