ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಹಾಗೂ ಸಂಪುಟ ಪುನಾರಚನೆಯ ಸುದ್ದಿ ಸದ್ದು ಮಾಡುತ್ತಿರುವಾಗಲೇ ಮಹತ್ವದ ಬೆಳವಣಿಗೆ ನಡೆದಿದೆ. ಅವಧಿಗೂ ಮುನ್ನವೇ 16ನೇ ವಿಧಾನಸಭೆಯ ಎಲ್ಲಾ ಸದಸ್ಯರ ಗ್ರೂಪ್ ಫೋಟೋ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಬದಲಾವಣೆಯೋ? ಸ್ಪೀಕರ್ ಬದಲಾವಣೆಯೋ ಅಥವಾ ಸಂಪುಟ ಪುನರ್ ರಚನೆಯೋ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ಸರ್ಕಾರದ ಅವಧಿ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ವಿಧಾನಸೌಧದಲ್ಲಿ ಶಾಸಕರ ಗ್ರೂಪ್ ಫೋಟೋ ಶೂಟ್ನಡೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಯಾಕಂದ್ರೆ, ಸಾಮಾನ್ಯವಾಗಿ ವಿಧಾನಸಭೆ ಅವಧಿ ಮುಕ್ತಾಯಗೊಳ್ಳುವ ಸಂದರ್ಭದಲ್ಲಿ ಸ್ಪೀಕರ್ ಸಮ್ಮುಖದಲ್ಲಿ ಶಾಸಕರ ಗ್ರೂಪ್ ಫೋಟೋ ತೆಗೆದುಕೊಳ್ಳುವುದು ಸಂಪ್ರದಾಯವಾಗಿದೆ. ಆದ್ರೆ, ಅವಧಿಗೂ ಮುನ್ನವೇ ಸ್ಫೀಕರ್ ಯುಟಿ ಖಾದರ್, ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಶಾಸಕರ ಫೋಟೋ ಶೂಟ್ ಮಾಡಿಸಿರುವುದು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಈ ಅನಿರೀಕ್ಷಿತ ಬೆಳವಣಿಗೆಯು ಸಿಎಂ ಬದಲಾವಣೆ, ಸ್ಪೀಕರ್ ಬದಲಾವಣೆ ಅಥವಾ ಸಂಪುಟ ಪುನರ್ರಚನೆಯ ಮುನ್ಸೂಚನೆಯೇ ಎಂಬ ಗೊಂದಲ ಮತ್ತು ಅನುಮಾನಗಳನ್ನು ಶಾಸಕರಲ್ಲಿ ಹುಟ್ಟುಹಾಕಿದೆ. ಹೌದು.. ಶೀಘ್ರದಲ್ಲೇ ಸಂಪುಟಕ್ಕೆ ಸರ್ಜರಿಯಾಗಲಿದ್ದು, ಸ್ಪೀಕರ್ ಖಾದರ್ ಅವರು ಸಹ ಸಂಪುಟ ಸೇರುವ ಸಾಧ್ಯತೆಯಿದ ಹೀಗಾಗಿಯೇ ವಿಧಾನಸಭೆ ಮುಕ್ತಾಯಕ್ಕೂ ಮೊದಲೇ ಫೋಟೋ ಶೂಟ್ ಮಾಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅವಧಿಗೂ ಮುನ್ನವೇ 16 ವಿಧಾನಸಭೆಯ ಸದಸ್ಯರ ಗ್ರೂಪ್ ಫೋಟೋ ಹಿಂದಿನ ಮರ್ಮ ಏನು ಎನ್ನುವ ಬಗ್ಗೆ ಶಾಸಕರಲ್ಲಿಯೂ ಗೊಂದಲ ಉಂಟಾಗಿದೆ. ವಿಧಾನಸೌಧದ ಪಡಸಾಲೆಗಳಲ್ಲಿ ಕೂಡ ಇದೇ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಪರಸ್ಪರ ಶಾಸಕರು ಕಾರಣಗಳನ್ನು ಊಹಿಸುತ್ತಿದ್ದಾರೆ. ಫೋಟೋ ಶೂಟ್ ಹಿಂದೆ ಏನಾದರೂ ರಾಜಕೀಯ ಸಂದೇಶವಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ಕೆಲವರು ಈ ಬೆಳವಣಿಗೆಯನ್ನು ಮುಖ್ಯಮಂತ್ರಿ ಬದಲಾವಣೆಯ ಮುನ್ಸೂಚನೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಸಿಎಂ ಬದಲಾವಣೆ ಸಂಭವಿಸಿದರೆ, ಸಂಪುಟದಲ್ಲಿ ಹಾಗೂ ವಿವಿಧ ಹುದ್ದೆಗಳಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸಬಹುದು. ಇದೇ ಕಾರಣಕ್ಕಾಗಿ ಮುಂಚಿತವಾಗಿ ನೆನಪಿಗಾಗಿ ಫೋಟೋ ಶೂಟ್ ನಡೆಸಲಾಗಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಇನ್ನೂ ಕೆಲವರು ಇದು ಸ್ಪೀಕರ್ ಬದಲಾವಣೆ ಅಥವಾ ಸಂಪುಟ ಪುನರ್ರಚನೆಗೆ ಮುನ್ನ ನಡೆಯುವ ಸಿದ್ಧತೆಯಾಗಿರಬಹುದೇ ಎಂಬ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಸಂಪುಟ ಪುನಾರಚನೆಯಲ್ಲಿ ಸ್ಪೀಕರ್ ಯುಟಿ ಖಾದರ್ಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ಸಹ ಗ್ರೀನ್ ಸಿಗ್ನಲ್ ಕೊಟ್ಟಿರುವ ಸಾಧ್ಯತೆಗಳಿವೆ. ಹೀಗಾಗಿ ಸಚಿವ ಸಂಪುಟ ಪುನರ್ರಚನೆ ಬಗ್ಗೆ ಸ್ಪೀಕರ್ಗೆ ಮುನ್ಸೂಚನೆ ಸಿಕ್ಕಿರುವುದರಿಂದಲೇ ಈ ಫೋಟೋ ಶೂಟ್ ಮಾಡಿಸಿದ್ದಾರೆಯೇ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.
ರಾಜ್ಯ ಸರ್ಕಾರದ ಸಂಪುಟ ಪುನರ್ರಚನೆ ಚರ್ಚೆ ನಡೆಯುತ್ತಿದೆ. ಈಗಾಗಲೇ ಆಕಾಂಕ್ಷಿಗಳು ಸಭೆಗಳನ್ನು ನಡೆಸಿ ಸಂಪುಟ ಪುನರ್ರಚನೆಗೆ ಒತ್ತಡ ಹೇರುತ್ತಿದ್ದಾರೆ. ಹೈಕಮಾಂಡ್ ನಾಯಕರಿಗೆ ಪತ್ರವನ್ನು ಬರೆದಿದ್ದು, ಮೊದಲ ಬಾರಿ ಶಾಸಕರಾಗಿರುವವರು ನಮಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಅಲ್ಲದೇ ಎರಡು ವರ್ಷ ಪೂರ್ಣಗೊಳಿಸಿರುವ ಸಚಿವರನ್ನು ಬಿಟ್ಟು ಇನ್ನುಳಿದ ಎರಡುವರೆ ವರ್ಷ ಅವಧಿಗೆ ಬೇರೆಯವರನ್ನ ಸಚಿವರನ್ನಾಗಿ ಮಾಡಬೇಕೆನ್ನುವುದು ಆಕಾಂಕ್ಷಿಗಳು ಪಟ್ಟು ಹಿಡಿದಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆಯೇ ಸ್ಪೀಕರ್ ಯು.ಟಿ ಖಾದರ್ ಅವರು ಶಾಸಕರ ಫೋಟೋಶೂಟ್ ನಡೆಸಿದ್ದಾರೆ.
ವಿಪಕ್ಷದ ಕೆಲವು ಶಾಸಕರು ಫೋಟೋ ಶೂಟ್ ಬಗ್ಗೆ ನಾನಾ ವ್ಯಾಖ್ಯಾನ ನೀಡುತ್ತಿದ್ದಾರೆ. ಹೌದು..ಅವಧಿ ದಿಢೀರ್ ಆಗಿ ಸ್ಪೀಕರ್ ಫೋಟೋ ಶೂಟ್ ಮಾಡಿಸಿಕೊಂಡ ಉದ್ದೇಶ ಏನು ಎಂಬುವುದು ಕುತೂಹಲವಾಗಿದೆ. ಇದು ಸಂಪುಟ ಪುನಾರಚನೆ ಆಗಲಿದೆ ಎಂಬ ಸುಳಿವು ಆಗಿರಬಹುದು ಎನ್ನುತ್ತಾರೆ.ಇನ್ನು ಈ ಬಗ್ಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಕುರಿತು ವಿಪಕ್ಷ ಬಿಜೆಪಿ ಸಹ ಟ್ವೀಟ್ ಮಾಡಿದ್ದು, ಇದು ಸಿಎಂ ಸಿದ್ದರಾಮಯ್ಯ ಔಟ್ಗೋಯಿಂಗ್ ಫೋಟೋಶೂಟ್ ಅಲ್ವಾ? ಎಂದು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿ ಪೋಸ್ಟ್ ಮಾಡಿದೆ.
ಗ್ರೂಪ್ ಫೋಟೋಗೆ 3 ಕಾರಣ ಕೊಟ್ಟ ಬಿಜೆಪಿ ಶಾಸಕ
ಕರ್ನಾ ಟಕ ವಿಧಾನಸಭೆಯ ಸಭಾಧ್ಯಕ್ಷರು ಯು. ಟಿ.ಖಾದರ್ ತಮ್ಮ ಅವಧಿಯಲ್ಲಿ ವಿಶಿಷ್ಟ ಕೆಲಸಗಳನ್ನು ಮಾಡುವುದರಲ್ಲಿ ಇವರಿಗೆ ವಿಪರೀತ ಉಮೇದು. ರಾಜ್ಯದ ಮಾಜಿ ಧೀಮಂತ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯನವರು 50 ರ ದಶಕದಲ್ಲಿ ಕೇವಲ 1.50 ಕೋಟಿ ಹಣದಲ್ಲಿ ನಿರ್ಮಿಸಿದ ಭವ್ಯ ವಿಧಾನಸೌಧಕ್ಕೆ 84 ಲಕ್ಷ ರೂ. ವೆಚ್ಚದಲ್ಲಿ ಹೊಸ ಬಾಗಿಲನ್ನು ನಿರ್ಮಿಸಿದ ಹೆಗ್ಗಳಿಕೆ ನಮ್ಮ ಈ ಸಭಾಧ್ಯಕ್ಷರದ್ದು. ಹಳೆಯ ಬಾಗಿಲು ಹಾಳಾಗಿ ಹೋಗಿತ್ತೇ? ಶಿಥಿಲವಾಗಿತ್ತೇ? ಗೆದ್ದಲು ತಿಂದಿತ್ತೇ? ಅಥವಾ ಯಾರಾದರೂ ಬಾಗಿಲು ಹಳೆದಾಗಿದೆ, ಬದಲಾಯಿಸಿ ಎಂದು ಕೇಳಿದ್ದರೇ?. ಹೊಸ ಬಾಗಿಲು ಹಾಕಿಸುವುದಕ್ಕೆ ಕಾರಣ ಯಾರಿಗೂ ಗೊತ್ತಿಲ್ಲ. ಈಗ ಮತ್ತೊಂದು ಹೊಸ ಕಾರ್ಯ ಮಾಡಲು ನಮ್ಮ ಸಭಾಧ್ಯಕ್ಷರು ಇಳಿದಿದ್ದಾರೆ. ವಿಧಾನ ಸಭೆಯ ಎಲ್ಲಾ ಸದಸ್ಯರ ಗ್ರೂಪ್ ಫೋಟೋ ಯೋಜಿಸಲಾಗಿದೆ. ಸಾಮಾನ್ಯವಾಗಿ ಶಾಸಕರ ಗ್ರೂಪ್ ಫೋಟೋ ತೆಗೆಯುವುದು ಐದು ವರ್ಷ ಅವಧಿಯ ಕೊನೆಯಲ್ಲಿ. ಅಂದರೆ 2028 ಮಾರ್ಚ್- ಏಪ್ರಿಲ್ ತಿಂಗಳಲ್ಲಿ. ಹೀಗಿದ್ದಾಗ ಈ ಗ್ರೂಪ್ ಫೋಟೋ ಅಗತ್ಯವೇನಿತ್ತು? ಹಾಗೆ ಯೋಚಿಸಿದಾಗ ಕಾರಣಗಳು ಈ ಕೆಳಕಂಡಂತಿರಬಹುದು.
ಈ ಅಧಿವೇಶನದ ನಂತರ ಖಾದರ್ ರವರು ಸಭಾಧ್ಯಕ್ಷರ ಸ್ಥಾನದಿಂದ ಸಚಿವ ಸ್ಥಾನಕ್ಕೆ ಹೋಗುವ ಇರಾದೆ ಹೊಂದಿರಬಹುದು. ಮತ್ತು ಅದಕ್ಕೆ ಹಸಿರು ನಿಶಾನೆಯೂ ದೊರಕಿರಬಹುದು.
ಇಲ್ಲವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬದಲಾಗುತ್ತಾರೆಯೇ? ಅವರು ಮುಖ್ಯಮಂತ್ರಿ ಆಗಿರುವಾಗ ಒಂದು ಫೋಟೋ ಇರಲಿ ಎಂದೇ? ಅಥವಾ
ಮಧ್ಯಂತರ ಚುನಾವಣೆ ನಡೆಯುತ್ತದೆಯೇ? ಈ ಮೇಲಿನ ಮೂರು ಕಾರಣಗಳಲ್ಲಿ ಯಾವುದು ಈ ಮಧ್ಯಂತರ ಗ್ರೂಪ್ ಫೋಟೋಗೆ ಕಾರಣ?
ಒಟ್ಟಿನಲ್ಲಿ ಅವಧಿಗೂ ಮುನ್ನವೇ 16ನೇ ವಿಧಾನಸಭೆ ಸದಸ್ಯರ ಗ್ರೂಫ್ ಫೋಟೋ ಶೂಟ್ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ರಾಜ್ಯ ರಾಜಕಾರಣದಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.







