ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ರಾಷ್ಟ್ರ ರಾಜಧಾನಿ ದೆಹಲಿಯತ್ತ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಮಧ್ಯಾಹ್ನದ ವೇಳೆ ಎಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ, ವಿಮಾನವನ್ನು ತುರ್ತು ಭೂಸ್ಪರ್ಶಕ್ಕೆ ಒಳಪಡಿಸಲಾಯಿತು. ಬೆಳಗ್ಗೆ ಸುಮಾರು 10:50ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದ ರನ್ವೇ 28ರಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, ಸುರಕ್ಷತಾ ಕ್ರಮಗಳ ನಡುವೆ ವಿಮಾನವನ್ನು ಯಶಸ್ವಿಯಾಗಿ ನೆಲಕ್ಕಿಳಿಸಲಾಯಿತು.
ಬೋಯಿಂಗ್ 737 ಮಾದರಿಯ ಈ ವಿಮಾನದಲ್ಲಿ ಒಟ್ಟು 161 ಪ್ರಯಾಣಿಕರು ಇದ್ದರು. ತುರ್ತು ಲ್ಯಾಂಡಿಂಗ್ ಬಳಿಕ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಹೊರತೆಗೆದು ಸ್ಥಳಾಂತರಿಸಲಾಗಿದ್ದು, ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳ ಮತ್ತು ವಿಮಾನ ನಿಲ್ದಾಣದ ತುರ್ತು ಸೇವಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆಗೆ ಮುಂದಾಗಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿದರು.
ಈ ವಿಮಾನವು ಮೂಲತಃ ಟರ್ಕಿಯ ಕೊರೆಂಡನ್ ಏರ್ಲೈನ್ಸ್ಗೆ ಸೇರಿದದ್ದಾಗಿದ್ದು, ಇಂಡಿಗೋ ಕಂಪನಿಯು ಅದನ್ನು ಲೀಸ್ ಆಧಾರದಲ್ಲಿ ಬಳಸುತ್ತಿತ್ತು. ತಾಂತ್ರಿಕ ದೋಷದ ನಿಖರ ಕಾರಣವನ್ನು ಪತ್ತೆಹಚ್ಚಲು ತಜ್ಞರು ಪರಿಶೀಲನೆ ಆರಂಭಿಸಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.





