ಬೆಂಗಳೂರು: ಹೈದರಾಬಾದ್ನಿಂದ ಹುಬ್ಬಳ್ಳಿಗೆ ಹೊರಟಿದ್ದ ಫ್ಲೈ ೯೧ (Fly91) ವಿಮಾನವೊಂದು ಭೀಕರ ಟರ್ಬುಲೆನ್ಸ್ಗೆ (ಗಾಳಿಯ ಒತ್ತಡದ ಏರುಪೇರು) ಸಿಲುಕಿ ಪ್ರಯಾಣಿಕರು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಘಟನೆ ನಿನ್ನೆ ನಡೆದಿದೆ. ಸಂಕಷ್ಟದ ಸಮಯದಲ್ಲಿ ಪೈಲಟ್ ಸಮಯಪ್ರಜ್ಞೆ ಮೆರೆದರೆ, ವಿಮಾನ ನಿಲ್ದಾಣದ ಸಿಬ್ಬಂದಿಯ ಅಮಾನವೀಯ ವರ್ತನೆ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಆ ೧೫ ನಿಮಿಷಗಳ ಕಾಲ ಮೃತ್ಯು ಕಣ್ಣೆದುರಿಗಿತ್ತು:
ನಿನ್ನೆ ಮಧ್ಯಾಹ್ನ ೩ ಗಂಟೆಗೆ ಹೊರಟ ವಿಮಾನವು ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ಸುಮಾರು ೧೫ ನಿಮಿಷಗಳ ಕಾಲ ತೀವ್ರವಾಗಿ ಅಲುಗಾಡತೊಡಗಿತು. ಟರ್ಬುಲೆನ್ಸ್ ಎಷ್ಟಿತ್ತೆಂದರೆ, ಪ್ರಯಾಣಿಕರು ಬದುಕುವ ಭರವಸೆಯನ್ನೇ ಕೈಬಿಟ್ಟಿದ್ದರು. ಕೆಲವರು ತಮ್ಮ ಕುಟುಂಬದವರಿಗೆ ‘ಕೊನೆಯ ಸಂದೇಶ’ ಕಳುಹಿಸಲು ವಿಡಿಯೋ ರೆಕಾರ್ಡ್ ಮಾಡತೊಡಗಿದರೆ, ಇನ್ನು ಕೆಲವರು ಕಿರುಚಾಡುತ್ತಿದ್ದರು. ಅಲುಗಾಟದ ತೀವ್ರತೆಗೆ ಮಗುವೊಂದು ಕೈಯಿಂದ ಕೆಳಗೆ ಬಿದ್ದ ಘಟನೆಯೂ ನಡೆಯಿತು. ಈ ವೇಳೆ ಗಗನಸಖಿಯರೂ ಕೂಡ ಭಯದಿಂದ ಕಣ್ಣೀರಿಟ್ಟಿದ್ದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿತ್ತು.
೪ ಗಂಟೆಗಳ ಕಾಲ ಆಕಾಶದಲ್ಲೇ ಅಲೆದಾಟ:
ಹುಬ್ಬಳ್ಳಿಯಲ್ಲಿ ಇಳಿಯಲು ಸಾಧ್ಯವಾಗದ ಕಾರಣ ಪೈಲಟ್ ವಿಮಾನವನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತಿರುಗಿಸಿದರು. ಸುಮಾರು ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ಸುತ್ತಾಡಿದ ವಿಮಾನವು ಕೊನೆಗೆ ರಾತ್ರಿ ೭ ಗಂಟೆಯ ಸುಮಾರಿಗೆ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಜೀವ ಉಳಿಸಿದ ಪೈಲಟ್ಗೆ ಪ್ರಯಾಣಿಕರು ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದರು.
ಫ್ಲೈ ೯೧ ಸಿಬ್ಬಂದಿಯ ಅಸಭ್ಯ ವರ್ತನೆ:
ವಿಮಾನ ಸುರಕ್ಷಿತವಾಗಿ ಇಳಿದ ನಂತರ ಪ್ರಯಾಣಿಕರಿಗೆ ಸಮಾಧಾನ ಹೇಳಬೇಕಿದ್ದ ಫ್ಲೈ ೯೧ ಏರ್ಲೈನ್ಸ್ನ ನೆಲದ ಸಿಬ್ಬಂದಿ (Ground Staff) ಅತ್ಯಂತ ಉದ್ಧಟತನದಿಂದ ವರ್ತಿಸಿದ್ದಾರೆ. “ಇದೇ ವಿಮಾನ ಮತ್ತೆ ಹುಬ್ಬಳ್ಳಿಗೆ ಹೋಗುತ್ತದೆ, ಹತ್ತುವವರು ಹತ್ತಿ ಇಲ್ಲದಿದ್ದರೆ ಇಳಿದು ಹೋಗಿ” ಎಂದು ಅಹಂಕಾರದ ಧಾಟಿಯಲ್ಲಿ ಮಾತನಾಡಿದ್ದಾರೆ. ಸಾವಿನ ದವಡೆಯಿಂದ ಬಂದಿದ್ದ ಪ್ರಯಾಣಿಕರಿಗೆ ಕನಿಷ್ಠ ಸೌಜನ್ಯವನ್ನೂ ತೋರಿಸದ ಸಿಬ್ಬಂದಿಯ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. “ಮಾನವೀಯತೆ ಇಲ್ಲದ ಇಂತಹ ಏರ್ಲೈನ್ಸ್ನಲ್ಲಿ ನಾವು ಮತ್ತೆ ಹೇಗೆ ಧೈರ್ಯವಾಗಿ ಪ್ರಯಾಣಿಸಲಿ?” ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ.





