ನಂಜನಗೂಡು: ತಾಲ್ಲೂಕಿನ ಹೆಮ್ಮರಗಾಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ‘ಗುರುವಂದನಾ ಮತ್ತು ಸ್ನೇಹ ಸಮ್ಮಿಲನ’ ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ನೆರವೇರಿತು.20 ವರ್ಷಗಳ(7300) ದಿನಗಳ ನಂತರ ಒಂದೆಡೆ ಸೇರಿದ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ಸವಿ ನೆನಪುಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಅಂದಿನ ಕಾಲದಲ್ಲಿ ವಿದ್ಯೆ ಕಲಿಸಿದ, ಜೈ ಕುಮಾರಸ್ವಾಮಿ(ಜೆಕೆಎಸ್) ಸದಾಶಿವ(ಜಿಸಿಎಸ್) ಬಸವಣ್ಣ(ಬಿಎಂಬಿ) ಕುಮಾರಸ್ವಾಮಿ (ಕೆಎಸ್) ವೆಂಕಟೇಶ್(ವಿಕೆ) ಭೈರವೇಶ್ವರ, ಅಟೆಂಡರ್ ಮಹದೇವು ಸೇರಿದಂತೆ ಸುಮಾರು 8 ಮಂದಿ ಹಿರಿಯ ಶಿಕ್ಷಕರನ್ನು ಆತ್ಮೀಯವಾಗಿ ಸನ್ಮಾನಿಸಿ, ಗುರುವಂದನೆ ಸಲ್ಲಿಸಲಾಯಿತು. ತಮ್ಮ ಶಿಷ್ಯಂದಿರು ಇಂದು ಸಮಾಜದ ವಿವಿಧ ಸ್ತರಗಳಲ್ಲಿ ಗುರುತಿಸಿಕೊಂಡಿರುವುದನ್ನು ಕಂಡು ಶಿಕ್ಷಕರು ಭಾವುಕರಾದರು.
ಈ ಸಂದರ್ಭದಲ್ಲಿ 120ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಕಳೆ ನೀಡಿದರು.ಕಾರ್ಯಕ್ರಮದ ಉದ್ದಕ್ಕೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಪ್ರೀತಿ, ಗೌರವದ ಮಧುರ ಬಾಂಧವ್ಯ ಮೇಳೈಸಿತ್ತು. ಶಿಕ್ಷಕರು ವಿದ್ಯಾರ್ಥಿಗಳನ್ನು ಹರಸುತ್ತಾ ಆಡಿದ ಮಾತುಗಳು ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದವು. ಇಡೀ ವಾತಾವರಣವು ಭಾವೋದ್ವೇಗ ಹಾಗೂ ಸಂತಸದಿಂದ ಕೂಡಿತ್ತು.ಸನ್ಮಾನ ಸ್ವೀಕರಿಸಿದ ಹಿರಿಯ ಶಿಕ್ಷಕರು ಮಾತನಾಡಿ, “ವಿದ್ಯಾರ್ಥಿಗಳು ಇಷ್ಟು ವರ್ಷಗಳ ನಂತರವೂ ನಮ್ಮನ್ನು ನೆನಪಿಟ್ಟುಕೊಂಡು ಗೌರವಿಸುತ್ತಿರುವುದು ಜೀವನದ ಅತ್ಯಂತ ಹೆಮ್ಮೆಯ ಕ್ಷಣ,” ಎಂದು ಹರ್ಷ ವ್ಯಕ್ತಪಡಿಸಿದರು.
ಹಳೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದರು.ಒಟ್ಟಾರೆಯಾಗಿ ಈ ಸ್ನೇಹ ಸಮ್ಮಿಲನವು ಹಳೆಯ ನೆನಪುಗಳನ್ನು ಮೆಲುಕು ಹಾಕುವುದರ ಜೊತೆಗೆ, ಗುರು-ಶಿಷ್ಯರ ಪರಂಪರೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಯಿತು. ಕಾರ್ಯಕ್ರಮ ಆಯೋಜಿಸಿದ ಪತ್ರಕರ್ತ ಮಹೇಶ್ ಕೆಬ್ಬೆ,ವಿಕಾಸ್, ಶೃತಿ,ಸೋಮಣ್ಣ,ರವಿಶಂಕರ್, ಸೇರಿದಂತೆ ಕೆಲವರಿಗೆ ಸಹಪಾಠಿಗಳೇ ಸನ್ಮಾನಿಸಿದ್ದು ಅರ್ಥಪೂರ್ಣವಾಗಿತ್ತು.




