ನೇಪಾಳದ ರಸುವಾ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಹಠಾತ್ ಭೀಕರ ಪ್ರವಾಹಕ್ಕೆ ಹಿಮಾಲಯ ಪ್ರದೇಶದಲ್ಲಿ ಚೀನಾ ಕೈಗೊಂಡಿರುವ ಮೂಲಸೌಕರ್ಯ ನಿರ್ಮಾಣ ಚಟುವಟಿಕೆಗಳೇ ಮುಖ್ಯ ಕಾರಣ ಎಂದು ‘ನೇಪಾಳ ಕರೆಸ್ಪಾಂಡೆನ್ಸ್’ ಎಂಬ ಪತ್ರಕರ್ತರ ಗುಂಪು ಗಂಭೀರ ಆರೋಪ ಮಾಡಿದೆ. ಚೀನಾ-ನೇಪಾಳ ಗಡಿಯ ಸೂಕ್ಷ್ಮ ಹಿಮನದಿ ಪ್ರದೇಶಗಳಲ್ಲಿ ಚೀನಾ ನಡೆಸುತ್ತಿರುವ ಅವ್ಯಾಹತ ಕಾಮಗಾರಿಗಳು ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾನಿಗೊಳಿಸಿದ್ದು, ಇದು ಪುನರಾವರ್ತಿತ ಹಿಮಪಾತ ಹಾಗೂ ದಿಢೀರ್ ಪ್ರವಾಹಗಳಿಗೆ ದಾರಿಮಾಡಿಕೊಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.
ಟಿಬೆಟ್ನ ಗೈರಾಂಗ್ ಪಟ್ಟಣದ ಬಳಿ ಈ ಪ್ರವಾಹದ ಮೂಲವಿದೆ ಎಂದು ಹೇಳಲಾಗಿದ್ದು, ಕ್ಸಿನ್ಜಿಯಾಂಗ್-ಟಿಬೆಟ್ ವಲಯ ಹಾಗೂ ಗಡಿ ಪ್ರದೇಶಗಳಲ್ಲಿ ಚೀನಾ ನಿರ್ಮಿಸುತ್ತಿರುವ ‘ಕ್ಸಿಯಾಕಾಂಗ್ ವಸಾಹತುಗಳು’ ಈ ಪರಿಸರ ವಿಕೋಪಕ್ಕೆ ಕಾರಣವಾಗಿವೆ ಎಂದು ‘ನೇಪಾಳ ಕರೆಸ್ಪಾಂಡೆನ್ಸ್’ ತನ್ನ ಎಕ್ಸ್ (ಟ್ವಿಟರ್) ಪೋಸ್ಟ್ನಲ್ಲಿ ಉಲ್ಲೇಖಿಸಿದೆ. ಟಿಬೆಟ್ನ ಕೆರುಂಗ್ ಭಾಗದಲ್ಲಿ ಚೀನಾ ಅವಿಚಾರಿತವಾಗಿ ಬೆಟ್ಟಗಳನ್ನು ಕಡಿದು, ತ್ರಿಶೂಲಿ ನದಿಯ ನೈಸರ್ಗಿಕ ಹರಿವಿನ ಹಾದಿಯನ್ನೇ ಬದಲಾಯಿಸಿದೆ ಎಂಬ ದೂರು ಕೇಳಿಬಂದಿದೆ.
ಅಲ್ಲದೆ, ರಸುವಾ ಗಡಿಯ ಎರಡು ನದಿಗಳ ಸಂಗಮ ಕ್ಷೇತ್ರದಲ್ಲಿ ಕೆರುಂಗ್ ಬಂದರನ್ನು ನಿರ್ಮಿಸಲಾಗಿದ್ದು, ಈ ಬೃಹತ್ ರಚನೆಯು ನೇಪಾಳದ ಕಡೆಗೆ ಹರಿಯುವ ನೀರಿನ ವೇಗವನ್ನು ಹೆಚ್ಚಿಸಿ ಹಠಾತ್ ಪ್ರವಾಹದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಚೀನಾದ ಈ ಯೋಜನಾರಹಿತ ಕಾಮಗಾರಿಗಳನ್ನು “ಪರಿಸರದ ವಿರುದ್ಧ ಎಸಗಿದ ಉದ್ದೇಶಪೂರ್ವಕ ಅಪರಾಧ” ಎಂದು ಕರೆದಿರುವ ಪತ್ರಕರ್ತರ ಒಕ್ಕೂಟ, ನೇಪಾಳ ಸರ್ಕಾರವು ಬೀಜಿಂಗ್ ಆಡಳಿತದೊಂದಿಗೆ ಈ ವಿಷಯವನ್ನು ಗಂಭೀರವಾಗಿ ಪ್ರಸ್ತಾಪಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದೆ.





