ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಹಾಡಿಯಲ್ಲಿ ಚಿರತೆ ಏಕಾಏಕಿ ದಾಳಿ ನಡೆಸಿದ್ದು ಕುರಿ ಮೇಯಿಸುತ್ತಿದ್ದ ಆದಿವಾಸಿ ಮಹಿಳೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಜೂನ್ 24,ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಾಡು ಪ್ರಾಣಿಗಳ ಉಪಟಳ ಮಿತಿ ಮೀರಿದ್ದು, ಕಾಡಂಚಿನ ಗ್ರಾಮಗಳ ಜನರ ಬದುಕೇ ದುಸ್ತರವಾಗಿ ಮಾರ್ಪಟ್ಟಿದೆ. ಜನವಸತಿ ಪ್ರದೇಶಗಳಿಗೆ ಮೇಲಿಂದ ಮೇಲೆ ವನ್ಯ ಜೀವಿಗಳು ಲಗ್ಗೆ ಇಡುತ್ತಿರವ ಕಾರಣಕ್ಕೆ ಜೀವ ಭಯದಲ್ಲಿಯೇ ಜನ ಬದುಕುವಂತಾಗಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದ ಆನೆಹೊಲ ಹಾಡಿಯಲ್ಲಿ ಏಕಾಏಕಿ ಚಿರತೆ ದಾಳಿ ನಡೆಸಿದ್ದು, ಕುರಿ ಮೇಯಿಸುತ್ತಿದ್ದ ಆದಿವಾಸಿ ಮಹಿಳೆ ಪವಾಡ ಎಂಬಂತೆ ಜೀವ ಉಳಿಸಿಕೊಂಡಿದ್ದಾಳೆ.
ಕಳೆದ 6 ತಿಂಗಳಿಂದ ಮಲೆ ಮಹದೇಶ್ವರ ಬೆಟ್ಟದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಚಿರತೆ ದಾಳಿ ಪ್ರಕರಣಗಳು ನಡೆಯುತ್ತಿವೆ. ಘಟನೆಗಳಿಂದ ಹಾಡಿಯ ನಿವಾಸಿಗಳು ಮತ್ತು ಮಾದಪ್ಪನ ಭಕ್ತರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಮಲೆ ಮಹದೇಶ್ವರ ವನ್ಯಜೀವಿಧಾಮ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅರಣ್ಯ ಸಿಬ್ಬಂದಿಗೆ ಚೆಲ್ಲಾಟ ಆದಿವಾಸಿ ಸೋಲಿಗರಿಗೆ ಪ್ರಾಣ ಸಂಕಟ!
ಮಲೆ ಮಹದೇಶ್ವರ ವನ್ಯಜೀವಿಧಾಮ ಅರಣ್ಯ ಸಿಬ್ಬಂದಿ ನಡೆಗೆ ಭಾರಿ ಆಕ್ರೋಶ ಕೂಡ ಕೇಳಿಬಂದಿದೆ. ಬೇರೆಡೆ ಸೆರೆ ಹಿಡಿದ ಚಿರತೆಯನ್ನ ಪಾಲಾರ್ ಕಾಡಿಗೆ ತಂದು ಬಿಡಲಾಗುತ್ತಿದೆ. ಮಾದಪ್ಪನ ಬೆಟ್ಟದಲ್ಲಿ ಪಾದಯಾತ್ರಿಯನ್ನ ಕೊಂದು ಹಾಕಿದ್ದ ನರಭಕ್ಷಕ ಚಿರತೆಯನ್ನು ಸೆರೆ ಹಿಡಿದು ಕಾಲರ್ ಐಡಿ ಅಳವಡಿಸಿದ್ದ ಅರಣ್ಯ ಸಿಬ್ಬಂದಿ ಅದನ್ನು ಮತ್ತೆ ಪಾಲಾರ್ ಹಾಗೂ ಪೊನ್ನಾಚಿ ಕಾಡಿನ ಮಧ್ಯೆ ಬಿಟ್ಟಿದ್ದರು. ಇದೇ ಕಾಡು ಪ್ರದೇಶದಲ್ಲಿ ಹಾಡಿಗಳಿದ್ದು, ಹಸು, ಮೇಕೆ ಹಾಗೂ ಜಾನುವಾರುಗಳ ಮೇಲೆ ಪದೇ ಪದೆ ಚಿರತೆ ದಾಳಿ ನಡೆಯುತ್ತಿದೆ. ಪೊನ್ನಾಚಿ ಬಳಿಯ ಕಕ್ಕೆ ಹೊಲ ಗ್ರಾಮದ ಇಟ್ಟಿದ್ದ ಪಂಜರಕ್ಕೆ ಬಿದ್ದ ಚಿರತೆ ಕತ್ತಿನಲ್ಲಿಯೂ ಕಾಲರ್ ಐಡಿ ಪತ್ತೆಯಾಗಿರೋದು ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.




