ಇಸ್ಲಾಮಾಬಾದ್: ಭಾರತದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆಯಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಕುಟುಂಬದ 14 ಸದಸ್ಯರು ಸಾ*ನ್ನಪ್ಪಿದ್ದರು. ಆ ಆಘಾತದಿಂದ ಇನ್ನೂ ಹೊರಬರದಿದ್ದ ಜೈಶ್ ಮುಖ್ಯಸ್ಥನಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಪಾಕಿಸ್ತಾನದ ಬಹವಾಲ್ಪುರ್ನಲ್ಲಿ ಮಸೂದ್ ಅಜರ್ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ನಿಗೂಢವಾಗಿ ಸಾ*ನ್ನಪ್ಪಿದ್ದಾನೆ. ಆದರೆ ಸಾ*ನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಬಹವಾಲ್ಪುರ್ ಜೈಶ್-ಎ-ಮೊಹಮ್ಮದ್ ಉಗ್ರರ ಪ್ರಮುಖ ಕೇಂದ್ರವಾಗಿದ್ದು, ಇದೇ ಊರಿನಲ್ಲಿ ಅನ್ವರ್ ಸಾ*ನ್ನಪ್ಪಿದ್ದಾನೆ. ಈ ಬಗ್ಗೆ ಮಾಹಿತಿ ಜೈಶ್ ಸಂಘಟನೆಯ ಅಧಿಕೃತ ಟೆಲಿಗ್ರಾಮ್ ಚಾನೆಲ್ಗಳಲ್ಲಿ ಪ್ರಕಟವಾಗಿದೆ. ಮಾ.30ರ ತಡರಾತ್ರಿ ಬಹವಾಲ್ಪುರ್ನ ಜಾಮಿಯಾ ಉಸ್ಮಾನ್-ಒ-ಅಲಿನಲ್ಲಿ ಅಂತ್ಯಕ್ರಿಯೆ ನೆರವೇರಿದರೂ, ಅದರಲ್ಲಿ ಮಸೂದ್ ಅಜರ್ ಭಾಗವಹಿಸಿಲ್ಲ ಎಂಬುದು ಗಮನಾರ್ಹವಾಗಿದೆ.
ಅನ್ವರ್ ಸಾ* ಹೇಗೆ ಸಂಭವಿಸಿತು ಎಂಬುದು ಇನ್ನೂ ನಿಗೂಢವಾಗಿದ್ದು, ಯಾವುದೇ ಅನಾರೋಗ್ಯದ ಪುರಾವೆಗಳೂ ಇಲ್ಲ. ಹೀಗಾಗಿ ದಿಢೀರ್ ಸಾ*ಮತ್ತು ಅಂತ್ಯಕ್ರಿಯೆಗೆ ಅಜರ್ ಗೈರಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೊಹಮ್ಮದ್ ತಾಹಿರ್ ಅನ್ವರ್ ಜೈಶ್-ಎ-ಮೊಹಮ್ಮದ್ ಸಂಘಟನೆಯ ಪ್ರಮುಖ ವ್ಯಕ್ತಿಯಾಗಿದ್ದು, ಸಶಸ್ತ್ರ ಪಡೆಗಳ ಕಮಾಂಡರ್ ಆಗಿಯೂ ಕಾರ್ಯನಿರ್ವಹಿಸಿದ್ದ. ಅಲ್ಲದೆ ಬಹವಾಲ್ಪುರ್ನ ‘ಮರ್ಕಝ್ ಉಸ್ಮಾನ್-ಒ-ಅಲಿ’ ತರಬೇತಿ ಕೇಂದ್ರದ ಮುಖ್ಯಸ್ಥನಾಗಿದ್ದನು. ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ ವ್ಯವಸ್ಥೆಯನ್ನೂ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.
ಈಗಾಗಲೇ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಮಸೂದ್ ಅಜರ್ ಮತ್ತೊಬ್ಬ ಸಹೋದರ ಅಬ್ದುಲ್ ರೌಫ್ ಅಜರ್ ಹತ್ಯೆಯಾಗಿದ್ದು, ಇದೀಗ ಮತ್ತೋರ್ವ ಸಹೋದರನನ್ನು ಕಳೆದುಕೊಂಡಿದ್ದಾನೆ. ಒಟ್ಟಿನಲ್ಲಿ, ಜೈಶ್ ಮುಖ್ಯಸ್ಥನ ಕುಟುಂಬಕ್ಕೆ ಆಘಾತಗಳ ಸರಮಾಲೆ ಮುಂದುವರಿದಂತಾಗಿದೆ.





