ಭಾರತಕ್ಕೆ ಮರಳಿ ಬಂದ ಗಗನಯಾತ್ರಿ ಶುಭಾಂಶು ಶುಕ್ಲಾ

ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಐತಿಹಾಸಿಕ ಭೇಟಿ ನೀಡಿದ ಬಳಿಕ ಇಂದು ಮುಂಜಾನೆ ತಾಯ್ನಾಡಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಕೇಂದ್ರ ಸಚಿವ ಜಿತೇಂದ್ರ ಸಿಂಗ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಶುಕ್ಲಾ ಅವರ ಸಹಾಯಕ ಗಗನಯಾತ್ರಿ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಕೂಡ ತಾಯ್ನಾಡಿಗೆ ಮರಳಿದ್ದು, ಅವರಿಗೂ ಸ್ವಾಗತ ಕೋರಲಾಯಿತು.

ಕಳೆದ ಒಂದು ವರ್ಷದಿಂದ ಶುಭಾಂಶು ಶುಕ್ಲಾ ಅವರು ಅಮೆರಿಕದಲ್ಲಿದ್ದು, ಐಎಸ್​ಎಸ್​ಗೆ ಆಕ್ಸಿಯಂ-4 ಮಿಷನ್​ ತರಬೇತಿ ಪಡೆದಿದ್ದರು. ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಯಶಸ್ವಿ ಪ್ರಯಾಣ ಕೈಗೊಂಡಿದ್ದರು.

ಶುಕ್ಲಾ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ತಮ್ಮ ತವರೂರು ಲಕ್ನೋಗೆ ಪ್ರಯಾಣಿಸುವ ಸಾಧ್ಯತೆಯಿದೆ. ನಂತರ ಆಗಸ್ಟ್ 22 ಹಾಗೂ 23 ರಂದು ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ರಾಜಧಾನಿಗೆ ಮರಳುವ ನಿರೀಕ್ಷೆಯಿದೆ.

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, “ಭಾರತದ ಬಾಹ್ಯಾಕಾಶ ವೈಭವ ದೇಶದ ಮಣ್ಣನ್ನು ಸ್ಪರ್ಶಿಸಿದೆ. ಭಾರತ ಮಾತೆಯ ಪುತ್ರ ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು ಬೆಳಗ್ಗಿನ ಜಾವ ದೆಹಲಿಗೆ ಬಂದಿಳಿದರು. ಅವರೊಂದಿಗೆ ಮತ್ತೊಬ್ಬ ಸಮಾನ ಸಾಧನೆ ಮಾಡಿದ, ಭಾರತದ ಮೊದಲ ಮಾನವ ಗಗನಯಾನಕ್ಕೆ ಆಯ್ಕೆಯಾದ ಗಗನಯಾತ್ರಿಗಳಲ್ಲಿ ಒಬ್ಬರಾದ ಗ್ರೂಪ್​ ಕ್ಯಾಪ್ಟನ್​ ಪ್ರಶಾಂತ್​ ಬಾಲಕೃಷ್ಣನ್​ ನಾಯರ್ ಕೂಡ ಭಾರತಕ್ಕೆ ಮರಳಿದ್ದಾರೆ. ಬಾಲಕೃಷ್ಣ​ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮಿಷನ್​ಗೆ ಭಾರತದ ನಿಯೋಜಿತ ಬ್ಯಾಕಪ್​ ಆಗಿದ್ದರು” ಎಂದು ತಿಳಿಸಿದ್ದಾರೆ.

ಶನಿವಾರ, ಭಾರತಕ್ಕೆ ಹಿಂತಿರುಗಲು ವಿಮಾನದಲ್ಲಿ ಕುಳಿತಿದ್ದ ಶುಭಾಂಶು ಶುಕ್ಲಾ ಅವರು ನಗುಮೊಗದಲ್ಲಿರುವ ಫೋಟೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದರು. “ಭಾರತಕ್ಕೆ ಹಿಂತಿರುಗಲು ವಿಮಾನದಲ್ಲಿ ಕುಳಿತಿದ್ದು, ಈ ಸಮಯದಲ್ಲಿ ನನ್ನ ಹೃದಯದಲ್ಲಿ ಹಲವು ಭಾವನೆಗಳು ಕುಣಿದಾಡುತ್ತಿವೆ. ಈ ಮಿಷನ್​ಗಾಗಿ ಕಳೆದ ವರ್ಷ ನನ್ನ ಸ್ನೇಹಿತರು ಮತ್ತು ಕುಟುಂಬವಾಗಿದ್ದ ಅದ್ಭುತ ಜನರ ಗುಂಪನ್ನು ಬಿಟ್ಟು ಹೋಗಿದ್ದಕ್ಕೆ ನನಗೆ ದುಃಖವಾಗುತ್ತದೆ. ಇದೇ ವೇಳೆ, ಮಿಷನ್​ ನಂತರ ಮೊದಲ ಬಾರಿಗೆ ನನ್ನ ಎಲ್ಲಾ ಸ್ನೇಹಿತರು, ಕುಟುಂಬ ಮತ್ತು ದೇಶದ ಪ್ರತಿಯೊಬ್ಬರನ್ನು ಭೇಟಿಯಾಗಲು ನಾನು ಉತ್ಸುಕನಾಗಿದ್ದೇನೆ. ಇದು ಜೀವನಕ್ಕೂ ಅನ್ವಯಿಸುತ್ತದೆ ಎಂದು ನಾನು ನಂಬುತ್ತೇನೆ” ಎಂದು ಪೋಸ್ಟ್​ ಹಂಚಿಕೊಂಡಿದ್ದರು.

ಜೂನ್ 25ರಂದು ಅಮೆರಿಕದಿಂದ ಐಎಸ್‌ಎಸ್‌ಗೆ ಆಕ್ಸಿಯಮ್-4 ಮಿಷನ್​ಗೆ ತೆರಳುವ ಮೊದಲು ಅವರ ಪ್ಲೇ ಲಿಸ್ಟ್​ನಲ್ಲಿದ್ದ ಸ್ವದೇಶ್‌ ಬಾಲಿವುಡ್ ಸಿನಿಮಾದ ಹಾಡನ್ನು ನೆನಪಿಸಿಕೊಳ್ಳುತ್ತಾ, “ದಿನದ ಕೊನೆಯಲ್ಲಿ ‘ಯುನ್ ಹಿ ಚಲಾ ಚಲ್ ರಹಿ – ಜೀವನ್ ಗಾಡಿ ಹೈ ಸಮಯ್ ಪಹಿಯಾ'” ಎಂದು ಶುಕ್ಲಾ ಬರೆದುಕೊಂಡಿದ್ದಾರೆ. ಶುಕ್ರವಾರ ಹೂಸ್ಟನ್​ನ ಭಾರತೀಯ ಕಾನ್ಸುಲೇಟ್​ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶುಕ್ಲಾ ಹಾಗೂ ಅವರ ಸಹಾಯಕ ಗಗನಯಾತ್ರಿ ಪ್ರಶಾಂತ್​ ನಾಯರ್​ ಭಾಗವಹಿಸಿದ್ದರು.

ಕೆಂಫು ಕೋಟೆಯಲ್ಲಿ ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, “ಭಾರತ ತನ್ನದೇ ಆದ ಬಾಹ್ಯಾಕಾಶ ಕೇಂದ್ರವನ್ನು ಅಭಿವೃದ್ಧಿಪಡಿಸುತ್ತಿದೆ. ನಮ್ಮ ಗ್ರೂಪ್​ ಕ್ಯಾಪ್ಟನ್​ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನದಿಂದ ಮರಳಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ಭಾರತಕ್ಕೆ ವಾಪಸ್​ ಆಗಲಿದ್ದಾರೆ” ಎಂದು ಹೇಳಿದ್ದರು.

ಶುಭಾಂಶು ಶುಕ್ಲಾ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ದೆಹಲಿ ಸಿಎಂ ರೇಖಾ ಗುಪ್ತಾ ಹಾಗೂ ಕೇಂದ್ರ ಸಚಿವ ಜಿತೇಂದ್ರ ಸಿಂಗ್ (PTI)
ಶುಭಾಂಶು ಶುಕ್ಲಾ ಅವರು, ಜೂನ್​ 25ರಂದು ಫ್ಲೋರಿಡಾದಿಂದ ಉಡಾವಣೆಗೊಂಡು, ಜೂನ್​ 26ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್​ ಮಾಡಲಾದ ಆಕ್ಸಿಯಮ್​-4 ಖಾಸಗಿ ಬಾಹ್ಯಾಕಾಶ ಕಾರ್ಯಾಚರಣೆಯ ಭಾಗವಾಗಿದ್ದರು. ಜುಲೈ 15ರಂದು ಮಿಷನ್​ ಮುಗಿಸಿ, ಭೂಮಿಗೆ ವಾಪಸ್​ ಆಗಿದ್ದರು.

ಇತರ ಮೂವರು ಗಗನಯಾತ್ರಿಗಳಾದ ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್​ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಹಾಗೂ ಹಂಗೇರಿಯ ಟಿಬೋರ್ ಕಾಪು ಅವರ ಜೊತೆಗೆ ಶುಕ್ಲಾ 18 ದಿನಗಳ ಮಿಷನ್​ನಲ್ಲಿ ಭಾಗವಹಿಸಿದ್ದರು. ಈ ವೇಳೆ 60ಕ್ಕೂ ಹೆಚ್ಚು ಪ್ರಯೋಗಗಳು ಮತ್ತು 20 ಔಟ್ರೀಚ್ ಸೆಷನ್​ಗಳನ್ನು ಶುಭಾಂಶು ಶುಕ್ಲಾ ನಡೆಸಿದ್ದರು.

Related Posts

ನೇಪಾಳ ಪ್ರವಾಹ: ಕನ್ನಡಿಗರು ಸುರಕ್ಷಿತ, ಧೈರ್ಯ ತುಂಬಿದ ಸಿಎಂ

ನೇಪಾಳ ಹಾಗೂ ಟಿಬೆಟ್ ಗಡಿ ಭಾಗದಲ್ಲಿ ಉಂಟಾಗಿರುವ ಭೀಕರ ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ಮೂಲಸೌಕರ್ಯಗಳಿಗೆ ಅಪಾರ ಹಾನಿಯಾಗಿದೆ. ಈ ನೈಸರ್ಗಿಕ ವಿಕೋಪದ ನಡುವೆ ಸಿಲುಕಿದ್ದ ಕರ್ನಾಟಕದ 3 ಮಂದಿ ಸೇರಿದಂತೆ ಒಟ್ಟು 23 ಭಾರತೀಯರು…

ವಾಹನ ಸವಾರರಿಗೆ ಬಿತ್ತು ಬೆಲೆ ಏರಿಕೆ ಬಿಸಿ: ಕರ್ನಾಟಕದಲ್ಲಿ PUC ಮಾಲಿನ್ಯ ತಪಾಸಣೆ ದರ ಹೆಚ್ಚಳ!

ಅಗತ್ಯ ವಸ್ತುಗಳು ಹಾಗೂ ಇಂಧನ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಕರ್ನಾಟಕದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಂದು ಆರ್ಥಿಕ ಹೊರೆ ನೀಡಿದೆ. ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUCC) ಪಡೆಯಲು ಪಾವತಿಸಬೇಕಾದ ಶುಲ್ಕವನ್ನು ಸಾರಿಗೆ ಇಲಾಖೆಯು ಪರಿಷ್ಕರಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!