ನೇಪಾಳ ಹಾಗೂ ಟಿಬೆಟ್ ಗಡಿ ಭಾಗದಲ್ಲಿ ಉಂಟಾಗಿರುವ ಭೀಕರ ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ಮೂಲಸೌಕರ್ಯಗಳಿಗೆ ಅಪಾರ ಹಾನಿಯಾಗಿದೆ. ಈ ನೈಸರ್ಗಿಕ ವಿಕೋಪದ ನಡುವೆ ಸಿಲುಕಿದ್ದ ಕರ್ನಾಟಕದ 3 ಮಂದಿ ಸೇರಿದಂತೆ ಒಟ್ಟು 23 ಭಾರತೀಯರು ಪ್ರಸ್ತುತ ಸುರಕ್ಷಿತವಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಖಚಿತಪಡಿಸಿದೆ. ಅಲ್ಲದೆ, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಮೂಲದ 12 ಮಂದಿ ಪ್ರವಾಸಿಗರೂ ಕ್ಷೇಮವಾಗಿದ್ದು, ಶೀಘ್ರದಲ್ಲೇ ಸೋನೌಲಿ ಗಡಿ ತಲುಪಲಿದ್ದಾರೆ. ಅಲ್ಲಿಂದ ಅವರನ್ನು ತಾಯ್ನಾಡಿಗೆ ಕರೆತರಲು ಸೂಕ್ತ ಸಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ.
ಸಂತ್ರಸ್ತರ ಯೋಗಕ್ಷೇಮವನ್ನು ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ನಿಕಟವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವ ಕನ್ನಡಿಗರ ಸ್ಥಳ ಹಾಗೂ ಸಂಪರ್ಕ ವಿವರಗಳನ್ನು ಸಂಗ್ರಹಿಸಲು ರಾಜ್ಯ ಸರ್ಕಾರ ವಿಶೇಷ ನಮೂನೆಯನ್ನು ಸಿದ್ಧಪಡಿಸಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಮತ್ತು ದೆಹಲಿಯ ಕರ್ನಾಟಕ ಭವನದ ಅಧಿಕಾರಿಗಳು 24 ಗಂಟೆಯೂ ಕಾರ್ಯಾಚರಿಸುತ್ತಿದ್ದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಹಾಗೂ ಕಠ್ಮಂಡು ಮತ್ತು ಬೀಜಿಂಗ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸುತ್ತಿದ್ದಾರೆ.
ಇದೇ ವೇಳೆ, ದೆಹಲಿಯಿಂದಲೇ ಸಂಕಷ್ಟದಲ್ಲಿದ್ದ ಮಲ್ಲಿನಾಥ್ ಎಂಬ ಕನ್ನಡಿಗನಿಗೆ ವಿಡಿಯೋ ಕರೆ ಮಾಡಿದ ಮುಖ್ಯಮಂತ್ರಿಗಳು, “ಸರ್ಕಾರ ನಿಮ್ಮೊಂದಿಗಿದೆ, ಯಾರೂ ಆತಂಕ ಪಡಬೇಡಿ ಹಾಗೂ ಪ್ರಸ್ತುತ ಇರುವ ಸುರಕ್ಷಿತ ಸ್ಥಳದಿಂದ ಹೊರಬರಲು ಸಾಹಸ ಮಾಡಬೇಡಿ” ಎಂದು ಧೈರ್ಯ ತುಂಬಿದ್ದಾರೆ. ಸಂಪರ್ಕ ಕಡಿತಗೊಂಡಿರುವ ಉಳಿದ ಕನ್ನಡಿಗರನ್ನು ಪತ್ತೆಹಚ್ಚಿ ರಕ್ಷಿಸುವ ಕಾರ್ಯ ಚುರುಕಿನಿಂದ ಸಾಗಿದೆ.




